ADVERTISEMENT

ಸಂಘಟನೆಗೆ ಬಲ ತುಂಬಿ: ಶಿವಸುಜ್ಞಾನ ತೀರ್ಥ ಶ್ರೀ

10ನೇ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:34 IST
Last Updated 16 ಅಕ್ಟೋಬರ್ 2025, 4:34 IST
ಕಡೂರು ತಾಲ್ಲೂಕು ವಿಶ್ವಕರ್ಮ ಸಮಾಜ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಬುಧವಾರ ಶಾಸಕ ಕೆ.ಎಸ್‌.ಆನಂದ್‌ ಉದ್ಘಾಟಿಸಿದರು. ಅರೆಮಾದನಹಳ್ಳಿ, ವಡ್ಡನಹಾಳು ಶ್ರೀಗಳು, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್‌, ತಹಶೀಲ್ದಾರ್‌ ಪೂರ್ಣಿಮಾ ಭಾಗವಹಿಸಿದ್ದರು  
ಕಡೂರು ತಾಲ್ಲೂಕು ವಿಶ್ವಕರ್ಮ ಸಮಾಜ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಬುಧವಾರ ಶಾಸಕ ಕೆ.ಎಸ್‌.ಆನಂದ್‌ ಉದ್ಘಾಟಿಸಿದರು. ಅರೆಮಾದನಹಳ್ಳಿ, ವಡ್ಡನಹಾಳು ಶ್ರೀಗಳು, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್‌, ತಹಶೀಲ್ದಾರ್‌ ಪೂರ್ಣಿಮಾ ಭಾಗವಹಿಸಿದ್ದರು     

ಕಡೂರು: ‘ವಿಶ್ವಕರ್ಮ ಸಮಾಜವು ಸದೃಢವಾಗಲು ಒಡಕಿಲ್ಲದ ಸಂಘಟನೆ ರೂಪಿಸಿ, ಬಲ ತುಂಬಬೇಕು’ ಎಂದು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಪೀಠದ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನ ತೀರ್ಥ ಸ್ವಾಮೀಜಿ ಕರೆ ನೀಡಿದರು.

ಕಡೂರು ತಾಲ್ಲೂಕು ವಿಶ್ವಕರ್ಮ ಸಮಾಜವು ಪಟ್ಟಣದ ಶ್ರೀವೀರಭದ್ರೇಶ್ವರ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ 10ನೇ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜದ ಎಲ್ಲ ವಿಭಾಗಗಳಿಗೂ ತನ್ನನ್ನು ಅರ್ಪಿಸಿಕೊಂಡಿರುವ ವಿಶ್ವಕರ್ಮ ಸಮುದಾಯವು ಸಾಮಾಜಿಕವಾಗಿ ದುರ್ಬಲವಾಗಿದೆ. ಎಲ್ಲರ ಸಹಭಾಗಿತ್ವದಿಂದ ಹಾಗೂ ಸಂಘಟಿತರಾದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಸಲು ಸಾಧ್ಯ. ಸದೃಢ ಸಮಾಜಗಳು ನಮ್ಮನ್ನೂ ಗುರುತಿಸಿ, ರಾಜಕೀಯ ಪ್ರಾತಿನಿಧ್ಯ ಒದಗಿಸಲು ನೆರವಾಗಲಿ. ಪೋಷಕರು ವಿಶ್ವಕರ್ಮರ ಸಂಸ್ಕೃತಿ ಉಳಿಸಲು ಮಕ್ಕಳಿಗೆ ಪ್ರೋತ್ಸಾಹ ನೀಡಿ ಎಂದು ಸಲಹೆ ನೀಡಿದರು.

