ಶೃಂಗೇರಿ: ‘ಶೃಂಗೇರಿ ತಾಲ್ಲೂಕಿನಾದ್ಯಂತ ಪರವಾನಗಿ ಪಡೆಯದ ಅಂಗಡಿಗಳಲ್ಲಿ ಮೈಲುತುತ್ತಾ ಮತ್ತು ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ 2-3 ವರ್ಷಗಳಿಂದ ರೈತರು ಅಡಿಕೆ ತೋಟಕ್ಕೆ, ಕಾಫಿ ಮತ್ತು ಕಾಳುಮೆಣಸು ಬೆಳೆಗಳಿಗೆ ಮೈಲುತುತ್ತಾ ಸಿಂಪಡನೆ ಮಾಡಿದ್ದರೂ ಸಹ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗುತಿವೆ. ಇದರಿಂದ ಅನೇಕ ರೈತರಿಗೆ ಮೈಲುತುತ್ತಾದ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ' ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಹೇಳಿದರು.
ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ರೈತ ಸಂಘ ಹಮ್ಮಿಕೊಂಡಿದ್ದ ಮೈಲುತುತ್ತಾ ಮತ್ತು ರಸಗೊಬ್ಬರ ಅಂಗಡಿಗಳ ವಿರುದ್ಧ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನಾದ್ಯಂತ ಪರವಾನಗಿ ಹೊಂದಿ ಮಾರಾಟ ಮಾಡುತ್ತಿರುವ ಮೈಲುತುತ್ತಾ ಮತ್ತು ಗೊಬ್ಬರಗಳ ಮಾದರಿಗಳನ್ನು ಪಡೆದು ಸಂಬಂಧಪಟ್ಟ ಇಲಾಖೆಯಿಂದ ಗುಣಮಟ್ಟವನ್ನು ಪರೀಕ್ಷಿಸಿ, ಬಳಿಕ ವರದಿ ಬಂದ ನಂತರದಲ್ಲಿ ರೈತರಿಗೆ ನೀಡಬೇಕು. ಪರವಾನಗಿ ಹೊಂದದ ಅಂಗಡಿಗಳಲ್ಲಿ ಮೈಲುತುತ್ತಾ ಮತ್ತು ರಸಗೊಬ್ಬರಗಳನ್ನು ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.
ರೈತ ಸಂಘದ ಬಂಡ್ಲಪುರ ಶ್ರೀಧರ್ ರಾವ್ ಮಾತನಾಡಿ, ‘ಮೈಲುತುತ್ತಾ ಮತ್ತು ಗೊಬ್ಬರಗಳನ್ನು ಕೃಷಿ ಇಲಾಖೆಯ ಕೃಷಿ ನಿರ್ದೇಶಕರಿಗೆ ಪರಿಶೀಲಿಸಲು ತಿಳಿಸಿದಾಗ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎಂದು ಸಬೂಬು ಹೇಳಿದ್ದಾರೆ. ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪೂರ್ಣೇಶ್ ಉಳುವಳ್ಳಿ, ಅನಂತಯ್ಯ ಮೆಣಸೆ, ಚೆನ್ನಕೇಶವ, ಚಂದ್ರಪ್ಪ ತೆಕ್ಕೂರು, ಯೋಗಪ್ಪ ನರ್ಕುಳಿ, ನಾಗೇಶ್ ಕಲ್ಲಾಳ್ಳಿ, ಶ್ರೀಧರ್ ಹೊಳೆಕೊಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.