ADVERTISEMENT

ಸಂಚಾರ: ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಯಾತನೆ

ಮಾಗುಂಡಿ- ಕಳಸ- ಎಸ್.ಕೆ.ಬಾರ್ಡರ್ ರಸ್ತೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 16:25 IST
Last Updated 6 ಸೆಪ್ಟೆಂಬರ್ 2022, 16:25 IST
ಬಾಳೆಹೊಳೆಯಲ್ಲಿ ಹದಗೆಟ್ಟ ರಸ್ತೆಯಿಂದಾಗಿ ಬಸ್ಸಿನ ಹೌಸಿಂಗ್ ತುಂಡಾಗಿರುವುದು
ಬಾಳೆಹೊಳೆಯಲ್ಲಿ ಹದಗೆಟ್ಟ ರಸ್ತೆಯಿಂದಾಗಿ ಬಸ್ಸಿನ ಹೌಸಿಂಗ್ ತುಂಡಾಗಿರುವುದು   

ಕಳಸ: ರಸ್ತೆಯಲ್ಲಿನ ಗುಂಡಿಗಳಿಂದಾಗಿ ಕಳಸ-ಹೊರನಾಡು ರಸ್ತೆಯಲ್ಲಿ ಖಾಸಗಿ ಬಸ್ ಟೈರ್‌ ಸಿಡಿದು ಸುದ್ದಿಯಾಗಿ ವಾರ ಪೂರ್ಣಗೊಳ್ಳುವ ಮೊದಲೇ ಕಳಸ-ಬಾಳೆಹೊಳೆ ರಸ್ತೆಯಲ್ಲಿ ಸೋಮವಾರ ಖಾಸಗಿ ಬಸ್ಸಿನ ಹೌಸಿಂಗ್ ತುಂಡಾಗಿ ನೆಲಕ್ಕೆ ಬಿದ್ದಿದೆ.

ಮಾಗುಂಡಿ- ಕಳಸ- ಎಸ್.ಕೆ.ಬಾರ್ಡರ್ ರಸ್ತೆ ದುರಸ್ತಿ ಮಾಡಿಸುವಂತೆ 2 ವರ್ಷಗಳಿಂದ ಒತ್ತಾಯ ಕೇಳಿಬಂದಿದ್ದರೂ, ಲೋಕೋಪಯೋಗಿ ಇಲಾಖೆ ಸ್ಪಂದಿಸಿಲ್ಲ ಎಂಬ ಆರೋಪಗಳಿವೆ. ಇದನ್ನು ಹೆದ್ದಾರಿ ಎಂದು ಕರೆಯುವಂತೆಯೇ ಇಲ್ಲ. ನೂರಾರು ಗುಂಡಿಗಳು ಇರುವ ಹೆದ್ದಾರಿಯಲ್ಲಿ ರಸ್ತೆಯನ್ನು ಹುಡುಕಿ ವಾಹನ ಚಲಾಯಿಸಬೇಕಿದೆ ಎಂದು ವಾಹನ ಚಾಲಕರು ದೂರುತ್ತಾರೆ.

ಮಾಗುಂಡಿ- ಕಳಸ- ಕುದುರೆಮುಖ- ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿ ದುರಸ್ತಿ ಆಗಬೇಕು ಎಂದು ಬೇಸಿಗೆಯಲ್ಲಿ ಸ್ಥಳೀಯರು ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದರು.

ADVERTISEMENT

ಆದರೆ, ಯೋಜನೆ ಸಿದ್ಧಪಡಿಸಿದ ಲೋಕೋಪಯೋಗಿ ಇಲಾಖೆ ಬಳಿಕ ಕ್ರಮ ಕೈಗೊಂಡಿಲ್ಲ. ರಸ್ತೆ ಅಭಿವೃದ್ಧಿ ಪಡಿಸಿಲ್ಲ ‌ಎಂದು ರಸ್ತೆ ಬಳಕೆದಾರರು ದೂರುತ್ತಾರೆ.

‘ಪಕ್ಕದ ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲ್ಲೂಕಿನಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದ ಕೂಡಲೇ ದುರಸ್ತಿ ಮಾಡುತ್ತಾರೆ. ಈ ರಸ್ತೆಯ ವಿಚಾರದಲ್ಲಿ ಇಲಾಖೆಯ ಸ್ಪಂದನೆ ಅತ್ಯಂತ ನಿರ್ಲಕ್ಷ್ಯದಿಂದ ಕೂಡಿದೆ’ ಎಂದು ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಕೆ.ಬಾಲಕೃಷ್ಣ ಭಟ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.