ADVERTISEMENT

ಸಭೆಯ ನೇತೃತ್ವ ವಹಿಸಿದ್ದ ಚನ್ನಗಿರಿಯ ವಡ್ಡನಹಾಳು ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸಾಮೀಜಿ ಮಾತನಾಡಿ, ‘ಜಗತ್ತಿಗೆ ಶಿಲ್ಪಕಲೆಯ ಮೂಲಕ ಭಾರತದ ಪರಿಚಯ ಮಾಡಿಕೊಟ್ಟ ಇತಿಹಾಸವಿದ್ದರೂ ನಮ್ಮ ಸಮಾಜವು ಹಿಂದುಳಿದಿದೆ. ಜಾತಿಗಳ ನಡುವೆಯೇ ಸ್ಪರ್ಧೆ ಇರುವ ಯುಗದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಮಗೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ನೆರವಾಗುವ ಸಲುವಾಗಿ ವಿದ್ಯಾರ್ಥಿ ನಿಲಯಗಳು, ದುರ್ಬಲರಿಗೆ ಸಹಕಾರಿಯಾಗಲು ಸಮುದಾಯ ಭವನಗಳ ಅವಶ್ಯಕತೆ ಇದೆ. ಇಡೀ ಸಮಾಜಕ್ಕೆ ನಿಸ್ವಾರ್ಥ ಸೇವೆ ಒದಗಿಸುವ ನಮಗೆ ಇತರರಿಂದ ಸ್ಪಂದನೆ ಎಷ್ಟರ ಮಟ್ಟಿಗೆ ದೊರೆಯುತ್ತಿದೆ ಎನ್ನುವ ಅವಲೋಕನ ಬೇಕು. ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಹಾಗೂ ಕಡೂರು ಭಾಗದಲ್ಲಿ ನಮ್ಮ ಸಮುದಾಯಕ್ಕೆ ಹಾಸ್ಟೆಲ್‌, ಶಾಲೆಗಾಗಿ ಜಾಗ ಗುರುತಿಸಿ ಕೊಡಬೇಕು’ ಎಂದು ಆಗ್ರಹಿಸಿದರು.

ಕಡೂರು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ, ಕಡೂರಿನ ಯಾವುದಾದರೂ ವೃತ್ತಕ್ಕೆ ಜಕಣಾಚಾರಿ ಅಥವಾ ವಿಶ್ವಕರ್ಮರ ಹೆಸರಿಡಲು ಸೂಕ್ತ ಕ್ರಮ ವಹಿಸುವ ಮತ್ತು ನಿವೇಶನ ಸಲುವಾಗಿ ಕೈಲಾದ ನೆರವು ನೀಡುವ’ ಭರವಸೆ ನೀಡಿದರು.

ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಮಾತನಾಡಿ, ‘ಸದ್ಯ ನಿಗಮಕ್ಕೆ ₹50 ಕೋಟಿ ನಿಗದಿಯಾಗಿದ್ದು, ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಅದನ್ನು ₹300 ಕೋಟಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ನಿಗಮದ ವತಿಯಿಂದ ಲಭ್ಯವಿರುವ ಶೈಕ್ಷಣಿಕ ಸೌಲಭ್ಯ ಬಳಸಿಕೊಳ್ಳಿ ಹಾಗೂ ನಿಗಮದ ಜತೆ ನಿರಂತರ ಸಂಪರ್ಕದಲ್ಲಿರಿ’ ಎಂದರು.

ಕಡೂರು ತಹಶೀಲ್ದಾರ್‌ ಸಿ.ಎಸ್‌.ಪೂರ್ಣಿಮಾ, ‘ವಿಶ್ವಕರ್ಮರ ಕುಲಕಸುಬು ಮೂಲೆಗೆ ಸರಿದರೆ ಕುಲನಾಶವಾಗುವ ಅಪಾಯವಿದೆ. ಹೆಣ್ಣುಮಕ್ಕಳನ್ನು ಸುಶಿಕ್ಷಿತರಾಗಿಸಿ ಉನ್ನತಿ ಸಾಧಿಸಲು ಪ್ರೇರೇಪಿಸಿ ಹಾಗೂ ಸಮುದಾಯಕ್ಕೆ ವರವಾಗಿರುವ ಕೌಶಲ ಉಳಿಸಲು ಮಕ್ಕಳಿಗೆ ಇತಿಹಾಸ ತಿಳಿಸುವ ಮೂಲಕ ಮುಂದಾಗಿ’ ಎಂದು ತಿಳಿಸಿದರು.

