
ಯಗಟಿ (ಕಡೂರು): ಯಗಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರ ಪಟ್ಟಿ ತಯಾರಿಸಿ, ನಿವೇಶನ ಹಂಚಿಕೆಗಾಗಿ ಸರ್ಕಾರಿ ಜಾಗ ಗುರುತಿಸಿ ಎಂದು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಗಟಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಅಥವಾ ನಿವೇಶನ ರಹಿತರ ಪಟ್ಟಿ ದೊಡ್ಡದಿದೆ. ಜನಸ್ಪಂದನದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ಬಹಳಷ್ಟು ಇದೇ ವಿಷಯ ಕುರಿತಾಗಿ ಇದೆ. ಬರುವ ಜನವರಿಯಲ್ಲಿ ಸರ್ಕಾರವು ವಸತಿ ರಹಿತರಿಗೆ ಮನೆಗಳನ್ನು ಮಂಜೂರು ಮಾಡಲಿದ್ದು, ಇಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮದ್ಯಪಾನದ ಹಾವಳಿ ತಡೆಯುವ ಕುರಿತು ಅರ್ಜಿ ಸಲ್ಲಿಸಿದ್ದ ಮಹಿಳೆಯರು, ಮನೆಯಲ್ಲಿ ಗಂಡ- ಮಕ್ಕಳು ಕುಡಿದು ಬರುತ್ತಾರೆ. ನಾವು ನಿತ್ಯ ₹ 300 ಕೂಲಿಗಾಗಿ ಪರಿತಪಿಸುತ್ತಿದ್ದೇವೆ. ಯುವಕರು, ಪುರುಷರು ಮದ್ಯದ ದಾಸರಾಗುತ್ತಿದ್ದು, ಗ್ರಾಮದ ಸಾಕಷ್ಟು ಮನೆಗಳಲ್ಲಿ ಮಹಿಳೆಯರು ಮದ್ಯ ಮಾರಾಟ ಮಾಡುವ ವ್ಯವಸ್ಥೆ ಇದೆ. ಶಾಲಾ ಕಾಲೇಜು ಮೈದಾನದಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಹಾಕುತ್ತಾರೆ. ನಮ್ಮ ಮಕ್ಕಳೇ ಕುಡಿದು ಮಧ್ಯರಾತ್ರಿ ಮನೆಗೆ ಬರುತ್ತಾರೆ. ದಯವಿಟ್ಟು ಇದಕ್ಕೆ ಕಡಿವಾಣ ಹಾಕಿ ಎಂದು ಅಳಲು ತೋಡಿಕೊಂಡರು.
ವ್ಯವಸ್ಥೆಯ ಬಗ್ಗೆ ಸಿಡಿಮಿಡಿಗೊಂಡ ಶಾಸಕ ಆನಂದ್, ಅಬಕಾರಿ ಇಲಾಖೆಯವರು, ಪೊಲೀಸರು ಏನು ಮಾಡುತ್ತಿದ್ದೀರಿ, ಬರೀ ಕೇಸು ದಾಖಲಿಸುವುದಲ್ಲ, ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಿ. ಅಬಕಾರಿ ಇಲಾಖೆಯವರು ಮನೆಗಳಲ್ಲಿ ಮದ್ಯ ಮಾರಾಟದ ಬಗ್ಗೆ ಏನು ಕ್ರಮ ವಹಿಸಿದ್ದೀರಿ? ಲೈಸೆನ್ಸ್ ಹೊಂದಿರುವರು ಕೂಡ ನಿಗದಿತ ಸಮಯಕ್ಕೆ ಅಂಗಡಿ ತೆರೆದು ಸಮಯಕ್ಕೆ ಸರಿಯಾಗಿ ಬಾಗಿಲು ಹಾಕುವಂತೆ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
‘ಗ್ರಾಮದಲ್ಲಿ ಮುದಿಯಪ್ಪ ಬಡಾವಣೆ ಹೊಸದಾಗಿ ನಿರ್ಮಿತವಾಗಿದ್ದು, ಅಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಪಂಚಾಯಿತಿಯವರು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಸದಸ್ಯರು ತಮಗೆ ಬೇಕಾದಲ್ಲಿ ರಸ್ತೆ, ಚರಂಡಿ ಮಾಡಿಕೊಳ್ಳುತ್ತಾರೆ, ನಮ್ಮ ಕೆಲವು ಮನೆಗಳನ್ನು ಬಿಟ್ಟು ರಸ್ತೆ ನಿರ್ಮಿಸಿದ್ದಾರೆ. ನಾವು ಕೇಳಿದರೆ ಕೆಲಸ ಮಾಡಲು ಹಣವಿಲ್ಲ ಎನ್ನುತ್ತಾರೆ. ಶಾಸಕರು ಸ್ಥಳಕ್ಕೆ ಭೇಟಿ ನೀಡಲೇಬೇಕು ಎಂದು ಮಹಿಳೆಯರು, ವೃದ್ಧರು ಪಟ್ಟು ಹಿಡಿದರು. ಆಕ್ರೋಶಗೊಂಡವರನ್ನು ಸಮಾಧಾನಪಡಿಸಿದ ಶಾಸಕರು, ಸ್ಥಳಕ್ಕೆ ಭೇಟಿ ನೀಡಿ ತಮ್ಮ ಅನುದಾನದಲ್ಲಿ ರಸ್ತೆ ನಿರ್ಮಿಸಿ, ಪಂಚಾಯಿತಿಗೆ ಅನುದಾನದಲ್ಲಿ ಚರಂಡಿ ನಿರ್ಮಿಸಲಾಗುವುದು ಎಂದು ಕೊಡುವ ಭರವಸೆ ನೀಡಿದರು. ಬೂದು ನೀರು ನಿರ್ವಹಣೆ (ಜಿಡಬ್ಲ್ಯುಎಂ) ಕಾಮಗಾರಿ ಅಡಿ ₹1.17 ಕೋಟಿ ಮಂಜೂರಾಗಿದ್ದು ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಕೃಷಿಕ ಮಲ್ಲಿಕಾರ್ಜುನಪ್ಪ ತಾವು ಬೆಳೆದ ಮೂರು ಎಕರೆ ರಾಗಿ ಬೆಳೆಯು ಮಳೆ ನೀರು ನಿಂತು ಕೊಳೆತು ನಷ್ಟವಾಗಿದ್ದು, ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ ಎಂ.ಅಶೋಕ, ಸರ್ಕಾರವು ಬೆಳೆ ಹಾನಿಗೆ ಎಕರೆಗೆ ₹3,400 ಪರಿಹಾರ ಘೋಷಿಸಿದ್ದು ಇನ್ನೂ ₹3,400 ಸೇರಿಸಲು ಚರ್ಚೆಗಳು ಸರ್ಕಾರದ ಹಂತದಲ್ಲಿ ನಡೆದಿದೆ. ಗ್ರಾಮ ಆಡಳಿತಾಧಿಕಾರಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಯಗಟಿ ಕೆರೆಯ ಏರಿ ಮೇಲೆ ಹರಿಸಮುದ್ರ ಕಡೆ ತೆರಳುವ ಮಾರ್ಗದಲ್ಲಿ ಸಾಕಷ್ಟು ಗಿಡಗಂಟಿಗಳು ಬೆಳೆದು ರಸ್ತೆ ಕಾಣುವುದಿಲ್ಲ, ತೆರವು ಮಾಡುವಂತೆ ಕೆಲವರು ಒತ್ತಾಯಿಸಿದರು. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮಂಜುನಾಥ್ ತೆರವು ಮಾಡಿಸುವುದಾಗಿ ತಿಳಿಸಿದರು. ಯಗಟಿ ಕೆರೆಯಲ್ಲಿ ನೀರು ಅಧಿಕವಾಗಿ ಸಂಗ್ರಹವಾಗಿದ್ದು ನೀರು ಹರಿದುಹೋಗುವ ತೂಬು ಮುಚ್ಚಲಾಗಿದೆ. ಇದರಿಂದ ಕೆರೆಗೂ ಹಾನಿಯಾಗುವ ಸಂಭವವಿದ್ದು ಕೋಡಿಯನ್ನು ತಗ್ಗಿಸಿ ನೀರು ಹರಿದು ಹೋಗಲು ಕ್ರಮ ವಹಿಸಬೇಕು ಎಂದು ರೈತರೊಬ್ಬರು ಮನವಿ ಮಾಡಿದರು.
ಸಣ್ಣ ನೀರಾವರಿ ಮತ್ತು ವಿಶ್ವೇಶ್ವರಯ್ಯ ಜಲಜೀವನ್ ಮಿಷನ್ ಎಂಜಿನಿಯರ್ಗಳು ಸೇರಿ ಇದಕ್ಕೆ ಪರಿಹಾರ ಕಂಡುಕೊಳ್ಳಲು, ತೂಬಿನ ಬದಲಾಗಿ ಕೆರೆಗೆ ಗೇಟ್ ಅಳವಡಿಸಲು ಮತ್ತು ರಿವೀಟ್ಮೆಂಟ್ ಕಾಮಗಾರಿಯೂ ಸೇರಿ ಒಂದು ಯೋಜನೆ ಸಿದ್ಧಪಡಿಸುವಂತೆ ಶಾಸಕರು ಸೂಚಿಸಿದರು.
ಪಡಿತರ ಚೀಟಿ ಕೋರಿ ಬಂದ ಅರ್ಜಿಗೆ ಉತ್ತರಿಸಿದ ಆಹಾರ ನಿರೀಕ್ಷಕ ಎಚ್.ಶ್ರೀನಿವಾಸ್, ಈಗಾಗಲೇ 916 ಅರ್ಜಿಗಳು ಪಡಿತರ ಚೀಟಿಗಾಗಿ ಬಾಕಿ ಇವೆ. ಇರುವ ಅರ್ಜಿಗಳ ಬಗ್ಗೆ ಕ್ರಮ ವಹಿಸಿ ಹೊಸ ಅರ್ಜಿ ಸಲ್ಲಿಸಲು ಸದ್ಯದಲ್ಲಿಯೇ ಆದೇಶವಾಗಲಿದ್ದು, ನಂತರ ರೇಷನ್ ಕಾರ್ಡ್ ವಿತರಿಸಲಾಗುವುದು ಎಂದರು. ಹನುಮನಹಳ್ಳಿ-ಮುಗಳಿ ಕಟ್ಟೆ, ಬೂಕನಗುಂದಿ-ಸೀತಾಪುರ ರಸ್ತೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.
ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್.ಪ್ರವೀಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ವಿಶ್ವನಾಥ್, ಉಪಾಧ್ಯಕ್ಷ ವೈ.ಎಸ್.ಸುನಿಲ್, ಸದಸ್ಯರಾದ ಗೋವಿಂದಪ್ಪ, ಗಾಯತ್ರಿ, ವೈ.ಎಚ್.ಮೂರ್ತಿ, ಸತೀಶ್, ಮಂಜುನಾಥ್, ಶಂಕರ್ ನಾಯಕ್, ಪಾರ್ವತಿಬಾಯಿ, ಸಾಕಮ್ಮ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.