ADVERTISEMENT

ಕೊಪ್ಪ: ಜಲ ಮರುಪೂರಣಕ್ಕೆ ನರೇಗಾ ಸಹಕಾರ

ಬತ್ತಿದ ಕೃಷಿ ಕೊಳವೆ ಬಾವಿಗೆ ಮರುಪೂರಣ ಘಟಕ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:02 IST
Last Updated 27 ಜುಲೈ 2025, 5:02 IST
ಕೃಷಿ ಕೊಳವೆ ಬಾವಿಗೆ ಜಲ ಮರುಪೂರಣ ಘಟಕ ನಿರ್ಮಿಸಿದ ಕೊಪ್ಪದ ಹುಲ್ಲುಮಕ್ಕಿ ನಿವಾಸಿ ಜಾಸ್ಮಿನ್ ದಯಾಕರ್
ಕೃಷಿ ಕೊಳವೆ ಬಾವಿಗೆ ಜಲ ಮರುಪೂರಣ ಘಟಕ ನಿರ್ಮಿಸಿದ ಕೊಪ್ಪದ ಹುಲ್ಲುಮಕ್ಕಿ ನಿವಾಸಿ ಜಾಸ್ಮಿನ್ ದಯಾಕರ್   

ಕೊಪ್ಪ: ನೀರಿನ ಕೊರತೆ ಎದುರಿಸುತ್ತಿದ್ದ ಕೊಳವೆ ಬಾವಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ರಿಚಾರ್ಜ್ ಪಿಟ್ ಅಳವಡಿಸುವ ಮೂಲಕ ಇಲ್ಲಿನ ಗ್ರಾಮಾಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲುಮಕ್ಕಿ ನಿವಾಸಿ ಜಾಸ್ಮಿನ್‌ ದಯಾಕರ್‌ ಅವರು ಯಶಸ್ವಿಯಾಗಿದ್ದಾರೆ.

ಕೊಳವೆ ಬಾವಿಯಲ್ಲಿ ನೀರು ಕಡಿಮೆ ಇದ್ದಾಗ ರೀಜಾರ್ಜ್ ಪಿಟ್‌ ಅಳವಡಿಸುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿದುಕೊಂಡ ಜಾಸ್ಮಿನ್ ಅವರು, ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಯೋಜನೆ ಕಾರ್ಯಗತ ಮಾಡುವ ಬಗ್ಗೆ ಪೂರಕ ಮಾಹಿತಿಯನ್ನು ಪಂಚಾಯಿತಿ ತಾಂತ್ರಿಕ ಸಹಾಯಕ ಸುಮೀನ್‌, ಡಿಇಒ ವಿದ್ಯಾಲಕ್ಷ್ಮಿ ಅವರಿಂದ ಪಡೆದರು.

ಜಾಸ್ಮಿನ್ ಅವರು ಪತಿಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 3 ಎಕರೆ ಜಮೀನಿದ್ದು ಕಾಫಿ, ಅಡಿಕೆ, ಕಾಳುಮೆಣಸು ಹಾಗೂ 30ಕ್ಕೂ ಹೆಚ್ಚು ನೋನಿ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಜಮೀನಿನಲ್ಲಿ 2015ರಲ್ಲಿ ಕೊಳವೆ ಬಾವಿ ಕೊರೆಯಿಸಲಾಗಿತ್ತು. ಇತ್ತೀಚೆಗೆ ಬೇಸಿಗೆಯಲ್ಲಿ ನೀರು ಕಡಿಮೆ ಬರುತ್ತಿದ್ದ ಕಾರಣ ತೋಟಗಳಿಗೆ ನೀರು ಸಾಕಾಗುತ್ತಿರಲಿಲ್ಲ. ಇದರಿಂದ ಬೇಸತ್ತ ಜಾಸ್ಮಿನ್‌ ಕೊನೆಗೆ ನರೇಗಾ ಯೋಜನೆಯ ಮೂಲಕ ಕೊಳವೆ ಬಾವಿ ರಿಚಾರ್ಜ್‌ ಪಿಟ್‌ ಮಾಡಿಕೊಂಡಿದ್ದಾರೆ.

ADVERTISEMENT

ನರೇಗಾ ಯೋಜನೆಯಡಿ ಕೊಳವೆ ಬಾವಿ ರಿಜಾರ್ಜ್‌ ಪಿಟ್‌ ಮಾಡಿದ್ದು ಜೀವನಕ್ಕೆ ಅನುಕೂಲವಾಯಿತು. ಹೇಗೆ ಮಾಡಿದ್ದೀರಿ ಎಂಬ ಕರೆಗಳು ಸಾಕಷ್ಟು ಬಂದಿದ್ದು, ತುಂಬಾ ಖುಷಿಯಾಗಿದೆ. ಕಷ್ಟ ಎಂದು ಕೈಕಟ್ಟಿ ಕುಳಿತರೆ ಯಾವ ಕೆಲಸವೂ ಆಗುವುದಿಲ್ಲ. ಮನಸ್ಸಿಟ್ಟು ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಜಾಸ್ಮಿನ್‌ ದಯಾಕರ್‌ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕಿ ಸುಮಲತಾ ಬಜಗೋಳಿ ತಿಳಿಸಿದರು.‌

ಗೌರವ್‌ ಕುಮಾರ್‌ ಶೆಟ್ಟಿ
ಚೇತನ್
ಬೇಸಿಗೆಯಲ್ಲಿ ನೀರಿನ ಅಭಾವ ಎದುರಿಸುವ ನಾವು ಮಳೆಗಾಲದಲ್ಲಿ ಸುರಿಯುವ ನೀರಿನ ಸ್ವಲ್ಪ ಭಾಗವನ್ನಾದರೂ ಜಾಸ್ಮಿನ್ ದಯಾಕರ್ ಅವರಂತೆ ಜಲ ಮೂಲಗಳಿಗೆ ಮರುಪೂರಣ ಮಾಡಿಕೊಂಡು ಯಶಸ್ವಿಯಾಗಬೇಕು
ಚೇತನ್ ಕೆ.ಜಿ. ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯಿತಿ ಕೊಪ್ಪ.

‘ಪ್ರತಿಯೊಬ್ಬರು ನರೇಗಾ ಯೋಜನೆಯ ಲಾಭ ಪಡೆಯಿರಿ’

ಮಲೆನಾಡು ಭಾಗದಲ್ಲಿ ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ನೀರಿನ ಕೊರತೆ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಮಳೆಯ ನೀರು ಹರಿದು ಹೋಗುವುದರಿಂದ ನೀರು ಭೂಮಿಯಲ್ಲಿ ಹೆಚ್ಚು ಇಂಗುವುದಿಲ್ಲ. ಈ ಸಮಸ್ಯೆಗೆ ಉತ್ತಮ ಕ್ರಮ ಎಂದರೆ ಬೋರ್‌ವೆಲ್‌ ರಿಜಾರ್ಜ್‌ ಪಿಟ್.‌ ಮಳೆಯ ನೀರನ್ನು ಮರುಪೂರಣ ಘಟಕದಲ್ಲಿ ಇಂಗಿಸಿದರೆ ಅಂತರ್ಜಲ ಮಟ್ಟವು ವೃದ್ಧಿಯಾಗಿ ಬೇಸಿಗೆಯಲ್ಲಿ ನೀರಿನ ಲಭ್ಯತೆ ಹೆಚ್ಚಾಗುತ್ತದೆ. ಪ್ರತಿಯೊಬ್ಬರು ನರೇಗಾ ಯೋಜನೆಯಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗೌರವ್‌ ಕುಮಾರ್‌ ಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.