ಮಹೋತ್ಸವದ ಅಂಗವಾಗಿ ಇಬ್ಬರೂ ಸ್ವಾಮಿಗಳನ್ನು ಪಟ್ಟಣದ ಎಪಿಎಂಸಿ ಬಳಿಯ ವೆಂಕಟೇಶ್ವರ ದೇವಾಲಯದ ಬಳಿಯಿಂದ ಮೆರವಣಿಗೆ ಮೂಲಕ ಸಮುದಾಯ ಭವನದವರೆಗೆ ಕರೆತರಲಾಯಿತು.

ಎಸ್‌.ತೀರ್ಥಾಚಾರ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ಶ್ರೀನಿವಾಸ್‌, ಜಿಲ್ಲಾಧ್ಯಕ್ಷ ಉಮಾಶಂಕರ್‌, ಮಹೇಂದ್ರಾಚಾರ್‌, ಗಿರಿಧರ ಮೂರ್ತಿ, ಎಸ್‌.ಪಿ.ಓಂಕಾರಮೂರ್ತಿ, ಎಚ್‌.ವಿ.ಮುರಳೀಧರ, ಪುರಸಭೆ ಸದಸ್ಯ ರಮೇಶ್‌, ಸಿಂಗಟಗೆರೆ ಜಗದೀಶಾಚಾರ್‌, ವಿವಿಧ ತಾಲ್ಲೂಕು, ಹೋಬಳಿಗಳ ಅಧ್ಯಕ್ಷರು, ಸದಸ್ಯರು, ವಿಶ್ವಕರ್ಮ ಸಮಾಜದ ಬಂಧುಗಳು ಇದ್ದರು.

ಸಮಾಜದ ಅಭಿವೃದ್ಧಿಗೆ ಸ್ಪಂದಿಸುವೇ

‘ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅನನ್ಯ. ಸಾಮಾಜಿಕವಾಗಿ ಚಿಕ್ಕ ಸಮುದಾಯವಾದರೂ ನಿಮ್ಮ ಸಂಘಟನೆಗೆ ನಿಗಮ ಸ್ಥಾಪನೆ ಮತ್ತು ವಿಶ್ವಕರ್ಮ ಜಯಂತಿ ಕಾರ್ಯಕ್ರಮಗಳು ನೆರವಾಗಿವೆ ಎಂದರೆ ತಪ್ಪಾಗಲಾರದು. ಹಿಂದುಳಿದ ವರ್ಗಗಳ ದನಿ ಗಟ್ಟಿಯಾಗಲು ರಾಜಕೀಯ ಪ್ರಾತಿನಿಧ್ಯದ ಅಗತ್ಯವಿದ್ದು ಮುಖ್ಯಮಂತ್ರಿ ಜತೆ ನಿಗಮದ ಅಭಿವೃದ್ಧಿಗೆ ಸರ್ಕಾರದ ಪ್ರೋತ್ಸಾಹ ಹಾಗೂ ಪರಿಷತ್‌ ಪ್ರಾತಿನಿಧ್ಯ ಕುರಿತು ವೈಯಕ್ತಿಕವಾಗಿ ಮಾತನಾಡಿ ಮನವಿ ಮಾಡುತ್ತೇನೆ. ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಸ್ಪಂದಿಸುವುದಾಗಿ’ ಸಮಾರಂಭ ಉದ್ಘಾಟಿಸಿದ ಶಾಸಕ ಕೆ.ಎಸ್‌.ಆನಂದ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.