ADVERTISEMENT

‘ಸಸಿ ನೆಟ್ಟು ಪ್ರಕೃತಿ ಋಣ ತೀರಿಸಿ’

ವಿಶ್ವಪರಿಸರ ದಿನಾಚರಣೆಯಲ್ಲಿ ಉಮೇಶ್ ಎಂ.ಅಡಿಗ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:40 IST
Last Updated 5 ಜೂನ್ 2019, 15:40 IST
ಚಿಕ್ಕಮಗಳೂರಿನ ನ್ಯಾಯಾಧೀಶರ ವಸತಿಗೃಹ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಧೀಶ ಉಮೇಶ್ ಎಂ. ಅಡಿಗ ಅವರು ಸಸಿಗೆ ನೀರೆರೆದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ ಇದ್ದಾರೆ.
ಚಿಕ್ಕಮಗಳೂರಿನ ನ್ಯಾಯಾಧೀಶರ ವಸತಿಗೃಹ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಧೀಶ ಉಮೇಶ್ ಎಂ. ಅಡಿಗ ಅವರು ಸಸಿಗೆ ನೀರೆರೆದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ ಇದ್ದಾರೆ.   

ಚಿಕ್ಕಮಗಳೂರು:ಅರಣ್ಯ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಮನೆಗೊಂದು ಸಸಿ ನೆಟ್ಟು ಪೋಷಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಧೀಶ ಉಮೇಶ್ ಎಂ. ಅಡಿಗ ಸಲಹೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ, ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಗೃಹ ಮಂಡಳಿ ಬಡಾವಣೆಯಲ್ಲಿರುವ ನ್ಯಾಯಾಧೀಶರ ವಸತಿಗೃಹದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ದಿನೇ ದಿನೇ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಉಸಿರಾಡಲು ಶುದ್ಧ ಗಾಳಿ ಕೊರತೆ ಉಂಟಾಗುತ್ತಿದೆ. ಅದರಿಂದ ಶ್ವಾಸಕೋಶದ ರೋಗಗಳಿಗೆ ಜನರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಪರಿಸರ ಸಂರಕ್ಷಣೆ ನಿರ್ಲಕ್ಷದಿಂದ ಈ ರೀತಿ ದುಷ್ಪರಿಣಾಮ ಉಂಟಾಗುತ್ತಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಮನೆಗೊಂದು ಸಸಿ ನೆಟ್ಟು ಪೋಷಿಸಬೇಕು. ಪ್ರಕೃತಿ ಋಣ ತೀರಿಸಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್.ಕುಮಾರ್ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಕಚೇರಿ, ಸಮುದಾಯ ಭವನದ ಆವರಣಗಳಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಟಬುಬಿಯಾ, ನೇರಳೆ, ನೆಲ್ಲಿ, ಗಸಗಸೆ, ಹಲಸು ಒಳಗೊಂಡಂತೆ ವಿವಿಧ ಜಾತಿಯ ಸಸಿಗಳನ್ನು ನೆಡಲಾಗುವುದು ಎಂದರು.

ADVERTISEMENT

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಧೀಶ ಕೆ.ಎಲ್.ಅಶೋಕ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಧೀಶ ಮಂಜುನಾಥ ಸಂಗ್ರೇಶಿ, ಕೌಂಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಜಿ.ಟಿ.ದೇವೇಂದ್ರನ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀರಾಮನಾರಾಯಣ ಹೆಗ್ಡೆ, ಎಸಿಎಫ್ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ಎಸ್.ಎಲ್.ಶಿಲ್ಪಾ, ಉಪವಲಯ ಅರಣ್ಯಾಧಿಕಾರಿಗಳಾದ ವೆಂಕಟೇಶ್, ಸತೀಶ್ ಇದ್ದರು.

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಎಲ್ಲರ ಜವಾಬ್ದಾರಿ

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಎಂದು ವನ್ಯಜೀವಿ ಪರಿಪಾಲಕ ಸತೀಶ್ ಗೌಡ ಹೇಳಿದರು.

ವಿಶ್ವಪರಿಸರ ದಿನಾಚರಣೆ ಅಂಗವಾಗಿ ಭದ್ರಾ ವನ್ಯಜೀವಿ ವಿಭಾಗ, ಹೊಯ್ಸಳ ಅಡ್ವೆಂಚರ್ಸ್ ಕ್ಲಬ್, ಯುವ ಸ್ಪಂದನ ಸಂಸ್ಥೆ ಸಹಯೋಗದೊಂದಿಗೆ ತಾಲ್ಲೂಕಿನ ಮುತ್ತೋಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಬಳಕೆ ಅತಿಯಾಗಿದ್ದು, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು. ನೈಸರ್ಗಿಕ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಯುವ ಸ್ಪಂದನ ಸಂಸ್ಥೆಯ ಜೋಕಿಮ್ ಆಲ್ವಿನ್ ಮಾತನಾಡಿ, ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.

ಮುತ್ತೋಡಿ ಸುತ್ತಮುತ್ತಲಿನ ಪ್ರದೇಶ, ಉಕ್ಕುಡ ಫಾಲ್ಸ್ ನಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂಪತ್, ರಂಗಸ್ವಾಮಿ, ತಿರ್ಥೇಶ್, ವಿಶ್ವನಾಥ್, ಸಿಬ್ಬಂದಿ ಧರ್ಮೇಶ್, ಸಂತೋಷ್ , ಮಣಿ, ಸತೀಶ್, ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.