ADVERTISEMENT

ಆರ್‌ಟಿಇ: 80 ಸೀಟುಗಳಿಗೆ 64 ಅರ್ಜಿ

ನಿಯಮ ಮಾರ್ಪಾಡು; ಶಾಲೆ, ಸೀಟು ಸಂಖ್ಯೆ ಕುಸಿತ

ಬಿ.ಜೆ.ಧನ್ಯಪ್ರಸಾದ್
Published 10 ಮೇ 2019, 20:15 IST
Last Updated 10 ಮೇ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆರ್‌ಟಿಇ (ಶಿಕ್ಷಣ ಹಕ್ಕು) ಕಾಯ್ದೆಯಡಿ ಈ ಬಾರಿ 15 ಶಾಲೆಗಳಲ್ಲಿ 80 ಸೀಟುಗಳಿಗೆ 64 ಅರ್ಜಿಗಳು ಸಲ್ಲಿಕೆಯಾಗಿವೆ.

ಕಳೆದ ಬಾರಿ 164 ಶಾಲೆಗಳಲ್ಲಿ 1,724 ಸೀಟುಗಳಿದ್ದವು, ಈ ಪೈಕಿ 1,275ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರು. ರಾಜ್ಯ ಸರ್ಕಾರವು ಆರ್‌ಟಿಇ ನಿಯಮವನ್ನು ಪರಿಷ್ಕರಿಸಿದ್ದು, ಈ ಬಾರಿ ಸೀಟುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಜಿಲ್ಲೆಯ ಒಂಬತ್ತು ವಲಯಗಳ ಪೈಕಿ ಕೊಪ್ಪ, ಎನ್.ಆರ್‌.ಪುರ ಮತ್ತು ಶೃಂಗೇರಿ ವಲಯಗಳಲ್ಲಿ ಆರ್‌ಟಿಇ ಸೀಟುಗಳೇ ಇಲ್ಲ. ಮೂಡಿಗೆರೆ ವಲಯದಲ್ಲಿ ಇರುವುದು ಒಂದು ಸೀಟು ಮಾತ್ರ.

ADVERTISEMENT

ಕಳೆದ ವರ್ಷ ಆರ್‌ಟಿಇ ಸೀಟುಗಳಿಗೆ ಅರ್ಜಿಗಳು ಜಾಸ್ತಿ ಇದ್ದವು. ಈ ಬಾರಿ ಸೀಟುಗಳು ಕಡಿಮೆ, ಅರ್ಜಿಗಳೂ ಕಡಿಮೆ.

15 ಶಾಲೆಗಳು: ತರೀಕೆರೆ ವಲಯದಲ್ಲಿ ತರೀಕೆರೆಯ ರೋಟರಿ ವಿದ್ಯಾಶಾಲೆ, ಅಜ್ಜಂಪುರದ ಕನ್ನಡ ನೂತನ ಶಾಲೆ, ಬೀರೂರು ವಲಯದಲ್ಲಿ ಅಕ್ಕಮಹಾದೇವಿ ಶಾಲೆ, ಕ್ರಮುಕ ಶಾಲೆ, ಕಡೂರು ವಲಯದಲ್ಲಿ ವಿಶ್ವಭಾರತಿ ಶಾಲೆ, ಶ್ರವಣದೋಷ ಮಕ್ಕಳ ವಸತಿಯುತ ಶಾಲೆ, ಶ್ರೀಶಿವಯೋಗಿ ಕನ್ನಡ ಶಾಲೆ, ಚಿಕ್ಕಮಗಳೂರು ವಲಯದಲ್ಲಿ ಅಲ್‌ಅಮೀನ್‌ ಉರ್ದುಶಾಲೆ, ಕಮಲಾಬಾಯಿನಾಗರಾಜ್‌ ಸಿಂಗ್‌ ಶಾಲೆ, ಅಂಧಮಕ್ಕಳ ಶಾಲೆ, ಬಸವನಹಳ್ಳಿಯ ಮಹಿಳಾಶ್ರಮ ಶಾಲೆ, ಬಿಗ್ಗನಹಳ್ಳಿಯ ಚೇತನಾ ಕಾನ್ವೆಂಟ್‌, ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆ, ಶಂಕರಪುರದ ಭಾರತಿ ವಿದ್ಯಾಸಂಸ್ಥೆ, ಮೂಡಿಗೆರೆ ವಲಯದಲ್ಲಿ ಬಣಕಲ್‌ನ ಶ್ರೀವಿದ್ಯಾ ಶಾಲೆ.

‘ಪರಿಷ್ಕೃತ ನಿಯಮಾನುಸಾರ ಸರ್ಕಾರಿ ಶಾಲೆ ಇರುವ ಕಡೆಗಳಲ್ಲಿನ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಪ್ರವೇಶಾತಿಗೆ ಅವಕಾಶ ಇಲ್ಲ. ಹೀಗಾಗಿ, ಈ ಬಾರಿ ಆರ್‌ಟಿಇ ಶಾಲೆಗಳ ಸಂಖ್ಯೆ ಕಡಿಮೆಯಾಗಿದೆ. ಹಿಂದಿನ ವರ್ಷದಂತೆ ಈ ಬಾರಿ ಸೀಟುಗಳನ್ನು ಹಂಚಿಕೆ ಮಾಡಬೇಕೆಂದು ಕೆಲ ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ’ ಎಂದು ಡಿಡಿಪಿಐ ಸಿ.ಶಿವನಂಜಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರ್‌ಟಿಇ ಸೀಟುಗಳ ಮೊದಲ ಹಂತದ ಪ್ರಕ್ರಿಯೆ ಮುಗಿದಿದೆ. ಶಾಲೆಗಳಲ್ಲಿ ಪ್ರವೇಶಾತಿ ಪಡೆಯಲು ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಆರ್‌ಟಿಇ ಕಾಯ್ದೆ ಜಾರಿಗೊಳಿಸಿದ್ದಾರೆ. ಈ ವರ್ಷ ನಿಯಮ ಮಾರ್ಪಾಡು ಮಾಡಿದ್ದು ಸರಿಯಲ್ಲ. ಹಿಂದಿನ ವರ್ಷದಂತೆಯೇ ಸೀಟು ಹಂಚಿಕೆ ಮಾಡಬೇಕಿತ್ತು. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಗಮನ ಹರಿಸಬೇಕು’ ಎಂದು ಬಸವನಹಳ್ಳಿಯ ಹೂವು ವ್ಯಾಪಾರಿ ಮಂಜುನಾಥ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ ಆರ್‌ಟಿಇ ಸೀಟು, ಅರ್ಜಿ ಅಂಕಿಅಂಶ

ವಲಯ ಶಾಲೆ ಸೀಟು ಅರ್ಜಿ

ಬೀರೂರು 2; 18; 9;

ಚಿಕ್ಕಮಗಳೂರು 7; 30; 21;

ಕಡೂರು 3; 9; 14;

ಮೂಡಿಗೆರೆ 1; 12; –;

ತರೀಕೆರೆ 2; 11; 20;

ಒಟ್ಟು 15; 80; 64;

* ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಸವಲತ್ತು, ಕಲಿಕೆಗೆ ಪೂರಕ ವಾತಾವರಣ ಎಲ್ಲ ಇವೆ. ಆರ್‌ಟಿಇ ನಿಯಮ ಮಾರ್ಪಾಡಿನಿಂದ ಸರ್ಕಾರಿ ಶಾಲೆಗಳ ಉಳಿವಿಗೆ ಅನುಕೂಲವಾಗಿದೆ.

–ಸಿ.ಶಿವನಂಜಯ್ಯ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.