ADVERTISEMENT

ಸ್ಮಶಾನದಲ್ಲಿ ಅವ್ಯವಸ್ಥೆ: ನರಕಯಾತನೆ

ಮೂಲ ಸೌಲಭ್ಯವಿಲ್ಲದ ಸ್ಮಶಾನದಲ್ಲಿ ಅಂತ್ಯಸಂಸ್ಕಾರವೇ ಸವಾಲು

ಪ್ರಜಾವಾಣಿ ವಿಶೇಷ
Published 9 ನವೆಂಬರ್ 2020, 5:58 IST
Last Updated 9 ನವೆಂಬರ್ 2020, 5:58 IST
ಮೂಡಿಗೆರೆ ಪಟ್ಟಣದ ಬೀಜುವಳ್ಳಿಯಲ್ಲಿರುವ ಸ್ಮಶಾನದ ಶವಸಂಸ್ಕಾರ ಕಟ್ಟಡದ ಶೀಟುಗಳು ಹಾರಿಹೋಗಿರುವುದು (ಚಿತ್ರ 1). ಶವ ದಹಿಸುವ ಟ್ರೈಲಿ ಹಾನಿಯಾಗಿರುವುದು (ಚಿತ್ರ 2). ಸ್ಮಶಾನದ ಆವರಣದಲ್ಲಿರುವ ನೀರಿನ ಸ್ಥಾವರ ಬಳಕೆಯಿಂದ ದೂರ ಉಳಿದಿದೆ. (ಚಿತ್ರ 3)
ಮೂಡಿಗೆರೆ ಪಟ್ಟಣದ ಬೀಜುವಳ್ಳಿಯಲ್ಲಿರುವ ಸ್ಮಶಾನದ ಶವಸಂಸ್ಕಾರ ಕಟ್ಟಡದ ಶೀಟುಗಳು ಹಾರಿಹೋಗಿರುವುದು (ಚಿತ್ರ 1). ಶವ ದಹಿಸುವ ಟ್ರೈಲಿ ಹಾನಿಯಾಗಿರುವುದು (ಚಿತ್ರ 2). ಸ್ಮಶಾನದ ಆವರಣದಲ್ಲಿರುವ ನೀರಿನ ಸ್ಥಾವರ ಬಳಕೆಯಿಂದ ದೂರ ಉಳಿದಿದೆ. (ಚಿತ್ರ 3)   

ಮೂಡಿಗೆರೆ: ಪಟ್ಟಣದ ಬೀಜುವಳ್ಳಿ ಯಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಅಗತ್ಯ ಮೂಲ ಸೌಲಭ್ಯಗಳಿಲ್ಲದ ಕಾರಣ ಇಲ್ಲಿ ಅಂತ್ಯಸಂಸ್ಕಾರ ನಡೆಸುವುದೇ ಸಂಬಂಧಿಕರಿಗೆ ಸವಾಲಾಗಿದೆ.

ಪಟ್ಟಣ ಮಾತ್ರವಲ್ಲದೇ, ಹಳೆ ಮೂಡಿಗೆರೆ, ಬೀಜುವಳ್ಳಿ, ಅಂಬೇಡ್ಕರ್ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆಲ್ಲಾ ಇದೊಂದೇ ಸ್ಮಶಾನವಾಗಿದ್ದು, ಜಾತಿ ಭೇದವಿಲ್ಲದೇ ಪ್ರತಿನಿತ್ಯ ಇಲ್ಲಿ ಕನಿಷ್ಠ ಒಂದಾದರೂ ಅಂತ್ಯಸಂಸ್ಕಾರ ನಡೆಯುತ್ತದೆ. ಆದರೆ, ಈ ಸ್ಮಶಾನದಲ್ಲಿ ಅಗತ್ಯ ಮೂಲಸೌಲಭ್ಯಗಳಿಲ್ಲದ ಕಾರಣ ನರಕಯಾತನೆ ನಡುವೆ ಅಂತ್ಯಸಂಸ್ಕಾರ ನಡೆಸುವಂತಾಗಿದೆ.

