ADVERTISEMENT

ಕಡೂರು ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿ ಮೆದುಳು ನಿಷ್ಕ್ರಿಯ: ಅಂಗಾಂಗ ದಾನ 

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 13:50 IST
Last Updated 21 ಸೆಪ್ಟೆಂಬರ್ 2022, 13:50 IST
ರಕ್ಷಿತಾ ಬಾಯಿ
ರಕ್ಷಿತಾ ಬಾಯಿ   

ಚಿಕ್ಕಮಗಳೂರು: ಅಪಘಾತದಲ್ಲಿ ಗಾಯಗೊಂಡು ಮೆದಳು ನಿಷ್ಕ್ರಿಯವಾಗಿರುವ ಯುವತಿ ರಕ್ಷಿತಾ ಬಾಯಿ ಅವರ ಅಂಗಾಂಗ ದಾನಕ್ಕೆ ಪೋಷಕರು ಒಪ್ಪಿಗೆ ನೀಡಿದ್ದಾರೆ.

ಅಂಗಾಂಗ ದಾನ ಪ್ರಕ್ರಿಯೆ ಆರಂಭವಾಗಿದೆ. ಇದೇ 22ರಂದು ಅಂಗಾಂಗಳನ್ನು ನೀಡುವ ಕಾರ್ಯ ನಡೆಯಲಿದೆ.

ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ತಂಡವು ಚಿಕಿತ್ಸೆಯಲ್ಲಿ ತೊಡಗಿದೆ. ಡಾ.ಚಂದ್ರಶೇಖರ್‌ ಸಾಲಿಮಠ್‌, ಡಾ.ಎಂ.ಪ್ರಶಾಂತ್‌, ಡಾ.ಕೆ.ನಾಗೇಶ್‌, ಡಾ.ಎಚ್‌.ಜಿ.ನಾಗರಾಜ್‌ ತಂಡದಲ್ಲಿದ್ದಾರೆ.

ADVERTISEMENT

ರಕ್ಷಿತಾ ಅವರು ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯದವರು. ನಗರ ಬಸವನಹಳ್ಳಿ ಸರ್ಕಾರಿ ಪದವಿಪೂವ ಕಾಲೇಜಿನ ವಿದ್ಯಾರ್ಥಿನಿ. ಇದೇ 18ರಂದು ಎಐಟಿ ವೃತ್ತದ ಸಮೀಪದಲ್ಲಿ ಬಸ್‌ನಿಂದ ಇಳಿಯುವಾಗ ಅಪಘಾತ ಸಂಭವಿಸಿತ್ತು. ಅವರು ತೀವ್ರವಾಗಿ ಗಾಯಗೊಂಡಿದ್ದರು.

‘ರಕ್ಷಿತಾ ಅವರನ್ನು ಶಿವಮೊಗ್ಗಕ್ಕೆ ಚಿಕಿತ್ಸೆ ಒಯ್ದಿದ್ದೆವು. ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ತಿಳಿಸಿದರು. 19ರಂದು ಚಿಕ್ಕಮಗಳೂರಿಗೆ ಕರೆತಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದೆವು’ ಎಂದು ಸಂಬಂಧಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಗಾಂಗ ದಾನದ ಬಗ್ಗೆ ರಕ್ಷಿತಾ ತಂದೆ ಶೇಖರ್‌ ನಾಯ್ಕ, ತಾಯಿ ಲಕ್ಷ್ಮಿ ಬಾಯಿ ಅವರಿಗೆ ವಿವರಿಸಲಾಗಿದೆ. ಹೃದಯ, ಶ್ವಾಸಕೋಶ, ಲಿವರ್‌, ಮೂತ್ರಕೋಶ, ನೇತ್ರಗಳನ್ನು ದಾನ ನೀಡಲಾಗುವುದು.

ಬೆಂಗಳೂರಿನ ಮಣಿಪಾಲ ಆಸ್ಪತ್ರೆಯವರು ಹೃದಯ, ಚೈನ್ನೈನ ಆಸ್ಪತ್ರೆಯವರು ಶ್ವಾಸಕೋಶ, ಚಿಕ್ಕಮಗಳೂರಿನ ನೇತ್ರ ಬ್ಯಾಂಕ್‌ಗೆ ಕಣ್ಣು ಗಳನ್ನು ನೀಡಲು ಸಿದ್ಧತೆ ನಡೆದಿದೆ. ಆಸ್ಪತ್ರೆಗಳ ತಂಡಗಳು ಶಸ್ತ್ರಚಿಕಿತ್ಸೆ ನಡೆಸಿ ಅಂಗಾಂಗ ಒಯ್ಯಲಿವೆ. 22ರಂದು ಬೆಳಿಗ್ಗೆ 10 ಗಂಟೆ ಪಕ್ರಿಯೆ ನಡೆಯಲಿದೆ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹನಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.