
ಶೆಟ್ಟಿಕೊಪ್ಪ(ನರಸಿಂಹರಾಜಪುರ): ಮಾಸಿಕ ಸಂತೆಗಳು ಎನ್ಆರ್ಎಲ್ಎಂ ಸಂಜೀವಿನಿಯಡಿ ಬರುವ ಮುಖ್ಯ ಕಾರ್ಯಕ್ರಮ ಎಂದು ತಾಲ್ಲೂಕು ಸಂಜೀವಿನಿ ಸಂಘಗಳ ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೇಳಿದರು.
ಶೆಟ್ಟಿಕೊಪ್ಪ ಗ್ರಾಮದ ಗಣಪತಿ ಪೆಂಡಾಲ್ನಲ್ಲಿ ಶನಿವಾರ ನಡೆದ ಶೆಟ್ಟಿಕೊಪ್ಪ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆಯಲ್ಲಿ ಅವರು ಮಾತನಾಡಿದರು.
ಸ್ವಸಹಾಯ ಸಂಘದ ಎಲ್ಲಾ ಸದಸ್ಯರಿಗೆ ಕೃಷಿ ಮತ್ತು ಕೃಷಿಯೇತರ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗುವುದು. ಯಾವುದೇ ಮಧ್ಯವರ್ತಿಗಳ ಹಾವಳಿಯಿರುವುದಿಲ್ಲ. ಇದೇ ಮಾಸಿಕ ಸಂತೆಗಳು ಮುಂದೆಹಳ್ಳಿ ಸಂತೆಗಳಾಗಿ, ಗ್ರಾಮ ಸಂತೆಗಳಾಗಿ ಬದಲಾವಣೆಯಾಗಲಿವೆ. ನಂತರ ಗ್ರಾಮಗಳಲ್ಲಿ ನಿರಂತರ ಸಂತೆ ನಡೆಯುವಂತೆ ಪ್ರೋತ್ಸಾಹಿಸಲಾಗುವುದು. ಸ್ವಸಹಾಯ ಸಂಘದ ಸದಸ್ಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಸಹಕಾರ ನೀಡಲಾಗುವುದು. ಆಮೂಲಕ ವಿವಿಧೆಡೆಗಳಲ್ಲಿ ನಡೆಯುವ ಜಾತ್ರೆ, ಕೃಷಿ ಮೇಳ, ಹಬ್ಬ ಹರಿದಿನಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಂಘದ ಸದಸ್ಯರು ಎಸ್.ಎಚ್.ಜಿಸ್ಟಾಲ್ಗಳನ್ನು ಹಾಕಿ ತಾವೇ ಬೆಳೆದ ಉತ್ಪನ್ನ ಮಾರಾಟ ಮಾಡಬಹುದು ಎಂದರು.
ಕಡಹಿನಬೈಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಹಾಗೂ ಸ್ವಾವಲಂಬಿಗಳಾಗಿ ಬದುಕಲು ಸಂಜೀವಿನಿ ಸಂಘಗಳು ಮಹಿಳೆಯರಿಗೆ ಉಪಯುಕ್ತವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಡಹಿನಬೈಲು ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಂದ್ಯಾ ಹೆಗ್ಡೆ ಮಾತನಾಡಿ, ಒಕ್ಕೂಟದಲ್ಲಿ 39 ಸ್ವಸಹಾಯ ಸಂಘಗಳಿದ್ದು, 20ಕ್ಕೂ ಹೆಚ್ಚು ಸ್ವಸಹಾಯ ಸಂಘಗಳು ತಾವೇ ಸ್ವಂತವಾಗಿ ಬೆಳೆದ ತರಕಾರಿ, ಗೆಡ್ಡೆಗೆಣಸು, ಇತರೇ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳನ್ನು ಮಾಸಿಕ ಸಂತೆಗೆ ತಂದು ಮಾರಾಟ ಮಾಡುತ್ತಿವೆ. ಇದರಿಂದ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಕಾರ್ಯಕ್ರಮಕ್ಕೆ ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್, ಎ.ಬಿ. ಮಂಜುನಾಥ್, ವಾಣಿ ನರೇಂದ್ರ, ಪೂರ್ಣಿಮ, ಶೈಲಾ ಮಹೇಶ್, ಒಕ್ಕೂಟದ ಉಪಾಧ್ಯಕ್ಷೆ ಸುಮಿತ್ರ, ವಲಯ ಮೇಲ್ವಿಚಾರಕ ಚೇತನ್, ಪಿಆರ್ಐ ಶೈನಿ, ಶಾಲಿ, ಪಶುಸಖಿ ಮಾಲಿನಿ, ಕೃಷಿ ಸಖಿ ಪ್ರೀತಿ, ಎಲ್ಸಿಆರ್ಪಿ ಸಲೀನಾ, ಚಂದ್ರಿಕಾ, ಕವನ, ಎಸ್.ವಿ. ಗಾಯತ್ರಿ, ಪ್ರೀತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.