ADVERTISEMENT

ಕೆಲವರಿಂದ ಕೊಲೆ ಬೆದರಿಕೆ: ಶಾಸಕ ಟಿ.ಡಿ. ರಾಜೇಗೌಡ

ಅರಣ್ಯಕ್ಕೆ ಕಾನು, ಗೋಮಾಳ ಸೇರ್ಪಡೆ ಪ್ರಯತ್ನ; ಆತಂಕ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 22:08 IST
Last Updated 28 ಸೆಪ್ಟೆಂಬರ್ 2022, 22:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ‘ಗೋಮಾಳ, ಕಾನು ಪ್ರದೇಶವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಶೃಂಗೇರಿ ಭಾಗದ ಜನರು ಆತಂಕದಲ್ಲಿದ್ದಾರೆ. ಜಾಗ ಅರಣ್ಯಕ್ಕೆ ಸೇರಿದರೆ ಕೊಲೆ ಮಾಡುವುದಾಗಿ ನನಗೆ ಬೆದರಿಕೆ ಹಾಕಿದ್ದಾರೆ’ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ಬುಧವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ‘ಬದುಕಿಗೆ ಕಂಟಕ ಎದುರಾಗಿರುವುದರಿಂದ ಅನಿವಾರ್ಯವಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿರುವುದರಲ್ಲಿ ತಪ್ಪಿಲ್ಲ. ಸರ್ಕಾರ ಸ್ಪಂದಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ಪರಿಹಾರ
ವಾಗುತ್ತದೆ, ನಮಗೆ ಬೆದರಿಕೆಯೂ ಇರಲ್ಲ’ ಎಂದು ಹೇಳಿದರು.

‘ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಬೆದರಿಕೆ ಹಾಕಿದವರ ಹೆಸರು ಹೇಳಲ್ಲ, ಅವರ ವಿರುದ್ಧ ದೂರನ್ನೂ ದಾಖಲಿಸಲ್ಲ’ ಎಂದರು.

ADVERTISEMENT

‘ಶೃಂಗೇರಿ ತಾಲ್ಲೂಕಿನ ಹಾದಿ ಕೆರೂರು ಸರ್ವೆ ನಂಬರ್‌ 11ರಲ್ಲಿ 1090 ಎಕರೆ ಪ್ರದೇಶದಲ್ಲಿ 762 ಎಕರೆ ಅರಣ್ಯ, 328 ಎಕರೆ ಗೋಮಾಳ ಇದೆ. ಹಾದಿ ಗ್ರಾಮದ ಸರ್ವೆ ನಂಬರ್‌ 2ರಲ್ಲಿ 971 ಎಕರೆ ಪ್ರದೇಶದಲ್ಲಿ 734 ಎಕರೆ ಕಾಡು, 234 ಎಕರೆ ಕಾನು ಇದೆ. ತಹಶೀಲ್ದಾರ್‌ ಅವರು ಮೋಜಣಿ ಮತ್ತು ಅರಣ್ಯ ಇಲಾಖೆಯವರಿಗೆ ಪತ್ರ ಬರೆದಿದ್ದಾರೆ. ಆದರೆ, ಈವರೆಗೆ ಮೋಜಣಿ ಮಾಡಿಲ್ಲ. ಗೋಮಾಳ, ಕಾನು ಜಾಗವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಅಲ್ಲಿನ ಜನರು ಆತಂಕದಲ್ಲಿದ್ದಾರೆ’ ಎಂದು ಹೇಳಿದರು.

ದೂರು ನೀಡಿದರೆ ಕ್ರಮ: ‘ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ ಶಾಸಕ ರಾಜೇಗೌಡ ದೂರು ನೀಡಿದರೆ ಉನ್ನತ ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ (ಬೈರತಿ) ಹೇಳಿದರು. ‘ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ ಶಾಸಕ ರಾಜೇಗೌಡ ಅವರಿಂದ ದೂರು ಪಡೆದು ತನಿಖೆ ನಡೆಸುತ್ತೇವೆ’ ಎಂದು ಎಸ್ಪಿ ಉಮಾ ಪ್ರಶಾಂತ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.