ಮೂಡಿಗೆರೆ: ‘ಅರಣ್ಯ ಇಲಾಖೆಗೆ ಕಂದಾಯ ಭೂಮಿಯಲ್ಲಿ ಗಿಡ ಬೆಳೆಸಲು ಜಿಲ್ಲಾಡಳಿತ ಅವಕಾಶ ನೀಡಬಾರದು’ ಎಂದು ಕಾಂಗ್ರೆಸ್ ಮುಖಂಡ ಎಂ.ಪಿ. ಕುಮಾರಸ್ವಾಮಿ ಒತ್ತಾಯಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಜಿಲ್ಲೆಯ ಲಕ್ಷಾಂತರ ನಿವಾಸಿಗಳು ನಿವೇಶನವಿಲ್ಲದೇ ಪರದಾಡುವಂತಾಗಿದೆ. ಎಷ್ಟೊ ಕುಟುಂಬಗಳು ಕೂಲಿ ಲೈನ್ನಲ್ಲಿಯೇ ಬದುಕುವಂತಾಗಿದ್ದು, ಈ ಸಮಸ್ಯೆಗೆ ಮೊದಲು ಮುಕ್ತಿಬೇಕಾಗಿದೆ. ಇಂತಹ ಹೊತ್ತಲ್ಲಿ ಜಿಲ್ಲಾಡಳಿತವು ಕಂದಾಯ ಇಲಾಖೆಗೆ ಒಳಪಡುವ ಭೂಮಿಯಲ್ಲಿ ಅರಣ್ಯ ಇಲಾಖೆ ಗಿಡ ನೆಡಲು ಅವಕಾಶ ಮಾಡಿಕೊಡಲು ಮುಂದಾಗಿದೆ. ಅರಣ್ಯ ಇಲಾಖೆ ಈಗ ಗಿಡ ನೆಟ್ಟು ನಾಲ್ಕೈದು ವರ್ಷ ಕಳೆದ ಬಳಿಕ ಈ ಭೂಮಿ ಅರಣ್ಯಕ್ಕೆ ಸೇರಿದ್ದು ಎಂದು ಹೇಳುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಅವಕಾಶ ನೀಡಬಾರದು ಎಂದರು.
ಡೀಮ್ಡ್ ಫಾರೆಸ್ಟ್ನಿಂದಾಗಿ ಈಗಾಗಲೇ ನಿವೇಶನಕ್ಕೆ ಜಾಗ ಗುರುತಿಸಲು ಅಡ್ಡಿ ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಕಂದಾಯ ಭೂಮಿಯಲ್ಲಿ ಗಿಡ ಬೆಳೆಸಲು ಬಿಟ್ಟರೆ ನಿವೇಶನ ಸಮಸ್ಯೆ ಎಂದಿಗೂ ಬಗೆಹರಿಯುವುದಿಲ್ಲ. ಆದ್ದರಿಂದ ನಗರ ವ್ಯಾಪ್ತಿಯ 5ಕಿ.ಮೀ ಒಳಗೆ ಸೇರಿದಂತೆ ಎಲ್ಲಿಯೂ ಕೂಡ ಕಂದಾಯ ಭೂಮಿಯಲ್ಲಿ ಗಿಡ ನೆಡಲು ಅರಣ್ಯ ಇಲಾಖೆಗೆ ಜಿಲ್ಲಾಡಳಿತ ಅವಕಾಶ ನೀಡಬಾರದು. ಈ ಪ್ರಕ್ರಿಯೆ ಮುಂದುವರೆಸುವುದಾದರೆ ಮೊದಲು ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸಬೇಕು. ಇಲ್ಲವಾದರೆ ಗಿಡ ಹಾಕುವ ಸ್ಥಳದಲ್ಲಿಯೇ ಅಹೋರಾತ್ರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.