ಚಿಕ್ಕಮಗಳೂರು: ನಗರದ ಕೆಂಪನಹಳ್ಳಿ ಮುಖ್ಯರಸ್ತೆಯ (ಗಾಯತ್ರಿ ಕಲ್ಯಾಣ ಮಂಟಪದ ಬಳಿ) ಮನೆ ಮುಂದಿನ ಚರಂಡಿಯೊಳಗೆ ಮಹಿಳೆಯ ಶವ ಶನಿವಾರ ಸಂಜೆ ಪತ್ತೆಯಾಗಿದೆ.
ಮೃತ ಮಹಿಳೆಯನ್ನು ವಿಜಯಪುರದ ನಿವಾಸಿ ರಾಜಮ್ಮ (68) ಎಂದು ಗುರುತಿಸಲಾಗಿದೆ. ದೇಹಕ್ಕೆ ಕೊಳಕು–ಕೆಸರು ಮೆತ್ತಿಕೊಂಡಿತ್ತು.
ಸ್ಥಳೀಯರು ದುರ್ನಾತ ಸಹಿಸಲಾಗದೆ ಚರಂಡಿಯೊಳಗೆ ಇಣುಕಿ ನೋಡಿದಾಗ ಶವ ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಕಾರ್ಯಾಚರಣೆ ಮಾಡಿ ಶವ ಹೊರತೆಗೆಸಿದ್ದಾರೆ.
‘ಕುಟುಂಬದವರು ಶವ ನೋಡಿ ಗುರುತು ಹಿಡಿದಿದ್ದಾರೆ. ರಾಜಮ್ಮ ಅವರ ಸಹೋದರರು ವಿಜಯಪುರ ಮತ್ತು ಕೆಂಪನಹಳ್ಳಿಯಲ್ಲಿ ಇದ್ದಾರೆ. ರಾಜಮ್ಮ ಅಲ್ಲಿ ಸ್ವಲ್ಪ ದಿನ ಮತ್ತು ಇಲ್ಲಿ ಸ್ವಲ್ಪ ದಿನ ಇರುತ್ತಿದ್ದರಂತೆ. ಮನೆಯಿಂದ ಈಚೆಗೆ ಹೊರಹೋದವರು ವಾಪಸಾಗಿರಲಿಲ್ಲವಂತೆ. ಅವರು ಕಾಣೆಯಾಗಿರುವ ಬಗ್ಗೆ 10 ದಿನಗಳ ಹಿಂದೆ ದೂರು ದಾಖಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.