ಶೃಂಗೇರಿ: `ಹೃನ್ಮನ ಗೆಲ್ಲುವ, ಆತ್ಮವಿಶ್ವಾಸ ವೃದ್ಧಿಸುವ ತಾಕತ್ತು ಸಂಗೀತಕ್ಕಿದ್ದು ಅದನ್ನು ಆಸ್ವಾದಿಸುವ ಮನಸ್ಸುಗಳು ಹೆಚ್ಚಬೇಕು. ಯೋಗ ಚರಿತ್ರೆಯಲ್ಲಿ ಸಂಗೀತ ಮಹತ್ವ ಸ್ಥಾನ ಪಡೆದಿದೆ' ಎಂದು ಕೊಪ್ಪದ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಗುಡ್ಡೇತೋಟ ನಟರಾಜ್ ಹೇಳಿದರು.
ಶೃಂಗೇರಿ ತಾಲ್ಲೂಕು ನಾದಸಿರಿ ಸುಗಮ ಸಂಗೀತ ವೃಂದದವರು ಉಳುವೆಬೈಲು ಸ್ವಯಂಪ್ರಕಾಶ ಬಯಲು ರಂಗ ಮಂದಿರದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ನಾದವರ್ಷಿಣಿ-10ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ನೆಲದಲ್ಲಿ ಸಾಹಿತ್ಯ ಹಾಗೂ ಸಂಗೀತದ ಮೌಲ್ಯಗಳು ಇಂದಿಗೂ ಗಟ್ಟಿಯಾಗಿ ಬೇರೂರಿದೆ. ಭಾವಗೀತೆ ಜೀವನದ ಅನುಭೂತಿಯನ್ನು ಜನರಿಗೆ ತಲುಪಿಸಲು ಇರುವ ಅಪರೂಪದ ಹಾದಿ' ಎಂದು ಅವರು ಹೇಳಿದರು.
`ನಾದಸಿರಿ' ಪ್ರಶಸ್ತಿ ಸ್ವೀಕರಿಸಿ ಹಿನ್ನೆಲೆ ಗಾಯಕ, ಬೆಂಗಳೂರಿನ ರಾಘವೇಂದ್ರ ಬೀಜಾಡಿ ಮಾತನಾಡಿ,`ಪ್ರಕೃತಿಯ ನಡುವೆ ಇರುವ ನಾವು ಕಲಿಯುವ ವಿದ್ಯೆ ಶಾಶ್ವತ. ಭಾವನೆಗಳಿಗೆ ಮೌನ ಕೂಡ ಭಾಷೆ. ಈ ಭಾಷೆ ಅಂತರಂಗದಿಂದ ಹೊರಹೊಮ್ಮಿದಾಗ ಕವಿತೆ ಹುಟ್ಟುತ್ತದೆ. ಭಾವಗೀತೆಯ ಪ್ರತಿ ಸಾಲುಗಳು ಜನಸಾಮಾನ್ಯರ ಹೃದಯಗಳನ್ನು ಗೆಲ್ಲಬೇಕು. ಯುವಪೀಳಿಗೆ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಳ್ಳಬೇಕು' ಎಂದರು.
ಅಧ್ಯಕ್ಷತೆ ವಹಿಸಿದ ವೈದ್ಯ ಡಾ.ಅಣ್ಣಾದುರೆ ಮಾತನಾಡಿ, `ಮಾನಸಿಕ ಆರೋಗ್ಯಕ್ಕೆ ಸಂಗೀತ ದಿವ್ಯ ಜೌಷಧ. ಮನಸ್ಸನ್ನು ಮುದಗೊಳಿಸುವ ಸಂಗೀತ ಸಾಂಸ್ಕೃತಿಕ ಮೌಲ್ಯಗಳ ಬೆಳವಣಿಗೆಗೆ ಪೂರಕ. ಶಾಸ್ತ್ರೀಯ ಸಂಗೀತ, ಜಾನಪದ, ಭಾವಗೀತೆ ಮೊದಲಾದವುಗಳಲ್ಲಿ ಮೂಡಿಬರುವ ನಾದ, ಲಯ, ಗೇಯತೆ ಮನಸ್ಸು ಮತ್ತು ಹೃದಯವನ್ನು ಮುಟ್ಟುತ್ತದೆ' ಎಂದರು.
ಭಾವಸುಧೆ ಸುಗಮ ಸಂಗೀತ ಕಾರ್ಯಕ್ರಮವನ್ನು ಗಾಯಕಿ ಸುರೇಖಾ ಹೆಗ್ಡೆ, ರಾಘವೇಂದ್ರ ಬೀಜಾಡಿ ನಡೆಸಿ ಕೊಟ್ಟರು. ಮಲೆನಾಡಿನ ಗಾಯಕರಾದ ಸಣ್ಣಾನೆಗುಂದ ಗೋಪಾಲಕೃಷ್ಣ, ಬೆಳಂದೂರು ಗಣೇಶ್ ಪ್ರಸಾದ್, ನಿಷ್ಕಲಾ ಕಿರುಕೋಡು ಹಾಡಿದರು. ಹಾಸನದ ವೆಂಕಟೇಶ್, ತುಕಾರಾಂ ರಂಗಧೋಳ್, ರಾಘವೇಂದ್ರ ರಂಗಧೋಳ್ ಹಿನ್ನೆಲೆ ಸಹಕಾರ ನೀಡಿದರು. ಸಂಪಗೋಡು ಗುರುಮೂರ್ತಿ, ಉಳುವೆ ಗಿರೀಶ್, ಕೃಷ್ಣಮೂರ್ತಿ ಹಂಚಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.