ADVERTISEMENT

ಹಿರಿಯರಿಗೆ ರಕ್ಷಕರಾಗಿ: ಶಾಸಕ ಎಚ್.ಡಿ.ತಮ್ಮಯ್ಯ

ಹಿರಿಯ ನಾಗರಿಕರ ದಿನಾಚರಣೆ, ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 4:34 IST
Last Updated 5 ಅಕ್ಟೋಬರ್ 2025, 4:34 IST
ಚಿಕ್ಕಮಗಳೂರು ನಗರದ ಶೆಟ್ಟರ ಬೀದಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಹಿರಿಯರನ್ನು ಗೌರವಿಸಲಾಯಿತು
ಚಿಕ್ಕಮಗಳೂರು ನಗರದ ಶೆಟ್ಟರ ಬೀದಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಹಿರಿಯರನ್ನು ಗೌರವಿಸಲಾಯಿತು   

ಚಿಕ್ಕಮಗಳೂರು: ಪ್ರಸ್ತುತ ದಿನಗಳಲ್ಲಿ ಹಿರಿಯರನ್ನು ಕಡೆಗಣಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ದುರದೃಷ್ಟಕರ. ಪ್ರತಿ ಮನೆಯ ಹಿರಿಯ ಹಾಗೂ ಅಮೂಲ್ಯ ಜೀವಗಳಿಗೆ ನಾವು ರಕ್ಷಕರಾಗಬೇಕು ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.

ನಗರದ ಶೆಟ್ಟರಬೀದಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾ‌ಟಿಸಿ ಅವರು ಮಾತನಾಡಿದರು.

ತಂದೆ, ತಾಯಿ, ಅಜ್ಜ, ಅಜ್ಜಿ ಸೇರಿದಂತೆ ಹಿರಿಯರು ಇರುವ ಮನೆ ತುಂಬಿದ ಕೊಡವಿದ್ದಂತೆ. ಅವರ ಮಾರ್ಗದರ್ಶನ, ಸಲಹೆಗಳು ಕಿರಿಯರಿಗೆ ಸದಾ ಬೇಕಾಗುತ್ತವೆ. ದಾರಿ ತಪ್ಪದಂತೆ ನಮ್ಮನ್ನು ತಿದ್ದಿ, ತೀಡಿ ಸರಿ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುತ್ತಾರೆ. ಆದರೆ, ಅವರ ಮಾತುಗಳನ್ನು ನಕಾರಾತ್ಮಕವಾಗಿ ತೆಗೆದುಕೊಂಡು ನಿರ್ಲಕ್ಷ್ಯ ಮಾಡುವುದು ಇಂದಿನ ದಿನಗಳಲ್ಲಿ ಹೆಚ್ಚಾಗಿದೆ ಎಂದರು.

ADVERTISEMENT

ತಂದೆ ತಾಯಿಯಿಂದ ಆಸ್ತಿ ಪಡೆದ ನಂತರ ಅವರ ಪಾಲನೆ, ಪೋಷಣೆ ಮಾಡದಿದ್ದರೆ ಕಾನೂನಿನ ಮೂಲಕ ಆಸ್ತಿ ವಾಪಸ್‌ ಪಡೆದುಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಹಿರಿಯರ ಹಕ್ಕುಗಳನ್ನು ಗೌರವಿಸಲು ಮತ್ತು ಅವರ ಮಾರ್ಗದರ್ಶನವನ್ನು ಅನುಸರಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ದಿನವನ್ನು ಸುಂದರಗೊಳಿಸಲು, ಪೋಷಕರು, ಅಜ್ಜ-ಅಜ್ಜಿ ಮತ್ತು ಮನೆಯಲ್ಲಿರುವ ಇತರ ಹಿರಿಯರೊಂದಿಗೆ ಸಮಯ ಕಳೆಯುವುದು ಅಗತ್ಯ. ಅವರಿಗೆ ಇದಕ್ಕಿಂತ ಉತ್ತಮವಾದ ಉಡುಗೊರೆ ಇನ್ನೊಂದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಹಿರಿಯ ನಾಗರಿಕರು ಸಮಾಜದ ಆಸ್ತಿ. ಹಲವರು ಅವರನ್ನು ಅನಾಥಾಶ್ರಮ, ಹಿರಿಯರ ಮನೆಗಳಿಗೆ ಬಿಟ್ಟು ಬರುವ ಮೂಲಕ ಅವರನ್ನು ಒಂಟಿಯಾಗಿ ಮಾಡಿ ನೋವು ಕೊಡುತ್ತಿದ್ದಾರೆ. ಹೀಗೆ ಮಾಡುವವರನ್ನು ಮುಂದೆ ಅವರ ಮಕ್ಕಳು ಅನಾಥರಾಗಿಸಿ ದೂರ ಮಾಡಿದರೆ ಪರಿಸ್ಥಿತಿ ಏನು ಎಂಬುದನ್ನು ಅರ್ಥೈಸಿಕೊಂಡು ಬದಲಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಶ್ರೀನಿವಾಸ ವೈ.ಆಲದಾರ್ತಿ, ನಿರೂಪಣಾಧಿಕಾರಿ ಡಿ.ಸಂತೋಷ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.