ADVERTISEMENT

ಇಲ್ಲದ ರಸ್ತೆ, ಸೇತುವೆ: ಕುದುರೆಮುಖ ಉದ್ಯಾನ ನಿವಾಸಿಗಳಿಗೆ ತೀರದ ಸಂಕಷ್ಟ

ರಾಘವೇಂದ್ರ ಕೆ.ಎನ್
Published 30 ಏಪ್ರಿಲ್ 2025, 6:47 IST
Last Updated 30 ಏಪ್ರಿಲ್ 2025, 6:47 IST
ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಲುಗುಂಜಿಮನೆ ಗ್ರಾಮದ ಹೊರಣೆ ಹಳ್ಳಿಯ ಕಿರು ಸೇತುವೆ ನಿರ್ಮಾಣವಾದ 4 ವರ್ಷದಲ್ಲಿ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ
ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಲುಗುಂಜಿಮನೆ ಗ್ರಾಮದ ಹೊರಣೆ ಹಳ್ಳಿಯ ಕಿರು ಸೇತುವೆ ನಿರ್ಮಾಣವಾದ 4 ವರ್ಷದಲ್ಲಿ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ   

ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನೆಮ್ಮಾರ್, ಕೆರೆ, ಕೂತಗೋಡು, ಮರ್ಕಲ್ ಹಾಗೂ ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು  ಹಳ್ಳಗಳಿಗೆ ಕಾಲು ಸಂಕವೇ ಸಂಪರ್ಕ ಸೇತುವೆ. ಕಳೆದ 5 ವರ್ಷಗಳಲ್ಲಿ ಅತಿವೃಷ್ಟಿಯಿಂದ ಹಲವು ಕಾಲು ಸಂಕಗಳು ಶಿಥಿಲಗೊಂಡಿವೆ. ಕಾಲು ಸಂಕದ ಬದಲು ನಿರ್ಮಿಸಲಾದ ಕಿರು ಸೇತುವೆಗಳೂ ಕಳಪೆ ಕಾಮಗಾರಿಯಿಂದ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.

ನೆಮ್ಮಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನುಗರಡಿ, ಹುಲಗರಡಿ, ವಂಡಗದ್ದೆ, ಮುಂಡೋಡಿಯಲ್ಲಿ ಕಾಲು ಸಂಕವಿದ್ದು, ಇಲ್ಲಿ ಕಿರು ಸೇತುವೆ ನಿರ್ಮಿಸಬೇಕು. ಹೊರಣೆ ಹಳ್ಳಕ್ಕೆ ಸೇತುವೆ ಪುನರ್‌ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ.  ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಕಿರು ಸೇತುವೆಗಳನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ. ನೀಲಂದೂರು ಗ್ರಾಮದ ಮೂಡಿಗೇರಿ, ಬೆಳಗೋಡುಕೊಡಿಗೆ, ತಾರೋಳ್ಳಿ ಕೊಡಿಗೆ, ಬೈಲ್‍ಬಾರ್ ಹಾರಗೊಪ್ಪಕ್ಕೆ ಕಿರು ಸೇತುವೆ ನಿರ್ಮಿಸಬೇಕು ಎನ್ನುವುದು ಜನರ ಬೇಡಿಕೆ. ಕೆರೆ ಗ್ರಾಮ ಪಂಚಾಯಿತಿಯ ಹಾದಿ, ಬಲೇಕಡಿ ಗ್ರಾಮದ ಹುಲುಗಾರುಬೈಲು ಹಳ್ಳ, ಗುಲುಗುಂಜಿಮನೆಯ ಹೊರಣೆ ಹಳ್ಳ, ಬಾಳ್ಗೆರೆ ಗ್ರಾಮದ ಉಡ್ತಾಳ್, ಹೊಲ್ಮ, ಹಾದಿ ಗ್ರಾಮದ ಎಮ್ಮೆಗುಂಡಿಯಲ್ಲಿ ಕಿರುಸೇತುವೆ ನಿರ್ಮಾಣವಾಗಬೇಕಿದೆ.

ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ಮಣ್ಣಿನ ರಸ್ತೆಗಳು ಮಳೆಗಾಲದಲ್ಲಿ ಕೆಸರುಗದ್ದೆಯಾಗುತ್ತದೆ. ಕೆಲವು ಕಡೆ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡದಿರುವುದು ಅಡ್ಡಿಯಾಗಿದೆ. ‘ಕುದುರೆಮುಖ ರಾಷ್ಟ್ರೀಯ ಉದ್ಯಾನ  ವ್ಯಾಪ್ತಿಯ ಗ್ರಾಮಗಳಿಗೆ ರಸ್ತೆ ಮತ್ತು ಕಿರು ಸೇತುವೆ ನಿರ್ಮಿಸಿಕೊಡಬೇಕು’ ಎಂದು ಹೊರಣೆ ಗ್ರಾಮಸ್ಥರಾದ ರಾಮಸ್ವಾಮಿ, ಸತೀಶ, ಧರ್ಮಪ್ಪ, ರಾಮಪ್ಪ, ಶೇಷಪ್ಪ, ಸುರೇಶ, ಸವಿತಾ, ಶಾರದಾ, ಮೀನಾಕ್ಷಿ, ಗಿರಿಜಾ ಒತ್ತಾಯಿಸಿದರು.

ADVERTISEMENT

ಕಳೆದ 7 ವರ್ಷಗಳಲ್ಲಿ ತಾಲ್ಲೂಕಿನಲ್ಲಿ ಹಲವು ಕಿರು ಸೇತುವೆಗಳು ನಿರ್ಮಾಣಗೊಂಡಿವೆ. ಪ್ರಕೃತಿ ವಿಕೋಪ ನಿಧಿಯಡಿ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ರಸ್ತೆ ಅಭಿವೃದ್ಧಿಗೂ ಕ್ರಮ ವಹಿಸುತ್ತೇವೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಭೋರ್ಗರೆಯುವ ಹಳ್ಳಗಳು

ಕೆರೆ ಗ್ರಾಮ ಪಂಚಾಯಿತಿಯ ಬಹುತೇಕ ಗ್ರಾಮಗಳಲ್ಲಿ ಜನರು ಮಳೆಗಾಲದಲ್ಲಿ ರಸ್ತೆ ಮತ್ತು ಸೇತುವೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಹಳ್ಳಗಳು ನದಿರೂಪ ತಾಳಿ ಭೋರ್ಗರೆಯುತ್ತವೆ. ಜೀವ ಕೈಯಲ್ಲಿ ಹಿಡಿದುಕೊಂಡು ಕಾಲು ಸಂಕ ದಾಟಬೇಕು. ಇದಕ್ಕೆ ಶಾಶ್ವತ ಪರಿಹಾರವಾಗಿ ಸೇತುವೆ ನಿರ್ಮಾಣ ಆಗಬೇಕಿದೆ. ನಮ್ಮ ಊರಿನ ಕಿರು ಸೇತುವೆ ಕಳಪೆ ಕಾಮಗಾರಿಯಿಂದ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ಹೊರಣೆ ಗ್ರಾಮದ  ಜಾನಕಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.