ಕೊಪ್ಪ: ‘ಮನುಷ್ಯ ಹುಟ್ಟುವಾಗ ಬಡತನವಿದ್ದರೂ, ಆತನಲ್ಲಿ ಹೃದಯ ಶ್ರೀಮಂತಿಕೆ ಇರಬೇಕು’ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನಾರ್ವೆಯಲ್ಲಿರುವ ಸ್ವಯಂಪ್ರಕಾಶ ಸರಸ್ವತಿ ಪ್ರೌಢಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ದಾನಿಗಳಿಂದ ನಿರ್ಮಾಣವಾದ ನೂತನ ಕಾರ್ಯಾಲಯಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
‘ಕನಸಿನಲ್ಲಿಯೂ ಭೇದಭಾವ ಬರಬಾರದು. ದೇವರ ಅನುಗ್ರಹ ಪಡೆದ ಕೆಲವರಲ್ಲಿ ಹೃದಯ ಶ್ರೀಮಂತಿಕೆಯೊಂದಿಗೆ ಬಾಹ್ಯ ಶ್ರೀಮಂತಿಕೆಯೂ ಸೇರಿಕೊಳ್ಳುತ್ತದೆ. ಇಂತಹ ವ್ಯಕ್ತಿಗಳಿಂದ ಸಂಪತ್ತು ಸಮಾಜಕ್ಕೆ ಸದ್ವಿನಿಯೋಗವಾಗಿ, ಉಸಿರು ನಿಂತ ಮೇಲೆಯೂ ಸಮಾಜದಲ್ಲಿ ಹೆಸರು ಉಳಿಸಿ ಹೋಗುತ್ತಾರೆ’ ಎಂದರು.
‘ಕೆಲವರು ಕುಟುಂದ ಬಗ್ಗೆ ಮಾತ್ರ ಗಮನಹರಿಸುತ್ತಾರೆ. ಕೆಲವರು ಸಮಾಜವನ್ನು ಕೂಡ ತಮ್ಮ ಕುಟುಂಬದಂತೆ ಭಾವಿಸಿ ತಮ್ಮ ಇತಿಮಿತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾರೆ’ ಎಂದು ತಿಳಿಸಿದರು.
ಪ್ರೌಢಶಾಲೆಯ ನೂತನ ಕಾರ್ಯಾಲಯದ ದಾನಿಗಳಾದ ಅರಕಲಿ ಕುಟುಂಬದ ವಿಜ್ಞಾನಿ ವೆಂಕಟೇಶ ಮೂರ್ತಿ ದಂಪತಿ, ರಾಮಮೂರ್ತಿ, ಗುರುಮೂರ್ತಿ, ವಸಂತಿ, ನರೇಂದ್ರ ಮೂರ್ತಿ ದಂಪತಿ, ಬಾಲಕೃಷ್ಣ, ಶಾಲಾ ಆಡಳಿತ ಸಮಿತಿಯ ನೂತನ ಕಾರ್ಯಾಲಯದ ದಾನಿಗಳಾದ ಕಿರುನಾರ್ವೆಯ ಕೆ.ಆರ್.ಗೋಪಾಲಗೌಡ ದಂಪತಿ ಮತ್ತು ಕೆ.ಆರ್.ಚಂದ್ರಶೇಖರ್ ದಂಪತಿಯನ್ನು ಹರಿಹರಪುರ ಸ್ವಾಮೀಜಿ ಸನ್ಮಾನಿಸಿದರು.
ಸ್ವಯಂಪ್ರಕಾಶ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಓಣಿತೋಟ ರತ್ನಾಕರ್, ಬಿ.ಪಿ.ಚಿಂತನ್, ಕಾರ್ಯದರ್ಶಿ ಕೆ.ಆರ್.ಶ್ರೀನಿವಾಸ್ ಕೋಡ್ರು, ಸಹ ಕಾರ್ಯದರ್ಶಿ ಪಿ.ಐ.ಶಬೀರ್, ಖಜಾಂಚಿ ಎನ್.ಎನ್.ರತ್ನಾಕರ್ ಭಟ್, ನಿರ್ದೇಶಕರಾದ ಸುಲೋಚನಾ, ಕೆ.ಚಂದ್ರಶೇಖರ್, ಕೆ.ಕೆ.ನರೇಶ್, ಕೆ.ಜಿ.ನಾಗೇಂದ್ರ, ಬಿ.ಟಿ.ರಾಮಣ್ಣ, ದಾನಿಗಳಾದ ಶ್ರೀಧರ್ ಭಟ್ ಹರಿಹರಪುರ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಸಂತಕುಮಾರಿ, ಸಹ ಶಿಕ್ಷಕ ಅರುಣ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.