ಚಿಕ್ಕಮಗಳೂರು: ಮಾವು ಮಂಡಳಿ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಮಾವು ಮೇಳ ನಡೆಸಲು ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಹಾಯಕ ತೋಟಗಾರಿಕಾ ಅಧಿಕಾರಿ ಎಂ.ಆರ್.ಲೋಹಿತ್ ಹೇಳಿದರು.
ಸುದ್ದಿಗಾರರೊಂದಿಗೆ ಗುರುವಾರ ಅವರು ಮಾತನಾಡಿ, ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಶೀಘ್ರದಲ್ಲಿಯೇ ಮಾವು ಮೇಳ ಆಯೋಜಿಸಲಾಗುವುದು. ಅದರಿಂದ ಮಾವು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ. ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣುಗಳು ಲಭ್ಯವಾಗುತ್ತವೆ ಎಂದರು.
ಜಿಲ್ಲೆಯ 4.3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮಾವು ಬೆಳೆದಿದ್ದು, 63.26 ಸಾವಿರ ಟನ್ ಇಳುವರಿ ನಿರೀಕ್ಷಿಸಲಾಗಿದೆ. ಆಲ್ಫೋನ್ಸಾ, ಮಲ್ಲಿಕಾ, ಸೋತಾಪುರಿ ಮಾವಿನ ಹಣ್ಣಿಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಇದೆ ಎಂದರು.
ಜಿಲ್ಲೆಯಲ್ಲಿ 2005ರಿಂದ ಮಾವು ಬೆಳೆ ಪ್ರದೇಶ ವಿಸ್ತರಣೆ ಮಾಡಲಾಗುತ್ತಿದೆ. ಸಸಿ ಖರೀದಿಸಲು, ಗುಂಡಿ ತೆಗೆಯಲು, ರೋಗ ಮತ್ತು ಕೀಟ ನಿಯಂತ್ರಣಕ್ಕೆ ಹಾಗೂ ಸಸಿಗಳ ನಿರ್ವಹಣೆಗೆ ಮೂರು ವರ್ಷ ಸಹಾಯಧನ ನೀಡಲಾಗುತ್ತಿದೆ ಎಂದರು.
ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣು ಮಾಗಿಸುವದನ್ನು ತಡೆಯಲು ಸರ್ಕಾರ ಕ್ರಮವಹಿಸಿದೆ. ನೈಸರ್ಗಿಕವಾಗಿ ಹಣ್ಣು ಮಾಗಿಸುವ ಘಟಕ ಸ್ಥಾಪಿಸಲು ₹8 ಲಕ್ಷದವರೆಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಮಾವಿನ ಹಣ್ಣುಗಳನ್ನು ಪ್ಯಾಕ್ ಮಾಡುವ ಘಟಕ ಸ್ಥಾಪಿಸಲು ಸಾಮಾನ್ಯ ವರ್ಗದವರಿಗೆ ₹2 ಲಕ್ಷ, ಪರಿಶಿಷ್ಟ ಮತ್ತು ಪರಿಶಿಷ್ಟ ಜಾತಿಯವರಿಗೆ ₹3.6 ಲಕ್ಷ ಸಹಾಯಧನ ನೀಡಲಾಗುವುದು ಎಂದರು.
ತಾಲ್ಲೂಕು ಮಾವು ಬೆಳೆದಿರುವ ಇಳುವರಿ
ಪ್ರದೇಶ(ಹೆಕ್ಟೇರ್ಗಳಲ್ಲಿ) (ಟನ್ಗಳಲ್ಲಿ)
ತರೀಕೆರೆ 2,901 48,104
ಚಿಕ್ಕಮಗಳೂರು 710 5,815
ಕಡೂರು 544 8,110
ಕೊಪ್ಪ 80 605
ಎನ್ಆರ್ಪುರ 42 285
ಶೃಂಗೇರಿ 31 345
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.