ತರೀಕೆರೆ: ಪಟ್ಟಣದದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ– 69 (ಮೊದಲು ರಾ.ಹೆ.206 ಆಗಿತ್ತು)ರಲ್ಲಿ ಗುಂಡಿಗಳು ಬಿದ್ದಿದ್ದು, ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಹೊಸೂರು ಕ್ರಾಸ್ನಿಂದ ಲಕ್ಕವಳ್ಳಿಕ್ರಾಸ್ವರೆಗೆ ನಿರ್ವಹಣೆ ಇಲ್ಲದೆ ಸೂರಗಿದೆ.
ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ದ್ವಿಚಕ್ರ ಸವಾರರು ಸರ್ಕಸ್ ಮಾಡಿಕೊಂಡು ಚಲಾಯಿಸಿದರೆ, ವೃದ್ಧರು, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ರಸ್ತೆ ದಾಟಲು ಪರದಾಡಬೇಕಾಗಿದೆ.
ಪಟ್ಟಣದಲ್ಲಿ ಹೆದ್ದಾರಿಯನ್ನು ವಿಸ್ತರಣೆ ಮಾಡದ ಪರಿಣಾಮ ಜನದಟ್ಟಣೆ ಹೆಚ್ಚಿರುವ ವೃತ್ತಗಳಾದ ಕೋಡಿಕ್ಯಾಂಪ್ನ ಓಂ ವೃತ್ತ, ಮಹಾತ್ಮ ಗಾಂಧಿ ವೃತ್ತ, ಎಂ.ಜಿ.ರಸ್ತೆ, ಲಿಂಗದಹಳ್ಳಿ ರಸ್ತೆಗಳಲ್ಲಿ ರಸ್ತೆ ದಾಟಲು ಪಾದಚಾರಿಗಳು ಸಾಹಸ ಪಡಬೇಕಾಗಿದೆ. ಇಲ್ಲಿ ಸೂಚನಾ ಫಲಕ ಮತ್ತು ಸಿಗ್ನಲ್ ಅಳವಡಿಸಬೇಕು. ಸಂಚಾರಿ ಪೋಲಿಸ್ ಅಧಿಕಾರಿ ನಿಯೋಜಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ಪ್ರತಿನಿತ್ಯ ಇಲ್ಲಿ ಸುಮಾರು 20 ಸಾವಿರ ವಾಹನ ಸಂಚರಿಸುತ್ತಾರೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ವಾಗೀಶ್. 2018 ರಿಂದ ಈವರೆಗೆ 245 ಅಪಘಾತಗಳು ನಡೆದಿವೆ. 58 ಮಂದಿ ಮೃತ ಪಟ್ಟಿದ್ದರೆ, 308 ಜನ ಗಾಯಗೊಂಡಿದ್ದಾರೆ ಎನ್ನುತ್ತವೆ ಪೊಲೀಸ್ ದಾಖಲೆಗಳು.
‘ರಸ್ತೆ ಬದಿಯಲ್ಲಿ ನೀರು ಹರಿದು ಹೋಗಲು ಸಮರ್ಪಕ ಚರಂಡಿಗಳಿಲ್ಲ. ರಸ್ತೆ ಇಕ್ಕಲಗಳಲ್ಲಿ ಚರಂಡಿ ಹಾಗೂ ಪಾದಚಾರಿಗಳ ಓಡಾಟಕ್ಕೆ ಮಾರ್ಗ ನಿರ್ಮಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಬೇಕು’ ಎನ್ನುತ್ತಾರೆ ವಕೀಲ ದೋರನಾಳ್ ಸುರೇಶ್.
ಮಳೆಗಾಲ ಮುಗಿದ ಕೂಡಲೇ ಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕ ರಾಜು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.