
ಚಿಕ್ಕಮಗಳೂರು: ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಿರುವ ಆರೋಪದಲ್ಲಿ ಕಂದಾಯ ಇಲಾಖೆಯ 11 ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.
ಕಡೂರು ತಾಲ್ಲೂಕು ಕಚೇರಿ ಸಾಮಾಜಿಕ ಭದ್ರತೆ ವಿಭಾಗದ ಹಿಂದಿನ ಶಿರಸ್ತೇದಾರ್ ಆಗಿದ್ದ ಬಿ.ಸಿ.ಕಲ್ಮರುಡಪ್ಪ ವಿಷಯ ನಿರ್ವಾಹಕ ಗಿರೀಶ್, ಕಂದಾಯ ಅಧಿಕಾರಿ ರವಿಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ಹನುಮಂತಪ್ಪ, ಕಾವ್ಯಾ ಟಿ.ಎಂ., ಕುಮಾರ್ ಜಿ.ಎಂ., ಲಿಂಗರಾಜು ಕೆ., ರವಿ ಕೆ.ಆರ್., ಎಸ್.ಎಂ.ಚನ್ನಬಸವಯ್ಯ, ನಿರ್ಮಲಾ ಟಿ.ಎಸ್., ರವಿಚಂದ್ರ ಎಸ್.ಗೊಗಿ ವಿರುದ್ಧ ಪ್ರಕರಣ ದಾಖಲಿಸಲು ಉಪವಿಭಾಗಾಧಿಕಾರಿಗೆ ಸೂಚಿಸಿದ್ದಾರೆ.
ಆದೇಶದಲ್ಲಿ ಅತಿ ಜರೂರು ಎಂದು ಕೂಡ ಉಲ್ಲೇಖಿಸಿದ್ದಾರೆ. ಉಪವಿಭಾಗಾಧಿಕಾರಿ ಅವರು ನ.17ರಂದು ಕಡೂರು ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ.
‘ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನವನ್ನು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿನವರು ಮಾತ್ರ ಈ ಯೋಜನೆಗೆ ಅರ್ಹರು. ಆದರೆ, ಸಾಮಾಜಿಕ ಭದ್ರತಾ ವಿಭಾಗದ ಶಿರಸ್ತೇದಾರ್ (ಉಪತಹಶೀಲ್ದಾರ್) ಬಿ.ಸಿ.ಕಲ್ಮರುಡಪ್ಪ ಅವರು ಲಾಗಿನ್ ದುರ್ಬಳಕೆ ಮಾಡಿಕೊಂಡು 35–40 ವಯಸ್ಸಿನವರಿಗೂ ವೇತನ ಮಂಜೂರು ಮಾಡಿದ್ದಾರೆ’ ಎಂಬ ದೂರುಗಳು ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿದ್ದವು.
ಅಂದಿನ ಉಪವಿಭಾಗಾಧಿಕಾರಿ ಅವರಿಂದ ಪ್ರಾಥಮಿಕ ತನಿಖೆ ಮಾಡಿಸಿದ್ದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಕಲ್ಮರುಡಪ್ಪ ಅವರನ್ನು ಅಮಾನತು ಮಾಡಿದ್ದರು. ವಿಚಾರಣೆ ನಡೆಸಿದ್ದ ತಹಶೀಲ್ದಾರ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಕ್ರಮವಾಗಿ ಪಿಂಚಣಿ ಮಂಜೂರು ಮಾಡಿ ಸರ್ಕಾರಕ್ಕೆ ₹9.03 ಲಕ್ಷ ನಷ್ಟ ಮಾಡಿದ್ದಾರೆ ಎಂದು ತಹಶೀಲ್ದಾರ್ ವರದಿಯಲ್ಲಿ ಉಲ್ಲೇಖಿಸಿದ್ದು, ಆದ್ದರಿಂದ ಅಷ್ಟೂ ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಂದಾಯ ಇಲಾಖೆ ಸೂಚನೆ ನೀಡಿದೆ.
ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಿರುವ ಬಗ್ಗೆ 2024ರ ಸೆ.19ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ಎಫ್ಐಆರ್ ದಾಖಲಿಸಲು ಮೀನಾಮೇಷ: ಆರೋಪ
‘ಅನರ್ಹರಿಗೆ ಮಂಜೂರು ಮಾಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ’ ಎಂದು ವಕೀಲ ನಾಗರಾಜ್ ಆರೋಪಿಸಿದ್ದಾರೆ. ‘ಪ್ರಾದೇಶಿಕ ಆಯುಕ್ತರಿಂದ ಸೆ.2ರಂದು ಜಿಲ್ಲಾಧಿಕಾರಿಗೆ ಪತ್ರ ಬಂದಿದೆ. ಆದರೆ ನ.10ರಂದು ಉಪವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ. ಪತ್ರದ ಮೇಲ್ಭಾಗದಲ್ಲಿ ಅ.17 ರಂದು ದಿನಾಂಕ ನಮೂದಿಸಲಾಗಿದೆ. ಸಹಿ ಮಾಡಿರುವ ದಿನಾಂಕ ನ.10 ಎಂದು ದಾಖಲಾಗಿದೆ. ತಪ್ಪು ಮಾಡಿರುವ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಗುತ್ತಿದೆ. ಈವರೆಗೆ ಎಫ್ಐಆರ್ ದಾಖಲಾಗಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.