ADVERTISEMENT

ಚಿಕ್ಕಮಗಳೂರು | ಇ–ಹರಾಜು ಪ್ರಕ್ರಿಯೆ ಆರಂಭಿಸಿದ ಬ್ಯಾಂಕ್‌ಗಳು: ರೈತರಲ್ಲಿ ಆತಂಕ

ವಿಜಯಕುಮಾರ್ ಎಸ್.ಕೆ.
Published 30 ಜೂನ್ 2025, 6:57 IST
Last Updated 30 ಜೂನ್ 2025, 6:57 IST
ಕಾಫಿ
ಕಾಫಿ   

ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆಯು ಕಾಫಿ ಬೆಳೆಗಾರರ ಪಾಲಿಗೆ ಕಂಟಕವಾಗಿ ಕಾಡುತ್ತಿದೆ. ಕೇಂದ್ರ ಸರ್ಕಾರ ನೀಡಿದ್ದ ಪ್ಯಾಕೇಜ್‌ ಉಪಯೋಗ ಪಡೆದುಕೊಳ್ಳದೆ ಹಿಂದೇಟು ಹಾಕಿದ ರೈತರು ಈಗ ಕಷ್ಟಕ್ಕೆ ಸಿಲುಕುತ್ತಿದ್ದು, ತೋಟ ಹರಾಜು ಪ್ರಕ್ರಿಯೆಯನ್ನು ಬ್ಯಾಂಕ್‌ಗಳು ಆರಂಭಿಸಿವೆ.

ಕಾಫಿ ಕಾಯ್ದೆ –1942 ಪ್ರಕಾರ ಈ ಬೆಳೆಯನ್ನು ಕೈಗಾರಿಕಾ ಉದ್ಯಮ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಕಡಿಮೆ ವಿಸ್ತೀರ್ಣದಲ್ಲಿ ಕಾಫಿ ಬೆಳೆಯುವುದು ಲಾಭದಾಯಕವಲ್ಲ ಎಂಬ ಕಾರಣಕ್ಕೆ ಗರಿಷ್ಠ ಮಿತಿಯ ಭೂಸುಧಾರಣಾ ಕಾಯ್ದೆಯ ವ್ಯಾಪ್ತಿಗೂ ಈ ಕಾಫಿ ಪ್ಲಾಂಟೇಷನ್ ಒಳಪಡುವುದಿಲ್ಲ.

ಕಾಫಿ ಒಂದು ಉದ್ಯಮ ಆಗಿರುವುದರಿಂದ ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್‌ ನಿರ್ಮಾಣ (ಸರ್ಫೇಸಿ) ಕಾಯ್ದೆಯನ್ನು 2002ರಿಂದ ಅನುಷ್ಠಾನಗೊಳಿಸಲಾಗಿದೆ. ಭೂ ಅಭಿವೃದ್ಧಿಗೆ ಪಡೆದುಕೊಳ್ಳುವ ಸಾಲವನ್ನು ಮರು ಪಾವತಿ ಮಾಡದಿದ್ದರೆ ಈ ಕಾಯ್ದೆಯ ಅಡಿಯಲ್ಲಿ ಇಡೀ ಜಾಗವನ್ನು ಹರಾಜು ಮಾಡಲು ಅವಕಾಶ ಇದೆ. ಈ ಕಾಯ್ದೆ ಬ್ಯಾಂಕ್‌ಗಳಿಗೆ ಅಸ್ತ್ರವಾಗಿದೆ. 

ADVERTISEMENT

ಕಾಫಿ ಕೃಷಿ ಈ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರ ಹೇಳಿಕೆ ಬೆಳೆಗಾರರಲ್ಲಿ ಕೊಂಚ ನಿಟ್ಟುಸಿರು ಬಿಟ್ಟಿದ್ದರು.

ಆದರೆ, ಈಗ ಬ್ಯಾಂಕ್‌ಗಳು ಮತ್ತೆ ಇ–ಹರಾಜು ಪ್ರಕ್ರಿಯೆ ಆರಂಭಿಸಿವೆ. ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ತಂದು ಸಾಲ ಮರುಪಾವತಿ ಮಾಡಿದರೂ ಸಹ ದಾಖಲೆಗಳನ್ನು ವಾಪಸ್ ನೀಡುತ್ತಿಲ್ಲ ಎಂಬುದು ಬೆಳೆಗಾರರ ಆರೋಪ. ‘ಇ–ಹರಾಜಿನಲ್ಲಿ ಬೇರೆ ದೇಶದಲ್ಲಿ ಇರುವ ಉದ್ಯಮಿಗಳು ತೋಟಗಳನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು, ಮಧ್ಯವರ್ತಿಗಳು ಸೇರಿಕೊಂಡು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ’ ಎಂಬುದು ಬೆಳೆಗಾರರ ಸಂಘಟನೆಗಳ ಆರೋಪ.

