ಕೊಟ್ಟಿಗೆಹಾರ: ಕೋವಿಡ್–19 ತಲ್ಲಣದಿಂದ ಮಕ್ಕಳಿಗೆ ಶಾಲೆ ಇಲ್ಲದೇ ಮನೆಯಲ್ಲಿ ಕಳೆಯುವಂತಾಗಿತ್ತು. ನಗರದ ಮಕ್ಕಳಿಗೆ ಆನ್ಲೈನ್ ಪಾಠ ಇದ್ದರೆ, ಅಡವಿ ಮಕ್ಕಳಿಗೆ ಶಿಕ್ಷಣ ಸೌಲಭ್ಯವೇ ಸಿಗದೆ ಮೂಲೆಗುಂಪಾಗಿದ್ದರು. ಇದನ್ನು ಅರಿತ ತಂಡವೊಂದು ಕಾನನದ ಪರಿಸರದ ಜೊತೆ ಮಕ್ಕಳನ್ನು ಒಟ್ಟುಗೂಡಿಸಿ ಪ್ರಾಯೋಗಿಕವಾಗಿ ವಿವಿಧ ಕ್ರಿಯಾತ್ಮಕ ಕೌಶಲ ಚಟುವಟಿಕೆ ಮಾಡಿಸಿ, ಹುರುಪು ತುಂಬುವ ವಿಭಿನ್ನ ಪ್ರಯತ್ನವೊಂದು ಮಲೆನಾಡು ಭಾಗದಲ್ಲಿ ನಡೆಯುತ್ತಿದೆ.
ಸಹ್ಯಾದ್ರಿ ಸಂಚಯ ಮಂಗಳೂರು ಇವರ ವತಿಯಿಂದ ಪ್ರಾಯೋಜಕ ಪಣಂಬೂರು ವಾಸುದೇವ್ ಐತಾಳ್, ಚಿತ್ರ ಕಲಾವಿದ ದಿನೇಶ್ ಹೊಳ್ಳ ಅವರು ‘ವನಬೆಳಕು’ ಕಾರ್ಯಕ್ರಮದಡಿ ಇದುವರೆಗೆ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ 34 ಶಿಬಿರ ಮಾಡಿ ಯಶಸ್ವಿಯಾಗಿದ್ದಾರೆ. ಬಾಳೂರು, ಮಲೆಮನೆ, ಕಾಳಿಕಟ್ಟೆಯ ಸರ್ಕಾರಿ ಶಾಲೆಗಳ ಮಕ್ಕಳನ್ನು ಬುಧವಾರದಂದು ಪರಿಸರದ ನಡುವೆ ಕೂರಿಸಿ ವಿವಿಧ ಕ್ರಿಯಾತ್ಮಕ ಚಟುವಟಿಕೆಯ ಅಧ್ಯಯನವನ್ನು ಸ್ಥಳದಲ್ಲೇ ಕಲಿಸಿಕೊಟ್ಟರು.
ಬರಿ ಪಠ್ಯದ ಜ್ಞಾನ ಮಕ್ಕಳಿಗೆ ಸಿಕ್ಕರೆ ಸಾಲದು, ಮಸ್ತಕದ ಜ್ಞಾನವೂ ಬೇಕು ಎನ್ನುವ ಧ್ಯೇಯೋದ್ದೇಶದಿಂದ ಶಿಕ್ಷಣ ವಂಚಿತ ಮಕ್ಕಳಿಗೂ ಕಾನನದ ನಡುವೆ ಕ್ರಿಯಾತ್ಮಕ ಚಟುವಟಿಕೆ ಏರ್ಪಾಡು ಮಾಡಿದ್ದಾರೆ. ಸ್ಥಳದಲ್ಲೇ ಮಕ್ಕಳಿಗೆ ಪೇಪರ್ ಕಟ್ಟಿಂಗ್ ಮೂಲಕ ವಿವಿಧ ವಸ್ತುಗಳನ್ನು ಮಾಡಲು ಕಲಿಸಿಕೊಟ್ಟು, ಚಿತ್ರ ಬಿಡಿಸಿ ಬಣ್ಣ ಹಚ್ಚುವ ಕೌಶಲ ಬೆಳೆಸಲು ಪ್ರೇರಣೆ ನೀಡುತ್ತಿದ್ದಾರೆ ಮಕ್ಕಳ ಆಸಕ್ತಿ ಕುಂದದಂತೆ ಆಕರ್ಷಕ ಬಹುಮಾನ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತಿದೆ.
‘350ಕ್ಕೂ ಅಧಿಕ ಮಕ್ಕಳಿಗೆ ಇಂತಹ ಕಾರ್ಯಕ್ರಮ ಮಾಡಿದ್ದೇವೆ. ಪ್ರಾಯೋ
ಗಿಕ ಕೊರತೆಯಿಂದ ಮಕ್ಕಳಿಗೆ ಕೌಶಲ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಚಿತ್ರ ಕಲಾವಿದ ದಿನೇಶ್ ಹೊಳ್ಳ ತಂಡದಲ್ಲಿ ಪ್ರಸಾದ್ ಶೆಣೈ ಆರ್.ಕೆ, ಸಚಿನ್ ಬಿಡೆ, ಮಮತಾ, ದೀಪಿಕಾ, ಸ್ವಪ್ನ ನೊರೊನ್ನಾ, ನಾಗರಾಜ್ ಕೂವೆ, ಬಾಲಕೃಷ್ಣ ಬಾಳೂರು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.