ಎರಡು ದಶಕಗಳ ಹಿಂದೆ ಸ್ಮಶಾನದಲ್ಲಿ ಶೆಡ್ ನಿರ್ಮಿಸಲಾಗಿದ್ದು, ಏಕಕಾಲದಲ್ಲಿ ಎರಡು ಟ್ರೈಲಿಯಲ್ಲಿ ದಹಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಟ್ರೈಲಿಗಳು ಸಂಪೂರ್ಣ ಹಾನಿಯಾಗಿದ್ದು, ಅಳಿದುಳಿದ ಕಬ್ಬಿಣದ ಶೀಟುಗಳ ನಡುವೆ ಶವವನ್ನಿಟ್ಟು ಹರಸಾಹಸ ಪಟ್ಟು ದಹಿಸುವಂತಾಗಿದೆ. ಸ್ಮಶಾನದ ಆವರಣದಲ್ಲಿ ಕಿರು ಟ್ಯಾಂಕ್ ನಿರ್ಮಾಣ ಮಾಡಿದ್ದರೂ, ನೀರು ತುಂಬಲಾಗದೇ ಸುತ್ತಲೂ ಕಾಡು ಬೆಳೆದು ನಿಂತಿದೆ. ಶವ ದಹಿಸಲು ನಿರ್ಮಿಸಿರುವ ಶೆಡ್‌ನ ಚಾವಣಿಯ ಶೀಟುಗಳು ಹಾರಿ ಹೋಗಿದ್ದು, ಮಳೆ ಬಂದರೆ ಶವಕ್ಕೂ ರಕ್ಷಣೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‘ಸ್ಮಶಾನವಿರುವ ಪ್ರದೇಶವು ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿಗೆ ಸೇರಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶವಗಳನ್ನು ಕೂಡ ಇದೇ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸುವುದರಿಂದ ಅಭಿವೃದ್ಧಿ ಯೋಜನೆ ರೂಪಿಸಲು ಗ್ರಾಮ ಪಂಚಾ ಯಿತಿ ಹಾಗೂ ಪಟ್ಟಣ ಪಂಚಾಯಿತಿ ನಡುವೆ ಜಿಜ್ಞಾಸೆ ಮೂಡಿರುವುದರಿಂದ ಸ್ಮಶಾನವು ಸೌಲಭ್ಯಗಳಿಲ್ಲದೇ ಸೊರಗು ವಂತಾಗಿದೆ’ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಪ್ರಸ್ತುತ ರೋಟರಿ ಸಂಸ್ಥೆ ನಿರ್ವಹಣೆ ಹೊಣೆಯನ್ನು ಹೊತ್ತು ಅಂತ್ಯಸಂಸ್ಕಾರ ಕ್ಕೆ ಅವಕಾಶ ಕಲ್ಪಿಸುತ್ತಿದ್ದರೂ, ಸರ್ಕಾರ ದಿಂದ ಅಭಿವೃದ್ಧಿ ಯೋಜನೆಯನ್ನು ರೂಪಿಸದ ಕಾರಣ, ಮೂಲ ಸೌಲಭ್ಯ ಕನಸಾಗಿಯೇ ಉಳಿದಿವೆ. ಸ್ಮಶಾನದ ಬಹುತೇಕ ಭೂಮಿ ಒತ್ತುವರಿಯಾಗಿದ್ದು, ಅಳಿ ದುಳಿದ ಭೂಮಿಗೂ ರಕ್ಷಣೆಯಿಲ್ಲದಂತಾಗಿದೆ.

ಪ್ರತಿಯೊಬ್ಬರೂ ಒಂದಲ್ಲಾ ಒಂದು ದಿನ ಇಲ್ಲಿಗೆ ಬರಬೇಕು ಎಂಬ ಅರಿವಿ ದ್ದರೂ, ಸೌಲಭ್ಯ ಕಲ್ಪಿಸದಿರುವುದು ಮಾನವನ ಚಿಂತನಾಶೀಲತೆಗೆ ಮಂಕು ಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಜನರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.