ADVERTISEMENT

ಮಾನಸಿಕ ಸ್ವಾಸ್ಥ್ಯ ಬಲವರ್ಧನೆ: ಅಗ್ರ ಸ್ಥಾನದಲ್ಲಿ ಕರ್ನಾಟಕ

ಡಾ.ಬಿ.ಎನ್.ಗಂಗಾಧರ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 4:51 IST
Last Updated 14 ಸೆಪ್ಟೆಂಬರ್ 2025, 4:51 IST
ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ರಾಜ್ಯಮಟ್ಟದ ಮಾನಸಿಕ ಆರೋಗ್ಯ ತಜ್ಞರ 35ನೇ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಲಾಯಿತು
ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ರಾಜ್ಯಮಟ್ಟದ ಮಾನಸಿಕ ಆರೋಗ್ಯ ತಜ್ಞರ 35ನೇ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಲಾಯಿತು   

ಚಿಕ್ಕಮಗಳೂರು: ರಾಷ್ಟ್ರಮಟ್ಟದಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಬಲಪಡಿಸುವ ಎಲ್ಲ ಪ್ರಯತ್ನಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ನಿಮ್ಹಾನ್ಸ್ ಮಾಜಿ ನಿರ್ದೇಶಕ, ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನ ಮಾಜಿ ಆಧ್ಯಕ್ಷ ಡಾ.ಬಿ.ಎನ್.ಗಂಗಾಧರ್ ಹೇಳಿದರು.

ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಭಾರತೀಯ ಮನೋವೈದ್ಯರ ಸಂಘದ ಕರ್ನಾಟಕ ಶಾಖೆ, ಚಿಕ್ಕಮಗಳೂರು ಮನೋವೈದ್ಯರ ಸಂಘ ಮತ್ತು ಮಾನಸಿಕ ಆರೋಗ್ಯ ವಿಭಾಗ ಹಾಗೂ ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ರಾಜ್ಯಮಟ್ಟದ ಮಾನಸಿಕ ಆರೋಗ್ಯ ತಜ್ಞರ 35ನೇ ಸಮ್ಮೇಳನನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕ ಸ್ವಾಸ್ಥ್ಯ ಕಾಪಾಡುವ ಪ್ರಯತ್ನದ ಪ್ರಮುಖ ರೂವಾರಿಗಳು, ಅದರ ಚುಕ್ಕಾಣಿ ಹಿಡಿದ ಅನೇಕರು ಇಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರಿಯ ಮಾನಸಿಕ ಆರೋಗ್ಯದ ಎನ್‌ಎಂಎಚ್‌ಬಿ ಜೊತೆಗೆ ಈಗ ಜಿಲ್ಲಾ ಮಟ್ಟದಲ್ಲಿ ಡಿಎಂಎಚ್‌ಬಿ ವ್ಯವಸ್ಥೆ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾವನ್ನು ಪ್ರಾರಂಭಿಸಿರುವ ಟೆಲಿ ಮನಸ್ ಪ್ರಾರಂಭಿಸಲಾಗಿದೆ. ಅದಕ್ಕೂ ಕರ್ನಾಟಕವೇ ಚುಕ್ಕಾಣಿ ಹಿಡಿದಿದೆ. ಎಲ್ಲ ವೈದ್ಯಕೀಯ ತಜ್ಞರೂ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಷ್ಟ್ರ ಮಟ್ಟದಲ್ಲಿ ಮಾನಸಿಕ ಸ್ವಾಸ್ಥ್ಯದ ಧ್ವಜವನ್ನು ಎತ್ತಿ ಹಿಡಿಯಲು ಕರ್ನಾಟಕದ ದೊಡ್ಡ ಪಾಲುದಾರಿಕೆ ಇದೆ. ಆ ಹೊಣೆಗಾರಿಕೆಯೂ ಮುಂದಿನ ದಿನಗಳಲ್ಲಿ ನಮಗೇ ಇರಬೇಕು. 25-30 ವರ್ಷಗಳಲ್ಲಿ ಅತ್ಯಂತ ವೇಗವಾಗಿ ಹಾಗೂ ಅತ್ಯಂತ ವೈಜ್ಞಾನಿಕವಾಗಿ ಮುಂದುವರಿದಿರುವ ಮನೋವೈದ್ಯಕೀಯ ಪ್ರಾಂತದ ಶಾಖೆ ಎಂದರೆ ಅದು ಕರ್ನಾಟಕ ಎಂದು ಹೇಳಿದರು.

ಕರ್ನಾಟಕ ಶಾಖೆಗೆ ಈಗಾಗಲೆ ಭಾರತೀಯ ಮನೋ ವೈದ್ಯಕೀಯ ಸಂಘದ ಮೂಲಕ ಹಲವು ಪ್ರಶಸ್ತಿಗಳು ಲಭಿಸಿವೆ. ಎಲ್ಲರೂ ಒಟ್ಟಿಗೆ ಸೇರಿ, ಹೊಣೆಗಾರಿಕೆ ಅರಿತುಕೊಂಡು ಕೆಲಸ ಮಾಡಿರುವುದು ಇದಕ್ಕೆ ಕಾರಣ ಎಂದರು.

