ನರಸಿಂಹರಾಜಪುರ: 37ಕೆರೆಗಳ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿ ಮಾಡದೆ ಬಿಲ್ ನಗದೀಕರಿಸಿಕೊಂಡ ಆರೋಪದ ಮೇಲೆ ಪಂಚಾಯತ್ ರಾಜ್ ಕಿರಿಯ ಸಹಾಯಕ ಎಂಜಿನಿಯರ್ ಕೆ.ಮಂಜುನಾಥ್ ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಧಿಕಾರಿ ಜಿ.ಪ್ರಭು ಜೂ. 27ರಂದು ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರದ ಎಸ್.ಜಿತೇಂದ್ರ ಎಂಬುವರು ಮಂಜುನಾಥ್ 2020–21 ಸಾಲಿನ ಸಣ್ಣ ನೀರಾವರಿಯ 37 ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳದೇ ಬಿಲ್ಗಳನ್ನು ನಗದೀಕರಿಸಿಕೊಂಡಿದ್ದಾರೆ ಎಂದು ಆರೋಪಿಸಿ ಜೂ.6 ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ವಿಸ್ತೃತ ವರದಿ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಸಿಇಒ ಆದೇಶಿಸಿದ್ದರು. ಇಒ ಎಸ್.ನಯನಾ ಕೆರೆಗಳ ಕಾಮಗಾರಿಯನ್ನು ಪರಿಶೀಲಿಸಿ, ‘ಕೆಲವು ಕಾಮಗಾರಿಗಳ ಬಿಲ್ ತಾಳೆಯಾಗದಿರುವುದು, ಅಪೂರ್ಣ ಬಿಲ್ , ಉದ್ದೇಶ ಪೂರ್ವಕವಾಗಿ ವಿಳಂಬ ಪಾವತಿಗೆ ಕಾರಣವಾಗಿದ್ದಾರೆ’ ಎಂದು ವರದಿ ನೀಡಿದ್ದರು.
ಈ ವರದಿ ಜತೆಗೆ ಜಿಲ್ಲಾಧಿಕಾರಿಗಳ ಗ್ರಾಮ ಭೇಟಿ, ಕಾಮಗಾರಿಗೆ ಗೈರು, ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಕೊಪ್ಪ ವಿಭಾಗವು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದರೂ ಲಿಖಿತ ಉತ್ತರ ನೀಡದೇ ಕರ್ತವ್ಯ ಲೋಪದ ಆಧಾರ ಮೇಲೆ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.