ADVERTISEMENT

ಬುಕ್ಕಾಂಬುಧಿ ಯುವಕ ಮಾರ್ಗಮಧ್ಯೆ ಸಿಲುಕಿರುವ ಸಾಧ್ಯತೆ

ಮಾನಸ ಸರೋವರ ಯಾತ್ರೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 11:10 IST
Last Updated 3 ಜುಲೈ 2018, 11:10 IST
ದರ್ಶನ್‌
ದರ್ಶನ್‌   

ಚಿಕ್ಕಮಗಳೂರು: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಅಜ್ಜಂಪುರ ತಾಲ್ಲೂಕಿನ ಬುಕ್ಕಾಂಬುಧಿ ಗ್ರಾಮದ ಬಿ.ಎನ್‌.ದರ್ಶನ್‌ (28) ಎರಡು ದಿನಗಳಿಂದ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಮಳೆಯಿಂದಾಗಿ ಮಾರ್ಗಮಧ್ಯೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ದರ್ಶನ್‌ ಅವರು ಬುಕ್ಕಾಂಬುಧಿಯ ನಂಜುಂಡಮೂರ್ತಿ ಮತ್ತು ಉಮಾ ದಂಪತಿ ಪುತ್ರ. ಜುಲೈ 1ರಂದು ತಾಯಿಗೆ ಫೋನ್‌ನಲ್ಲಿ ಮಾತನಾಡಿದ್ದ ದರ್ಶನ್‌ ಮತ್ತೆ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಉಮಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ದರ್ಶನ್‌ ಜೂನ್‌ 21ರಂದು ಬೆಂಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ. 12 ದಿನಗಳ ನಂತರ ವಾಪಸ್‌ ಬರುವುದಾಗಿ ಹೇಳಿದ್ದ. ಭಾನುವಾರ ಸಂಜೆ 4 ಗಂಟೆ ಹೊತ್ತಿಗೆ ಫೋನ್‌ ಮಾಡಿ, ಆದಿ ಕೈಲಾಸ ಪರ್ವತ ನೋಡಲು ಹೋಗುತ್ತಿದ್ದೇನೆ ಎಂದು ತಿಳಿಸಿದ್ದ. ಆ ನಂತರ ಮತ್ತೆ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ತಿಳಿಸಿದರು.

‘ದರ್ಶನ್‌ ಮೂರು ವರ್ಷಗಳಿಂದ ಬೆಂಗಳೂರಿನ ಯಲಹಂಕ ಬಡವಾಣೆಯಲ್ಲಿ ನೆಲೆಸಿದ್ದಾನೆ. ವಿಶ್ವೇಶ್ವರ ದೇಗುಲದಲ್ಲಿ ಅರ್ಚಕ ಕೆಲಸ ಮಾಡುತ್ತಿದ್ದಾನೆ. ಸ್ನೇಹಿತರೊಂದಿಗೆ ಯಾತ್ರೆಗೆ ತೆರಳಿದ್ದ’ ಎಂದರು.ನಂಜುಂಡಮೂರ್ತಿ ಕೃಷಿಕರಾಗಿದ್ದಾರೆ. ಮತ್ತೊಬ್ಬ ಪುತ್ರ ಪ್ರಶಾಂತ್‌ ಇದ್ದಾರೆ. ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ದರ್ಶನ್‌ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕುಟುಂಬದವರು ಅಜ್ಜಂಪುರ ಪೊಲೀಸರಿಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.