ನರಸಿಂಹರಾಜಪುರ: ‘ಮನೆಗಳಲ್ಲಿ ಶುಭ ಸಮಾರಂಭಗಳನ್ನು ಆಯೋಜಿಸುವಾಗ ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ನಡೆಸಿದರೆ ಮನೆಗೆ ಬರುವ ಬಂಧು–ಮಿತ್ರರಲ್ಲೂ ಸಾಹಿತ್ಯ ಅಭಿರುಚಿ, ಪುಸ್ತಕ ಪ್ರೇಮ ಬೆಳೆಯುತ್ತದೆ’ ಎಂದು ಕಣಿವೆ ನಾಗಚಂದ್ರ ಪ್ರತಿಷ್ಠಾನದ ಮುಖ್ಯಸ್ಥ ಕಣಿವೆ ವಿನಯ್ ಹೇಳಿದರು.
ಪಟ್ಟಣದ ಭಾಗ್ಯರಾಮ ಲೇಔಟ್ನಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಕಾರ್ಯದರ್ಶಿ ನಾಗರಾಜ್ ಅಪ್ಪಾಜಿ ಅವರ ಮನೆಯಂಗಳದಲ್ಲಿ ನಡೆದ ಸಾಹಿತ್ಯ ಸಂಭ್ರಮ – ಸಂಗೀತ ಸುಧೆ ಹಾಗೂ ಪ್ರಸಿದ್ಧ ಲೇಖಕರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣೇಶ್ ಅಧ್ಯಕ್ಷತೆ ವಹಿಸಿದ್ದರು. ‘ಕನ್ನಡ ಪುಸ್ತಕವನ್ನು ಕೊಂಡು ಓದಬೇಕು. ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಕಾರ್ಯದರ್ಶಿ ನಾಗರಾಜ್ ಅಪ್ಪಾಜಿ ಅವರು ಕನ್ನಡ ಭಾಷೆಯ ಬಗ್ಗೆ, ಪುಸ್ತಕಗಳ ಬಗ್ಗೆ ಅಪಾರ ಪ್ರೇಮ ಬೆಳೆಸಿಕೊಂಡವರು. ತಮ್ಮ ಮನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಆಯೋಜಿಸಿದ್ದಾರೆ. ಬಂಧುಗಳಿಗೆ, ಮಿತ್ರರಿಗೆ ಉಡುಗೊರೆ ನೀಡುವಾಗ ಕನ್ನಡದ ಪುಸ್ತಕಗಳನ್ನು ನೀಡಬೇಕು. ಸಾಹಿತ್ಯ ಪರಿಷತ್ನಿಂದ ಗ್ರಾಮೀಣ ಪ್ರದೇಶದಲ್ಲಿ ಮನೆಯಂಗಳದಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗಿದೆ’ ಎಂದರು.
ತರೀಕೆರೆ ಪುರಸಭಾ ಸದಸ್ಯ ಮಂಜುನಾಥ್ ಮಾತನಾಡಿ, ‘ಪ್ರತಿಯೊಂದು ಮನೆಯ ಶುಭ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಗೆ ಸಂಬಂಧಪಟ್ಟ ಕಾರ್ಯಕ್ರಮ ನಡೆಸಬೇಕು. ಕನ್ನಡದಲ್ಲೇ ಮಾತನಾಡಬೇಕು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಘಟಕದ ಕಾರ್ಯದರ್ಶಿ ಆರ್.ನಾಗರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಡಗೆರೆ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಡ್ತಿ ಮುಖ್ಯ ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಅಶೋಕ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಇದ್ದರು. ಯುವ ಗಾಯಕರಾದ ಸಿಂಸೆಯ ವಿಶ್ರೇಯ, ಕೈಮರ ಜಯರಾಜ್ ಹಾಗೂ ಇತರ ಗಾಯಕರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.