
ನರಸಿಂಹರಾಜಪುರ: ‘ಸರ್ಕಾರದ ಮೇಲೆ ಒತ್ತಡ ತಂದು ಮುಖ್ಯಮಂತ್ರಿ, ಕಂದಾಯ ಮತ್ತು ಕೃಷಿ ಸಚಿವರೊಂದಿಗೆ ಚರ್ಚಿಸಿ ದಲಿತರಿಗೆ ಭೂಮಿ ಕೊಡಿಸುತ್ತೇನೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.
ಇಲ್ಲಿನ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ರ್ಷ ಸಮಿತಿಯಿಂದ ಏಳು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
‘2009-10ರಲ್ಲಿ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಿದಾಗ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿ ಜಮೀನು ಕೊಡಿಸುವುದಾಗಿ ಹೇಳಿದ್ದೆ. ಹಲವಾರು ಕಾರಣಗಳಿಂದ ನಂತರ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಪ್ರಸ್ತುತ ಶಾಸಕನಾಗಿದ್ದು, ಭೂಮಿ ಕೊಡಿಸುವ ಪ್ರಯತ್ನ ಮಾಡುತ್ತೇನೆ. ನಮೂನೆ 53, 57ರ ಅಡಿಯಲ್ಲಿ ಅರ್ಜಿ ಹಾಕಿರುವವರಿಗೆ ಜಮೀನು ಮಂಜೂರು ಮಾಡಿಸಿ ಕೊಡಲು ಪ್ರಯತ್ನಿಸಲಾಗುವುದು. ಅರಣ್ಯ, ಕಂದಾಯ ಇಲಾಖೆಯ ಜಂಟಿ ಸರ್ವೆ ನಡೆಯುತ್ತಿದ್ದು, ಪೂರ್ಣಗೊಂಡ ಬಳಿಕ ಕ್ರಮ ವಹಿಸಲಾಗುವುದು. ಭೂಮಿ, ಮನೆ ಇಲ್ಲದವರಿಗೆ ಕಂದಾಯ ಗ್ರಾಮ, ಉಪಕಂದಾಯ ಗ್ರಾಮಗಳ ಮೂಲಕ ಮನೆ ನಿವೇಶನಗಳ ಹಕ್ಕುಪತ್ರ ಕೊಡಿಸಲಾಗವುದು’ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ, ‘ಈ ಹಿಂದೆಯೂ ಅಧಿಕಾರಿಗಳು, ಜನಪ್ರತಿನಿಧಿಗಳು ಭೂಮಿ ಕೊಡುತ್ತೇವೆ ಎಂದು ಹೇಳಿ ನಮಗೆ ಮೋಸ ಮಾಡಿದ್ದಾರೆ. ಹೀಗಾಗಿ, ಪ್ರತಿಭಟನೆ ನಿಲ್ಲಿಸುವುದಿಲ್ಲ. ತಾವು ಜಿಲ್ಲಾಧಿಕಾರಿಯೊಂದಿಗೆ ಬಂದು ಜಮೀನು ಕೊಡುವುದಾಗಿ ಲಿಖಿತವಾಗಿ ಹೇಳಿದರೆ ಮಾತ್ರ ಹೋರಾಟ ಕೈಬಿಡಲಾಗುವುದು’ ಎಂದರು.
ರಾಜ್ಯ ಸಂಘಟನಾ ಸಂಚಾಲಕರಾದ ಮೈಸೂರಿನ ಕೆ.ನಂಜಪ್ಪ ಬಸವನಗುಡಿ, ರಂಗಸ್ವಾಮಿ ಬಿ, ಬಾಗಲಕೋಟೆಯ ಮಾರುತಿ ಬಿ ಹೊಸಮನಿ, ಬೆಳಗಾವಿ ವಿಭಾಗೀಯ ಸಂಚಾಲಕ ಹನುಮಂತ ಎಚ್.ಹಿರೇಮನಿ, ಯಮನಪ್ಪ ಸಿ.ಅಲಗಿ, ಜಿಲ್ಲಾ ಸಂಘಟನಾ ಸಂಚಾಲಕ ಯಮನಪ್ಪ ಭಜಂತ್ರಿ, ವಿಜಯನಗರ ಜಿಲ್ಲೆಯ ದುರ್ಗಾದಾಸ್, ರಾಜ್ಯ ಸಮಿತಿ ಸದಸ್ಯ ಎಸ್.ರಾಜೇಶ್ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ.ಭವಾನಿ, ಜಿಲ್ಲಾ ಸಂಘಟನಾ ಸಂಚಾಲಕ ಅಬ್ದುಲ್ ರೆಹಮಾನ್, ತಾಲ್ಲೂಕು ಸಂಚಾಲಕ ಸಿಜು, ಮೃತ್ಯುಂಜಯ, ರವಿ, ಜೈರಾಮ್, ಗೋಪಾಲ, ನಾಗರಾಜ, ಖಧೀರ್, ಎಸ್ ರಾಜು, ವಾಸಂತಿ, ಶೋಭಾ, ವೆನಿಲಾ, ರೇಣುಕಾ, ಕೆಪಿಸಿಸಿ ಸದಸ್ಯ ಸುಬ್ರಹ್ಮಣ್ಯ, ಗೇರ್ಬೈಲ್ ನಟರಾಜ್, ಬಗರ್ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ, ಮುಖಂಡರಾದ ಜುಬೇದಾ, ಪ್ರಶಾಂತ ಶೆಟ್ಟಿ, ಗಂಗಾಧರ್, ಮೊಹಮ್ಮದ್ ಫಯಾಜ್, ತಹಶೀಲ್ದಾರ್ ನೂರುಲ್ಹುದಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.