ಕೆಜಿಎಫ್‌, ಕಾಫಿ ಮಂಡಳಿ ಮತ್ತು ಸಂಸದರ ಮನವಿ ಮೇರೆಗೆ ಕೇಂದ್ರ ಸರ್ಕಾರ ಒಂದು ಬಾರಿ ಮರುಪಾವತಿಗೆ ಪ್ಯಾಕೇಜ್ ನೀಡಿತ್ತು. ಈ ಅವಕಾಶವನ್ನೂ ಬಹುತೇಕ ರೈತರು ಕೈ ಚೆಲ್ಲಿದ್ದಾರೆ. 2024ರ ನವೆಂಬರ್‌ನಿಂದ ಆರಂಭವಾಗಿ ಜೂನ್ ಅಂತ್ಯದ ತನಕ ಪ್ಯಾಕೇಜ್ ಪಡೆಯಲು ಅವಕಾಶ ಇತ್ತು. ಕಾಫಿಗೆ ಬೆಲೆ ಕೂಡು ಬಂದಿದ್ದರಿಂದ ಸಾಲ ತೀರಿಸಿ ನೆಮ್ಮದಿಯಾಗಲು ಅವಕಾಶ ಇತ್ತು. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 518 ರೈತರು ಮಾತ್ರ ಈ ಲಾಭ ಪಡೆದುಕೊಂಡಿದ್ದಾರೆ. ಸುಸ್ತಿದಾರರಾಗಿ ಇನ್ನೂ 2,930 ರೈತರು ಉಳಿದಿದ್ದಾರೆ. ಇನ್ನೂ ₹300 ಕೋಟಿಯಷ್ಟು ಬ್ಯಾಂಕ್‌ಗೆ ಹಣ ವಾಪಸ್ ಆಗಬೇಕಿದ್ದು, ಹಂತ–ಹಂತವಾಗಿ ಇ–ಹರಾಜು ಪ್ರಕ್ರಿಯೆಯನ್ನು ಬ್ಯಾಂಕ್ ಆರಂಭಿಸಿದೆ.

ಪ್ಯಾಕೇಜ್ ಅವಧಿ ವಿಸ್ತರಣೆ ಮಾಡಿದರೆ ಇನ್ನಷ್ಟು ರೈತರಿಗೆ ಅನುಕೂಲ ಆಗಲಿದೆ. ಇದಲ್ಲದೇ ಸರ್ಫೇಸಿ ಕಾಯ್ದೆಯ ವ್ಯಾಪ್ತಿಯಿಂದ ಪ್ಲಾಂಟೇಷನ್ ಬೆಳೆಗಳನ್ನು ಕೈಬಿಡಬೇಕು ಎಂಬುದು ಬೆಳೆಗಾರರ ಸಂಘಟನೆಗಳ ಒತ್ತಾಯ.

ಪ್ಯಾಕೇಜ್ ಲಾಭವನ್ನು ಬೆಳೆಗಾರರು ಪಡೆಯಬೇಕಿತ್ತು

ಕಾಫಿ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿತ್ತು. ಪ್ಯಾಕೇಜ್ ಕೂಡ ಪ್ರಕಟಿಸಿ ಒಂದು ಬಾರಿಗೆ ಸಾಲ ಮರುಪಾವತಿಗೆ ಅವಕಾಶ ನೀಡಿತ್ತು. ಶೇ 20ರಷ್ಟು ಮಾತ್ರ ರೈತರು ಇದರ ಲಾಭ ಪಡೆದುಕೊಂಡಿದ್ದಾರೆ. ಇದು ಬೇಸರದ ಸಂಗತಿ ಎಂದು ಕಾಫಿ ಮಂಡಳಿ ಅಧ್ಯಕ್ಷ ದೇವವೃಂದ ಹೇಳಿದರು.

‘ಕೇಂದ್ರ ಹಣಕಾಸು ಸಚಿವಾಲಯ ವಾಣಿಜ್ಯ ಸಚಿವಾಲಯದ ಮನವೊಲಿಸಿ ಈ ಪ್ಯಾಕೇಜ್ ತರಲಾಗಿತ್ತು. ಒಂದೇ ಬಾರಿಗೆ ಅಷ್ಟೂ ಬಾಕಿ ಪಾವತಿಸಿದರೆ ವಿನಾಯಿತಿಯನ್ನೂ ನೀಡಲಾಗಿತ್ತು. ಬ್ಯಾಂಕ್‌ನಲ್ಲೇ ಕುಳಿತು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ್ದೆವು. ಆದರೆ ಸುಸ್ತಿದಾರರಾಗಿರುವ ಬೆಳೆಗಾರರೇ ಬ್ಯಾಂಕ್ ಕಡೆಗೆ ಬರಲಿಲ್ಲ’ ಎಂದರು. ‘ಬೆಳೆಗಾರರನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನ ಮಾಡಿದೆ. ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದರು. 

