ಚಿಕ್ಕಮಗಳೂರು: ‘ಎಲ್ಲ ಸಚಿವರು ಒಟ್ಟಿಗೆ ಸೇರಿಲ್ಲ. ಅಶೋಕ್, ಜಗದೀಶ್ ಶೆಟ್ಟರ್ ಪ್ರತ್ಯೇಕ ಕಡೆ ವಾಸ್ತವ್ಯ ಇದ್ದರು. ನಮ್ಮ ಮನೆಯಲ್ಲಿ ನಾನಿದ್ದೆ. ಇಲ್ಲಿ ಒಟ್ಟಾಗಿ ಯಾವುದೇ ಗುಪ್ತ ಸಭೆ ನಡೆಸಿಲ್ಲ’ ಎಂದು ಜಿಲ್ಲಾ ಉಸ್ತುವಾರ ಸಚಿವ ಸಿ.ಟಿ. ರವಿ ಸ್ಪಷ್ಟಪಡಿಸಿದರು.
ವಿವಿಧ ಸಚಿವರು ಒಟ್ಟಾಗಿ ನಗರದಲ್ಲಿ ಬುಧವಾರ ರಾತ್ರಿ ಸಭೆ ನಡೆಸಿದ್ದಾರೆಂಬ ಮಾಧ್ಯಮಗಳ ವರದಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ‘ಸಚಿವ ಈಶ್ವರಪ್ಪ ಕೂಡ ಇಲ್ಲಿಗೆ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಸಚಿವರು ಜಿಲ್ಲಾ ಪ್ರವಾಸದಲ್ಲಿ ಇದ್ದೇವೆ. ಕೈಗಾರಿಕೆಗಳ ಕುರಿತು ಚರ್ಚಿಸಲು ಬಂದ್ದಿದ್ದೇನೆ. ಸಚಿವ ಆರ್.ಅಶೋಕ್ ಮಾಮೂಲಿಯಾಗಿ ಇಲ್ಲಿಗೆ ಬಂದಿದ್ದಾರೆ, ಇದರಲ್ಲಿ ವಿಶೇಷ ಏನಿಲ್ಲ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೂಡ ಹೇಳಿದರು.
ಸಚಿವ ಅಶೋಕ್ ಜನ್ಮದಿನ ಆಚರಣೆ:ಬುಧವಾರ ಕಂದಾಯ ಸಚಿವ ಆರ್.ಅಶೋಕ ಅವರ ಜನ್ಮದಿನ. ಅಂದು ನಗರಕ್ಕೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಟ್ಟಡದ ಕಾಮಗಾರಿ ಪರಿಶೀಲನೆಗೆ ಬಂದಿದ್ದ ಅವರು, ಗಿರಿಶ್ರೇಣಿ ಭಾಗದ ಪ್ರಿಮ್ರೋಸ್ ವಿಲ್ಲಾಸ್ನಲ್ಲಿ ವಾಸ್ತವ್ಯ ಹೂಡಿ, ಜನ್ಮದಿನ ಆಚರಿಸಿದ್ದಾರೆ. ಅದರಲ್ಲಿ ಮುನಿರಾಜು, ಸತೀಶ ರೆಡ್ಡಿ, ಸಚಿವ ಸಿ.ಟಿ. ರವಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.