ಕಡೂರು: ರಾಗಿ ಬೆಳೆಗೆ ಬೆಳೆವಿಮೆ ಪಾವತಿಸಲು ಆ. 16 ಕಡೆಯ ದಿನವಾಗಿದ್ದು, ರೈತರು ವಿಮಾ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಅಶೋಕ್ ಎಂ. ರೈತರಿಗೆ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ 2,266 ಕ್ವಿಂಟಲ್ ಉತ್ತಮ ಗುಣಮಟ್ಟದ ರಾಗಿ ಬಿತ್ತನೆ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದ್ದು, 40 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ತಾಲ್ಲೂಕಿನಲ್ಲಿ ಬಹುತೇಕ ರಾಗಿ ಬಿತ್ತನೆ ಕಾರ್ಯ ಮುಗಿದಿದ್ದು, ಕಳೆದವಾರ ಸುರಿದ ಮಳೆ ರಾಗಿಗೆ ಪೂರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ (ಬರ), ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ಬೆಳೆವಿಮೆ ) ಯೋಜನೆಯಡಿ ಎಕರೆಗೆ ₹344 ವಿಮಾಕಂತು ಕಟ್ಟಿ, ಹೆಸರನ್ನು ನೋಂದಾಯಿಸಿಕೊಂಡು ನಷ್ಟದ ಸಂದರ್ಭದಲ್ಲಿ ಪರಿಹಾರಕ್ಕೆ ಅರ್ಹರಾಗುವಂತೆ ಅವರು ಕರೆ ನೀಡಿದ್ದಾರೆ.
ರೈತರು, ವಿಮಾ ಕಂತನ್ನು ಕಟ್ಟಲು ನಿಗದಿತ ನಮೂನೆಯ ಅರ್ಜಿಯೊಂದಿಗೆ ಪಹಣಿ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ದೊಂದಿಗೆ ಹತ್ತಿರವಿರುವ ಬ್ಯಾಂಕ್/ಸಾಮಾನ್ಯ ಸೇವಾಕೇಂದ್ರ/ ಗ್ರಾಮಒನ್ ಕೇಂದ್ರ ಸಂಪರ್ಕಿಸಬಹುದು. ಬೆಳೆ ವಿಮೆ ನೋಂದಣಿಗೆ Fruits ID ಕಡ್ಡಾಯ. ರಾಗಿ ಬೆಳೆಗೆ ವಿಮಾ ಮೊತ್ತ ಪ್ರತಿ ಎಕರೆಗೂ ₹17 ಸಾವಿರವಾಗಿದೆ. ಬೆಳೆವಿಮೆ/ಬರ ಪರಿಹಾರ/ಬೆಂಬಲ ಬೆಲೆ ಯೋಜನೆಯ ಪ್ರಯೋಜನಕ್ಕೆ ಬೆಳೆ ಸಮೀಕ್ಷೆ ಕಡ್ಡಾಯವಾಗಿದ್ದು, ರೈತರು ಸ್ವತಃ ತಮ್ಮ ಮೊಬೈಲ್ನಿಂದಲೇ ಬೆಳೆ ಸಮೀಕ್ಷೆ 2025-26 ಆ್ಯಪ್ ಮೂಲಕ ಸಮೀಕ್ಷೆ ಮಾಡಬಹುದು ಅಥವಾ ಕಂದಾಯ ಇಲಾಖೆಯವರು ನೇಮಿಸಿದ ಖಾಸಗಿ ಸಿಬ್ಬಂದಿ ಮೂಲಕ ಬೆಳೆ ಸಮೀಕ್ಷೆ ಮಾಡಿಸಬೇಕು. ಬೆಳೆ ಸಮೀಕ್ಷೆಯಲ್ಲಿ ತಪ್ಪಾದರೆ ಬೆಳೆದರ್ಶಕ್ ಆ್ಯಪ್ ಮೂಲಕ ನಿಗದಿತ ಸಮಯದೊಳಗೆ ಆಕ್ಷೇಪಣೆ ಸಲ್ಲಿಸಿ, ಸರಿಪಡಿಸಲು ಅವಕಾಶವಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಸರಬರಾಜಾಗುತ್ತಿದ್ದು, ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ 289 ಮೆಟ್ರಿಕ್ ಟನ್ ಯೂರಿಯಾ, 294 ಮೆಟ್ರಿಕ್ ಟನ್ ಎಂಒಪಿ, 1,330 ಮೆಟ್ರಿಕ್ ಟನ್ ಎನ್ಪಿಕೆ, 78 ಮೆಟ್ರಿಕ್ ಟನ್ ಎಸ್ಎಸ್ಪಿ, 30 ಮೆಟ್ರಿಕ್ ಟನ್ ಡಿಎಪಿ ಸೇರಿ ಒಟ್ಟು 2,021 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಅಶೋಕ್ ಎಂ. ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.