ಬೆಂಗಳೂರು ಎಸ್‌ಜೆಐಸಿ ನಿವೃತ್ತ ಪ್ರಾಧ್ಯಾಪಕರು, ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, 5 ಸಾವಿರ ವರ್ಷಗಳ ಹಿಂದೆಯೇ ಕೃಷ್ಣ ಪರಮಾತ್ಮ ನೀಡಿದ ಭಗವದ್ಗೀತೆಗಿಂತ ಅದ್ಭುತವಾದ ಮನೋತಜ್ಞ ಪುಸ್ತಕ ಮತ್ತೊಂದಿಲ್ಲ ಎಂದರು.

ಭಗವದ್ಗೀತೆಗೂ ಮೊದಲು ಸ್ವತಃ ಶಿವ ತನ್ನ ಪತ್ನಿ ಪಾರ್ವತಿಗೆ ಸ್ಮೃತಿ ಹೋದಾಗ ಯೋಗ, ಧ್ಯಾನ, ಅಪಸ್ಮಾರವನ್ನು ಕಾಲಿನಲ್ಲಿ ನಿಯಂತ್ರಿಸಿ ನಟರಾಜನಾಗಿ ಅಜ್ಞಾನ, ಅಂಧಕಾರವನ್ನು ನಿಯಂತ್ರಿಸುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. ಶಿವನಿಗೆ ವೈದ್ಯನಾಥೇಶ್ವರ, ಜ್ಯೋತಿರ್ಲಿಂಗ, ಪರಂಜ್ಯೋತಿ ಎನ್ನುತ್ತೇವೆ. ಆ ಮೂಲಕ ವಿಶ್ವಕ್ಕೆ ಪ್ರಥಮ ಮನೋರೋಗ ತಜ್ಞ ಎನಿಸಿಕೊಂಡಿದ್ದಾನೆ ಎಂದರು.

ನಮ್ಮ ಸಮಾಜದಲ್ಲಿ ಆಗುತ್ತಿರುವ ಆತ್ಮಹತ್ಯೆ ಪ್ರವೃತ್ತಿಯನ್ನು ಕಡಿಮೆ ಮಾಡಲು ಎಲ್ಲ ತಜ್ಞರು ಗಂಭೀರವಾಗಿ ಗಮನಹರಿಸಬೇಕು. ಯುವಕರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗುತ್ತಿದೆ. ಮನೋರೊಗ ತಜ್ಞರು ಬರವಣಿಗೆ ಮೂಲಕ ಸಾರ್ವಜನಿಕರಲ್ಲಿ ಆತ್ಮಹತ್ಯೆ ತಡೆ ಕುರಿತು ಅರಿವು ಮೂಡಿಸಬೇಕು. ಪ್ರತಿ ತಿಂಗಳು ಕನಿಷ್ಠ 1 ಗಂಟೆ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವುದರಿಂದ ಆತ್ಮಹತ್ಯೆ ಪ್ರವೃತ್ತಿ ಕಡಿಮೆ ಮಾಡಬಹುದು ಎಂದರು.

ನಿಮ್ಹಾನ್ಸ್‌ನಲ್ಲಿ ಮಹಿಳಾ ವ್ಯಸನ ಮುಕ್ತ ವಾರ್ಡ್ ತೆರೆಯಲಾಗಿದೆ. ಅಲ್ಲಿ ಹಾಸಿಗೆಗಳು ಸಾಕಾಗದ ಸ್ಥಿತಿ ಇದೆ. ಇದು ದೇಶದ ಅತ್ಯಂತ ಕೆಟ್ಟ ಸಂಗತಿ. ಇಡೀ ಕುಟುಂಬವನ್ನು ಕಾಪಾಡಬೇಕಾದ ತಾಯಂದಿರೆ ಇಂತಹ ಹೀನ ಕೃತ್ಯಕ್ಕೆ ಹೋದರೆ ಸಮಾಜ ಹಾಳಾಗುತ್ತದೆ. ಮಕ್ಕಳು, ಯುವಕರು ವ್ಯಸನಕ್ಕೆ ದಾಸರಾಗದಿರುವಂತೆ ತಡೆಯುವ ಪ್ರಯತ್ನವನ್ನು ಸಂಘಟನೆ ಮಾಡಬೇಕು ಎಂದು ಮನವಿ ಮಾಡಿದರು.

ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಡೀನ್ ಡಾ.ಎಂ.ಆರ್.ಹರೀಶ್, ಕರ್ನಾಟಕ ಭಾರತಿಯ ಮನೋವೈದ್ಯ ಸಂಘದ ಅಧ್ಯಕ್ಷ ಡಾ.ಸೋಮಶೇಖರ್ ಬಿಜ್ಜಳ್, ಡಾ.ಹರೀಶ್ ದೇಲಂತಬೆಟ್ಟು, ಡಾ. ಅನಿಲ್ ಕುಮಾರ್ ನಾಗರಾಜ್, ಡಾ. ಟಿಎಸ್. ಸತ್ಯನಾರಾಯಣ ರಾವ್, ಖಜಾಂಚಿ ಡಾ. ಚಂದ್ರಶೇಖರ್, ಸಹ ಕಾರ್ಯದರ್ಶಿ ಕೆ.ಎಸ್ ವಿನಯ್ ಕುಮಾರ್, ರವೀಂದ್ರ ಮುನೋಳಿ, ಡಾ. ಪವಿತ್ರ, ಡಾ. ವೆಂಕಟೇಶ್, ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.