ಮೂಡಿಗೆರೆ: ಪಟ್ಟಣವನ್ನು ಶುಚಿಯಾಗಿಡುವುದೇ ಪಟ್ಟಣ ಪಂಚಾಯಿತಿಯ ಪ್ರಥಮ ಆದ್ಯತೆಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ. ಧರ್ಮಪಾಲ್ ಅಭಿಪ್ರಾಯಪಟ್ಟರು.
ಪಟ್ಟಣದ ಬೇಲೂರು ರಸ್ತೆಯಲ್ಲಿ ಭಾನುವಾರ ರಸ್ತೆ ವಿಭಾಜಕದ ನಡುವೆ ಸಸಿ ನೆಟ್ಟ ಬಳಿಕ ಮಾತನಾಡಿದರು. ‘ಸ್ವಚ್ಛತೆಯನ್ನು ಕಾಪಾಡುವುದರಿಂದ ಅರ್ಧದಷ್ಟು ರೋಗಗಳನ್ನು ದೂರವಿಡಲು ಸಾಧ್ಯವಾಗುತ್ತದೆ. ಶುಚಿನಗರ ನಿರ್ಮಾಣಕ್ಕೆ ಪ್ರತಿಯೊಬ್ಬ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಮನೆಗಳಲ್ಲಿ ಕಸಗಳನ್ನು ವಿಂಗಡಿಸಿ ವಿಲೇವಾರಿ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಸೆಯದೇ ಸಾರ್ವಜನಿಕ ಕಟ್ಟಡಗಳನ್ನು ಶುಚಿಯಾಗಿಟ್ಟು ಕೊಳ್ಳಬೇಕು. ಪಟ್ಟಣವನ್ನು ಸುಂದರಗೊಳಿಸಲು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಸುಂದರ ನಗರ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಿಶೋರ್ ಮಾತನಾಡಿ, ‘ಸಸಿಗಳನ್ನು ನೆಟ್ಟು ಮರಗಳನ್ನಾಗಿಸುವುದು ಎಲ್ಲರ ಗುರಿಯಾಗಬೇಕು. ಕಾರ್ಯಕ್ರಮಗಳ ನೆನಪಿನಲ್ಲಿ ಸಸಿಗಳನ್ನು ನೆಡುವ ಕಾರ್ಯವಾಗಬೇಕು. ನೆಟ್ಟ ಗಿಡಗಳನ್ನು ಆರೈಕೆ ಮಾಡಿ ಕಾಪಾಡಿಕೊಳ್ಳಬೇಕು. ಮರಗಳಿಂದ ಜೀವಿಗಳಿಗೆ ಅಪಾರ ಪ್ರಮಾಣದ ಕೊಡುಗೆಯಿರುವುದರಿಂದ ಪ್ರತಿಯೊಬ್ಬರೂ ಸಾಧ್ಯವಿರುವ ಎಲ್ಲಾ ಕಡೆಗಳಲ್ಲಿ ಸಸಿಗಳನ್ನು ನೆಡಬೇಕು’ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಿವಾನಂದ್, ಮೇಲ್ವಿಚಾರಕ ದಾಮೋದರ್ ಆಚಾರ್ಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಪ್ರವೀಣ್ ಪೂಜಾರಿ, ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ನಾಗರಾಜ್ , ಪೊಲೀಸ್ ಸಿಬ್ಬಂದಿ ರುದ್ರೇಶ್, ಸ್ವಯಂ ಸೇವಕರಾದ ಮಂಜುನಾಥ್, ಹರೀಶ್, ಮಂಜುನಾಥ್, ಶಶಿ, ರಘು, ಅಶ್ವಥ್, ಸುನಿಲ್ ಪೂಜಾರಿ, ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.