ಶೃಂಗೇರಿ: ‘ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುವ ಮನಸ್ಸು ಮುಖ್ಯ. ನಾವು ಆರೋಗ್ಯವಾಗಿರಬೇಕೆಂದರೆ ಪರಿಸರ ಸ್ವಚ್ಚವಾಗಿಟ್ಟುಕೋಳ್ಳಬೇಕು. ಮನುಷ್ಯನ ಸ್ವಾರ್ಥದಿಂದ ಪರಿಸರವನ್ನು ಹಾಳು ಮಾಡುತ್ತೀದ್ದೇವೆ’ ಎಂದು ಆದಿಚುಂಚನಗಿರಿ ಮಠದ ಗುಣನಾಥ ಸ್ವಾಮೀಜಿ ಹೇಳಿದರು.
ಶೃಂಗೇರಿಯ ಮೆಣಸೆ ಪಿ.ಎಂ.ಶ್ರೀ ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮ್ಮ ಫೌಂಡೇಷನ್ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ನೇತ್ರ ದಾನ ನೋಂದಣಿ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನಿಗೆ ಆಹಾರ ಕ್ರಮ ಮುಖ್ಯ. ಈಗ ಹಣ, ಹೆಸರಿಗಾಗಿ ಆಹಾರ ನಿರ್ಲಕ್ಷಿಸಿ, ಚಟಗಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿದೆ. ಭೂಮಿ ತಾಯಿ ಮತ್ತು ಹೆತ್ತ ತಾಯಿ ಸ್ಮರಣೆ ಎರಡೂ ಒಂದೇ ಆಗಿದೆ. ಭೂಮಿ ತಾಯಿ ನಮಗೆ ಪಂಚಭೂತಗಳನ್ನು ನೀಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರ ನೀಡಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ‘ನನ್ನ ತಾಯಿಯ ಹೆಸರಿನಲ್ಲಿ ಜನರ ಸೇವೆ ಮಾಡುತ್ತಿದ್ದೇನೆ. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ’ ಎಂದರು.
ಮಣಿಪಾಲದ ಕೆಎಂಸಿ ಆಸ್ಪತ್ರೆ ವೈದ್ಯರಿಂದ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ತಪಾಸಣೆ ನಡೆಸಲಾಯಿತು.
ಹೊಳೆಕೊಪ್ಪದ ವೈದ್ಯ ಡಾ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗಿಣಿಕಲ್ ಭರತ್, ಕೃಷಿಕ ಸಮಾಜದ ಅಧ್ಯಕ್ಷ ಗೋಪಾಲ್ ಹೆಗ್ಡೆ, ದಲಿತ ಸಂಘಟನೆಯ ಮುಖಂಡ ಗೋಪಾಲ್ ಆನೆಗುಂದ, ಮೆಣಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯ್ಕ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್, ಎಸ್ಡಿಎಂಸಿ ಅಧ್ಯಕ್ಷ ಸಂತೋಷ್ ಕಾಳ್ಯ, ಜೆಡಿಎಸ್ ಮುಖಂಡರಾದ ಜಿ.ಜಿ.ಮಂಜುನಾಥ್, ಚಂದ್ರಶೇಖರ್ ಸೂರ್ಡಿ, ವೆಂಕಪ್ಪ ಆಚಾರ್, ದಿನೇಶ್ ಹೆಗ್ಡೆ ಹೊಳೆಕೊಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.