ಕಳಸ: ಕಳಸ-ಕಳಕೋಡು ರಸ್ತೆಯ ಕೊಳಮಗೆ ಬಳಿ ಭದ್ರಾನದಿಗೆ ಗುರುವಾರ ಮಧ್ಯಾಹ್ನ ಪಿಕ್ಅಪ್ ವಾಹನ ಬಿದ್ದಿದ್ದು, ಯುವಕನೊಬ್ಬ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಗಣಪತಿಕಟ್ಟೆಯ ರಮೇಶ ಮತ್ತು ರವಿಕಲಾ ದಂಪತಿಯ ಮಗ ಶಮಂತ (22) ಗುರುವಾರ ಮಧ್ಯಾಹ್ನ 3ರ ವೇಳೆಗೆ ಕಳಕೋಡಿನಿಂದ ತೋಟದ ಕಾರ್ಮಿಕರನ್ನು ಕಳಸಕ್ಕೆ ಕರೆತರಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅತಿವೇಗದಲ್ಲಿ ಹೋದ ಪಿಕ್ಅಪ್ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಂಬ ಮೂರು ತುಂಡುಗಳಾಗಿ ಬಿದ್ದಿದ್ದು, ವಾಹನ ಭದ್ರಾನದಿಗೆ ಉರುಳಿರುವ ಶಂಕೆ ಇದೆ.
ನದಿಯಲ್ಲಿ 20 ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ವಾಹನ ಕಾಣುತ್ತಿಲ್ಲ. ವಾಹನ ಚಲಾಯಿಸುತ್ತಿದ್ದ ಶಮಂತ ವಾಹನದಲ್ಲೇ ಸಿಲುಕಿರಬೇಕು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಜನರು ಧಾವಿಸಿದ್ದು, ಕಳಸ ಪೊಲೀಸರು ಅಗತ್ಯ ಕ್ರಮ ವಹಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬಂದ ನಂತರ ಶವ ಪತ್ತೆಗೆ ಪ್ರಯತ್ನ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.