ಆಲ್ದೂರು: ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನ್ಯಾಯ ಒದಗಿಸುವಂತೆ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸೇರಿ ಒಟ್ಟು 16 ಜನಪ್ರತಿನಿಧಿಗಳು ಕೆಲಹೊತ್ತು ಕಚೇರಿಗೆ ಬೀಗ ಹಾಕಿ, ಸಾಂಕೇತಿಕವಾಗಿ ಪ್ರತಿಭಟಿಸಿದರು.
ಹಲವು ವರ್ಷಗಳಿಂದ ಬಗೆಹರಿಯದಂತಹ ನಿವೇಶನ ರಹಿತರ ಸಮಸ್ಯೆಯನ್ನು ಸರ್ಕಾರ ಹಾಗೂ ಜಿಲ್ಲಾ ಆಡಳಿತ ಶೀಘ್ರ ಪರಿಹರಿಸಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ಬಿ.ಬಿ ನಿಂಗಯ್ಯ ಮಾತನಾಡಿ, ತೊಡಕುಗಳನ್ನು ನಿವಾರಿಸಿ, ಜನಸಾಮಾನ್ಯರಿಗೆ ಸೂರು ಕಟ್ಟಿಕೊಳ್ಳಲು ಬೇಕಾದ ನಿವೇಶನವನ್ನು ಇಲಾಖೆ ಹಾಗೂ ಜಿಲ್ಲಾಡಳಿತ ಒದಗಿಸಬೇಕು ಎಂದು ಒತ್ತಾಯಿಸಿದರು.
ಪಂಚಾಯಿತಿ ಉಪಾಧ್ಯಕ್ಷ ಗುರುವಪ್ಪ ಮಾತನಾಡಿ, ‘ಸರ್ಕಾರದ ಗಮನ ಸೆಳೆಯಲು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ಪರಿಹಾರ ದೊರೆಯದಿದ್ದರೆ ಮುಂಬರುವ ದಿನದಲ್ಲಿ ಸತ್ತಿಹಳ್ಳಿ ಪಂಚಾಯಿತಿ ಪ್ರತಿನಿಧಿಗಳು ಹಾಗೂ ನಿವೇಶನರಹಿತ ನಿರಾಶ್ರಿತರ ಜೊತೆಗೆ ಜಿಲ್ಲಾಧಿಕಾರಿ ಕಚೇರಿಯವರೆಗೂ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುವುದು’ ಎಂದರು. ಪಂಚಾಯಿತಿ ಅಧ್ಯಕ್ಷೆ ಸಾಹಿರಾಬಾನು, ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.