ಕೇಂದ್ರ ಸಂಪುಟ ನಿರ್ಣಯ ಕೈಗೊಳ್ಳಬೇಕು

ಪ್ಲಾಂಟೇಷನ್ ಬೆಳೆಗಳನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡಬೇಕು. ಇದು ಕೇಂದ್ರ ಸಚಿವ ಸಂಪುಟದಿಂದ ಆಗಬೇಕಿರುವ ಕೆಲಸ. ಅದನ್ನು ಮಾಡಿಸಲು ಕೆಜಿಎಫ್‌ ಮೂಲಕ ಪ್ರಯತ್ನ ಮಾಡುತ್ತೇವೆ ಎಂದು ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಹೇಳಿದರು. ಕಂಪನಿ ಎಸ್ಟೇಟ್‌ಗಳಿಗೆ ಈ ಕಾಯ್ದೆ ಒಳಪಡಿಸಿದರೆ ತೊಂದರೆ ಇಲ್ಲ. ಆದರೆ ಸಣ್ಣ ಬೆಳೆಗಾರರಿಗೆ ಈ ಕಾಯ್ದೆಯನ್ನು ಒಳಪಡಿಸಿರುವುದು ತೊಂದರೆಯಾಗಿದೆ. ಒಂದು ಪ್ರಕರಣದಲ್ಲಿ ಹೈಕೋರ್ಟ್‌ಗೆ ಮನವರಿಕೆ ಮಾಡದಿರುವ ಕಾರಣ ವಾಣಿಜ್ಯ ಬೆಳೆ ಎಂದು ಪರಿಗಣಿಸಿತ್ತು. ಕಾಫಿ ವಾಣಿಜ್ಯ ಬೆಳೆಯಲ್ಲ ಕೃಷಿ ವ್ಯಾಪ್ತಿಗೆ ಒಳಪಡಲಿದೆ ಎಂಬುದನ್ನು ಕೇಂದ್ರ ಸಚಿವ ಸಂಪುಟ ಹೇಳಬೇಕಿದೆ ಎಂದರು.

ಕೇಂದ್ರದ ಬಳಿಗೆ ನಿಯೋಗ

ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರದ ಬಳಿ ನಿಯೋಗ ತೆರಳಲಾಗುವುದು ಎಂದು ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ತಿಳಿಸಿದರು. ಸಂಸದರು ಕಾಫಿ ಮಂಡಳಿ ಅಧ್ಯಕ್ಷರು ಕೆಜಿಎಫ್ ಪದಾಧಿಕಾರಿಗಳ ನಿಯೋಗ ತೆರಳಬೇಕಿದೆ. ಕೊಡಗು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂಬಂಧಿಸಿದ ಮೂವರು ಸಂಸದರೊಂದಿಗೆ ಮಾತನಾಡಿ ಅವರನ್ನೂ ದೆಹಲಿಗೆ ನಿಯೋಗ ಕರೆದೊಯ್ಯುವ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಇದರ ನಡುವೆ ಇ–ಹರಾಜಿನ ಹೆಸರಿನಲ್ಲಿ ಪ್ಲಾಂಟೇಷನ್ ಭೂಮಿ ಖರೀದಿಯ ದಂಧೆಯೊಂದು ನಡೆಯುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕಿದೆ. ಮಧ್ಯವರ್ತಿಗಳ ತಾಳಕ್ಕೆ ಬ್ಯಾಂಕ್ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಇದನ್ನು ಸರಿಪಡಿಸಬೇಕಿದೆ ಎಂದರು.

‘ಕಾಫಿಯನ್ನೂ ಕೃಷಿ ಎಂದೇ ಪರಿಗಣಿಸಬೇಕು’

ಹಿಂದೆ ತಂದಿದ್ದ ವಿಶೇಷ ಪ್ಯಾಕೇಜ್ ಇನ್ನೂ ಚಾಲ್ತಿಯಲ್ಲಿದೆ. ಆದರೂ ಬ್ಯಾಂಕ್‌ಗಳು ಈ ಕಾಯ್ದೆ ಹೆಸರಿನಲ್ಲಿ ಬೆಳೆಗಾರರನ್ನು ಶೋಷಿಸುತ್ತಿವೆ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಹೇಳಿದರು. ಎಲ್ಲಾ ಬೆಳೆಗಳ ರೀತಿಯಲ್ಲಿ ಕಾಫಿಯನ್ನೂ ಭೂಮಿಯ ಮೇಲೆಯೇ ಬೆಳೆಯಲಾಗುತ್ತದೆ. ಅತಿವೃಷ್ಟಿಯಿಂದ ತೊಂದರೆಗೆ ಬೆಳೆಗಾರರು ಸಿಲುಕಿದ್ದಾರೆ ಎಂದರು. ಸಕಲೇಶಪುರದಲ್ಲಿ ಮಂಗಳವಾರ ಕೆಜಿಎಫ್ ಸಭೆ ಇದ್ದು ಮುಂದೇನು ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗುವುದು. ಸಂಸದರ ಜತೆಗೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.