ನರಸಿಂಹರಾಜಪುರ: ಕೋಟೆ ಮಾರಿಕಾಂಬ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಮಾರಿಕಾಂಬ ಜಾತ್ರೋತ್ಸವ ಪ್ರಯುಕ್ತ ಮಂಗಳವಾರ ರಾತ್ರಿ ಅದ್ಧೂರಿ ಮೆರವಣಿಗೆ ನಡೆಯಿತು.
ಶಾಸಕ ಟಿ.ರಾಜೇಗೌಡ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪ್ರಭುನಾಸಿಕ್ ಟ್ಯಾಬ್ಲೊ, ಕಿಶೋರ್ ರಾಜ್ ಥಾಯ್ಲೆಂಟ್ ಟೈಗರ್ ಗ್ರೂಪ್ ಕಾಡುಬೆಟ್ಟು ಉಡುಪಿ ಅವರಿಂದ ರೋಡ್ ಶೋ, ದೊಡ್ಡ ನಂದಿ, ಶಿವ ಪಾರ್ವತಿ, ಚಿಕ್ಕ ಹನುಮ, ಕಾಳ ಭೈರವ, ಅಘೋರಿ, ಹನುಮ ಮತ್ತು ವಾನರ ಸೇನೆ, ಡೊಡ್ಡ ಆಮೆ ವಿಶೇಷ ಆಕರ್ಷಣೆಯಾಗಿತ್ತು. ಡಿ.ಜೆ ಕಾರ್ಯಕ್ರಮದಲ್ಲಿ ಯುವಕರು ಕುಣಿದು ಕುಪ್ಪಳಿಸಿದರು. ಸಿಡಿಮದ್ದು ಪ್ರದರ್ಶನ ಆಯೋಜಿಸಲಾಗಿತ್ತು.
ಪಟ್ಟಣದ ಉಮಾಮಹೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಮಾರಿ ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಮಾರಿಕಾಂಬ ದೇವಿಯ ವಿಗ್ರಹವನ್ನು ಗ್ರಾಮ ದೇವತೆಗಳಾದ ಹಳೇಪೇಟೆ ಗುತ್ತ್ಯಮ್ಮ, ಮೇದರ ಬೀದಿ ಅಂತರಘಟ್ಟಮ್ಮ ಹಾಗೂ ಮಡಬೂರು ದಾನಿವಾಸ ದುರ್ಗಾಂಬ ದೇವತೆಗಳೊಂದಿಗೆ ಮೆರವಣಿಗೆಯೊಂದಿಗೆ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ತಂದು ಪ್ರತಿಷ್ಠಾಪಿಸಲಾಯಿತು. ದೇವಿಯ ವಿಗ್ರಹ ಪಟ್ಟಣ ಪಂಚಾಯಿತಿ ವೃತ್ತಕ್ಕೆ ಬರುತ್ತಿದ್ದಂತೆ ವಿಗ್ರಹಕ್ಕೆ ನಾಲಿಗೆ ಇಡಲಾಯಿತು. ಭಕ್ತರು ಜಯಕಾರ ಕೂಗಿದರು. ದೇವಿಯ ಮೆರವಣಿಗೆ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿರುವ ಗದ್ದುಗೆಗೆ ತಲಪುವ ವೇಳೆಗೆ ಬೆಳಗ್ಗಿನ ಜಾವವಾಗಿತ್ತು.
ಕೋಟೆ ಮಾರಿಕಾಂಬ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ, ಕಾರ್ಯಾಧ್ಯಕ್ಷರಾದ ಎಚ್.ಎನ್.ರವಿಶಂಕರ್, ಪ್ರಶಾಂತ್ ಎಲ್.ಶೆಟ್ಟಿ, ಪಿ.ಆರ್.ಸುಕುಮಾರ್, ಸಮಿತಿಯ ಎನ್.ಎಂ.ಕಾರ್ತಿಕ್, ಎಚ್.ಕೆ.ಸುನಿಲ್ ಕುಮಾರ್, ಸಂತೋಷ್, ಎನ್.ಆರ್.ನಾಗರಾಜ್, ಕೆ.ಎಂ.ಸುಂದರೇಶ್, ಎಂ.ಆರ್.ರವಿಶಂಕರ್, ಡಾ.ನಿಶಾಲ್ ವಸಂತಕುಮಾರ್, ಆನೆಗದ್ದೆ ವೆಂಕಟೇಶ್, ಕೆ.ಎಸ್.ಸಂತೋಷ್ ಕುಮಾರ್ ಇದ್ದರು.
ಬುಧವಾರ ದೇವಿಯ ಸನ್ನಿಧಿಯಲ್ಲಿ ತಾಯಿಗೆ ಹರಕೆ–ಕಾಣಿಕೆ ಮಡಲಕ್ಕಿ ಅರ್ಪಿಸಲಾಯಿತು. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಗುರುವಾರ ಬೆಳಿಗ್ಗೆಯಿಂದ ತಾಯಿಗೆ ಪೂಜೆ, ಹರಕೆ–ಕಾಣಿಕೆ, ಮಡಲಕ್ಕಿ ಅರ್ಪಿಸಲು ಅವಕಾಶವಿದೆ. ಮಧ್ಯಾಹ್ನ ಸಾರ್ವಜನಿಕರಿಗೆ ಹರಕೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.