ADVERTISEMENT

ಸಮ್ಮೇಳನಾಧ್ಯಕ್ಷರ ನುಡಿ- ಕನ್ನಡ ಅಲಕ್ಷಿಸುವವರನ್ನು ದಾರಿಗೆ ತರಬೇಕು

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 10:33 IST
Last Updated 18 ಜನವರಿ 2019, 10:33 IST
ಮೂಡಿಗೆರೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ. ಡಿ.ಎಸ್.ಜಯಪ್ಪಗೌಡ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆದೊಯ್ಯಲಾಯಿತು.
ಮೂಡಿಗೆರೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ. ಡಿ.ಎಸ್.ಜಯಪ್ಪಗೌಡ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆದೊಯ್ಯಲಾಯಿತು.   

ಹೇಮಾವತಿ ಪ್ರಧಾನ ಸಾಹಿತ್ಯ ವೇದಿಕೆ (ಮೂಡಿಗೆರೆ): ಹೇಮಾವತಿ ಪ್ರಧಾನ ಸಾಹಿತ್ಯ ವೇದಿಕೆ (ಮೂಡಿಗೆರೆ): ‘ಕನ್ನಡ ಬಲ್ಲ ಅಧಿಕಾರಿಗಳು ಹಾಗೂ ಕನ್ನಡ ಕಲಿಯಲು ಅಲಕ್ಷಿಸುವವರನ್ನು ದಾರಿಗೆ ತರಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಡಿ.ಎಸ್.ಜಯಪ್ಪಗೌಡ ಅಭಿಪ್ರಾಯಪಟ್ಟರು.

‘ಸರ್ಕಾರವು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಿ ಬಹಳಷ್ಟು ವರ್ಷಗಳೇ ಕಳೆದಿವೆ. ಸರ್ಕಾರಿ ನೌಕರರಿಗೆ ಕನ್ನಡದ ಬಳಕೆ ಕಲಿಸಲು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೂ ನಮ್ಮಲ್ಲಿ ಅಲಕ್ಷ್ಯ ಭಾವನೆ ಕಡಿಮೆಯಾಗಿಲ್ಲ. ಯಾವುದೇ ಒಂದು ಭಾಷೆಯು ಶಿಕ್ಷಣ ಮಾಧ್ಯಮವಾಗಲು ವಿಫಲವಾದಾಗ ಆ ಭಾಷೆಗೆ ಆತಂಕ ಎದುರಾಗುತ್ತದೆ. ಕನ್ನಡ ಭಾಷೆಗೂ ಶಿಕ್ಷಣ ಮಾಧ್ಯಮದಿಂದ ಈ ಆತಂಕ ಎದುರಾಗಿದೆ. ಈ ಆತಂಕವನ್ನು ನಿವಾರಿಸಬೇಕಾದ ಅನಿವಾರ್ಯತೆಯಿದೆ’ ಎಂದು ಸಮ್ಮೇಳನಾಧ್ಯಕ್ಷರ ನುಡಿಯಲ್ಲಿ ಹೇಳಿದರು.

‘ಸರ್ಕಾರ ಇತ್ತೀಚೆಗೆ ಸಾವಿರ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ನಿರ್ಧಾರ ಪ್ರಕಟಿಸಿತು. ಕಂಬಾರರು ಸೇರಿದಂತೆ ಹಲವರು ಇದನ್ನು ವಿರೋಧಿಸಿದರು. ಖಾಸಗಿ ಪ್ರಾಥಮಿಕ ಶಾಲೆಗಳನ್ನು ರಾಷ್ಟ್ರೀಕರಣಗೊಳಿಸಿ, ಅಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಾಲೆಗಳನ್ನು ನಡೆಸುವಂತಾಗಬೇಕು ಎಂಬುದು ಒತ್ತಾಯವಾಗಿದ್ದು, ಅದನ್ನು ನಿರ್ಣಯವಾಗಿಯೂ ಸ್ವೀಕರಿಸಲಾಗಿದೆ. ಈ ನಿರ್ಣಯ ತುರ್ತಾಗಿ ಜಾರಿಗೊಳ್ಳಬೇಕಿದೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯು ಪ್ರವಾಸಿ ಕೇಂದ್ರಕ್ಕೆ ಸೂಕ್ತವಾದ ತಾಣವಾಗಿದ್ದು, ಜಿಲ್ಲೆಗೆ ಮೂಲಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಜಿಲ್ಲೆಗೊಂದು ತೋಟಗಾರಿಕೆ ವಿಶ್ವವಿದ್ಯಾಲಯದ ಅಗತ್ಯವಿದ್ದು, ಈಗಿರುವ ತೋಟಗಾರಿಕೆ ಕಾಲೇಜಿನಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಅವಕಾಶವಿದ್ದು, ಅದನ್ನು ಜಾರಿಗೊಳಿಸುವ ನಿಷ್ಠೆ ಕಾಣಬೇಕಿದೆ. ಸಮಾಜದಲ್ಲಿ ಸಾಹಿತಿಗಳು, ಕಲಾವಿದರು ಹಾಗೂ ಜನಸಾಮಾನ್ಯರ ನಡುವೆ ಇರುವ ಅಂತರ ಕಡಿಮೆಯಾಗಬೇಕಿದೆ. ಸಾಹಿತಿಗಳು ಹಾಗೂ ಕಲಾವಿದರ ಪ್ರಯೋಜನವನ್ನು ಜನಸಾಮಾನ್ಯರು ಪಡೆಯುವಂತಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.