ಕೊಪ್ಪ: ‘ಬಾಹ್ಯ ಅರಿವಿನ ಜತೆಗೆ ಆಂತರಿಕ ಅರಿವಿನಿಂದ ವಿದ್ಯೆ ಕಲಿತಾಗ ಸಾಧನೆ ಸಾಧ್ಯವಾಗುತ್ತದೆ. ಮನಸ್ಸಿನ ನಿಯಂತ್ರಣದಿಂದ ಅಸಾಧ್ಯವಾದುದನ್ನು ಸಾಧಿಸಬಹುದು. ಇದನ್ನು ಗುರುಕುಲ ಶಿಕ್ಷಣ ಪದ್ದತಿಯಲ್ಲಿ ಕಲಿಸಿಕೊಡಲಾಗುತ್ತದೆ’ ಎಂದು ಮಂಗಳೂರಿನ ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಹರಿಹರಪುರ ಸಮೀಪದ ಚಿತ್ರಕೂಟ ಪ್ರಬೋಧಿನಿ ಗುರುಕುಲದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಛಾತ್ರ ಪ್ರವೇಶೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದ ಸ್ವಾಮೀಜಿ, ‘ಇತಿಹಾಸವನ್ನು ಅರಿಯದವ ಇತಿಹಾಸ ಸೃಷ್ಠಿಸಲಾರ. ನಮ್ಮ ಪೂರ್ವಜರ ಸಾಧನೆಗಳ ಬಗ್ಗೆ ಗೌರವಾಧರ ಬೆಳೆಸಬೇಕು. ಹಿರಿಯರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು’ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ‘ನಮ್ಮದ ದೇವ ನಿರ್ಮಿತ ದೇಶ, ವಸುದೈವ ಕುಟುಂಬಕಂ ಎಂದು ಸಾರಿದ ಸಂಸ್ಕೃತಿ ನಮ್ಮದು. ಇಂತಹ ಉದಾತ್ತ ಸಂಸ್ಕತಿಯನ್ನು ರಕ್ಷಿಸುವ ಕಾರ್ಯ ಗುರುಕುಲದ ಮೂಲಕ ನಡೆಯತ್ತಿದೆ. ಆಧ್ಯಾತ್ಮಿಕ ಮತ್ತು ವೈಚಾರಿಕ ಜ್ಞಾನ ಭಂಡಾರದ ರಕ್ಷಣೆಯೇ ಗುರುಕುಲದ ಪರಮಗುರಿ’ ಎಂದರು.
‘ಪರೀಕ್ಷೆಗಳಲ್ಲಿ ಅಂಕಗಳಿಸುವುದೇ ವಿದ್ಯೆ ಅಲ್ಲ. ಕಲಿತವರು ಸಮಾಜಕ್ಕೆ ಹೇಗೆ ಉಪಕಾರಿಗಳಾಗುತ್ತಾರೆ ಎಂಬುದು ಅತ್ಯಂತ ಮುಖ್ಯ. ಸಮಾಜದಲ್ಲಿ ಹಿಂದುತ್ವದ ಜಾಗರಣದ ಕಾರ್ಯವನ್ನು ಆರ್ಎಸ್ಎಸ್ ಸಂಘದ ಶಾಖೆಗಳ ಮೂಲಕ ಕಳೆದ 97 ವರ್ಷಗಳಿಂದ ಮಾಡುತ್ತಾ ಬಂದಿದೆ. ಸಂಘದ ಆಶ್ರಯದಲ್ಲಿ ಕರ್ನಾಟಕದಲ್ಲಿ ಮೂರು ಗುರುಕುಲಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ವಿವರಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 22 ಛಾತ್ರಗಳಿಗೆ ಜಿತಕಾಮಾನಂದ ಸ್ವಾಮೀಜಿ ಪ್ರಥಮ ಪಾಠ ಮಾಡುವ ಮೂಲಕ ಪ್ರವೇಶೋತ್ಸವ ನೆರವೇರಿಸಿದರು. ಪ್ರಬೋಧಿನಿ ಟ್ರಸ್ಟ್ ನಿರ್ವಾಹಕ ವಿಸ್ವಸ್ತ ಎಚ್.ಬಿ.ರಾಜಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರಿನ ಎಚ್.ಸಿ.ಆಶ್ರಯ, ಗುರುಕುಲದ ಉಮೇಶ್ ರಾವ್, ಕೃಷ್ಣಶಾಸ್ತ್ರಿ ಪ್ರಮುಖರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.