ಬೀರೂರು(ಕಡೂರು): ಇಲ್ಲಿನ ರಾಷ್ಟ್ರೀಯ ಹೆದ್ದಾರಿ 206ರ ಕುಡ್ಲೂರು ಗೇಟ್ ಬಳಿ ಸೋಮವಾರ ತಡರಾತ್ರಿ ಕೆಎಸ್ಆರ್ಟಿಸಿ ಬಸ್ ಹಾಗೂ ಕ್ಯಾಂಟರ್ ಮುಖಾಮುಖಿ ಡಿಕ್ಕಿಯಾಗಿ, ಕ್ಯಾಂಟರ್ ಚಾಲಕ ಹಾಗೂ ಸಹ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಕ್ಯಾಂಟರ್ ಚಾಲಕ ಧಾರವಾಡದ ಮಹಮ್ಮದ್ ಅಶ್ರಫ್ ಮೆಟಗಾರ(50), ಹುಬ್ಬಳ್ಳಿಯ ಮೋಹನ್ ಮೃತಪಟ್ಟವರು.
ಬೀರೂರು ಕಡೆಯಿಂದ ತರೀಕೆರೆಯತ್ತ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ತರೀಕೆರೆಯಿಂದ ಬೀರೂರು ಕಡೆಯತ್ತ ಬರುತ್ತಿದ್ದ ಸೌಂಡ್ಸಿಸ್ಟಮ್ ಸಲಕರಣೆ ತುಂಬಿದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬಸ್ ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಕ್ಯಾಂಟರ್ನಲ್ಲಿದ್ದ ಪ್ರಯಾಣಿಕ ಗಾಯಾಳು ವಿನಾಯಕ ನೀಡಿದ ದೂರಿನ ಅನ್ವಯ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಚಾಲಕ ಸಂಭಾಜಿ, ನಿರ್ವಾಹಕ ವೆಂಕೋಬ ಕಾತರಕಿ ಸೇರಿ ಬಸ್ನಲ್ಲಿದ್ದ ಹಲವರು ಗಾಯಗೊಂಡಿದ್ದು, ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.