ಶೃಂಗೇರಿ: ಶೃಂಗೇರಿ ಶಾರದಾ ಪೀಠ ಮತ್ತು ಅಡಿಕೆ ಸಂಕಷ್ಟ ಪರಿಹಾರ ಸಮಿತಿ ವತಿಯಿಂದ ಮಲೆನಾಡಿನಲ್ಲಿ ಅಡಿಕೆ ಎಲೆಚುಕ್ಕಿ ರೋಗ ನಿವಾರಣೆಗಾಗಿ ಆಯೋಜಿಸಿರುವ ಕೋಟಿ ಕುಂಕುಮಾರ್ಚನೆ ಶಾರದಾ ದೇವಿಯ ಸನ್ನಿಧಿಯಲ್ಲಿ ಗುರುವಾರ ಆರಂಭವಾಯಿತು.
ಕೋಟಿ ಕುಂಕುಮಾರ್ಚನೆಗೆ ಶಾರದಾ ಮಠದ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿಯವರು ಸಂಕಲ್ಪ ನೇರವರಿಸಿ, ಚಾಲನೆ ನೀಡಿದರು. ಅಡಿಕೆ ಬೆಳೆಗಾರರ ಸಂಕಷ್ಟ ಪರಿಹಾರಕ್ಕಾಗಿ ಬುಧವಾರ ಕೋಟಿ ಕುಂಕುಮಾರ್ಚನೆಯ ಪೂರ್ವಭಾವಿಯಾಗಿ ಸಹಸ್ರ ಮೋದಕ ಗಣಪತಿ ಹೋಮ ನಡೆಯಿತು.
ಕೋಟಿ ಕುಂಕುಮಾರ್ಚನೆಯಲ್ಲಿ ಲಲಿತಾ ಸಹಸ್ರನಾಮ ಹೇಳುತ್ತ ಕುಂಕುಮಾರ್ಚನೆ ಮಾಡಲಾಗುತ್ತಿದೆ. ಮಠದಲ್ಲಿ ಲಿಲಿತಾ ಹೋಮ ಮತ್ತು ಬೆಟ್ಟದ ಮಲಹಾನಿಕರೇಶ್ವರ ಸನ್ನಿಧಿಯಲ್ಲಿ ರುದ್ರಹೋಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಹತ್ತು ದಿನಗಳಲ್ಲಿ 1 ಕೋಟಿ ಲಲಿತಾ ಸಹಸ್ರನಾಮವಳಿಯನ್ನು ಪಠಿಸುತ್ತ ಕುಂಕುಮಾರ್ಚನೆ ನಡೆಯುತ್ತದೆ. 11ನೇ ದಿನ ಲಲಿತಾ ಹೋಮದ ಪೂರ್ಣಾಹುತಿಯ ಮೂಲಕ ಕೋಟಿ ಕುಂಕುಮಾರ್ಚನೆ ಪೂರ್ಣವಾಗಲಿದೆ. ದೇಶದ ನಾನಾ ಭಾಗಗಳಿಂದ ಬಂದಿರುವ 55 ಋತ್ವಿಜರ ನೇತೃತ್ವದಲ್ಲಿ ಕೋಟಿ ಕುಂಕುಮಾರ್ಚನೆ ನಡೆಯುತ್ತಿದೆ.
ಶಾಸಕ ಟಿ.ಡಿ ರಾಜೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ್ ಶೆಟ್ಟಿ, ಮಠದ ಆಡಳಿತಾಧಿಕಾರಿ ವಿ.ಆರ್ ಗೌರಿಶಂಕರ್, ಅಡಿಕೆ ಸಂಕಷ್ಟ ಪರಿಹಾರ ಸಮಿತಿ ಕಾರ್ಯಧ್ಯಕ್ಷ ಮಹೇಶ್ ಹುಲ್ಕುಳಿ, ವಿಜಯರಂಗ ಕೋಟೆತೋಟ, ಪ್ರಭಾಕರ್, ಹೆಬ್ಬಿಗೆ ರಾಮಚಂದ್ರರಾವ್ ಮತ್ತು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.