ಶೃಂಗೇರಿ: ನೇರಳಕೊಡಿಗೆಯಲ್ಲಿ ಗಣೇಶ್ ಹೆಗ್ಡೆ ಅವರ ಮನೆಯ ಹಿಂದೆ ಅತಿಯಾದ ಮಳೆಯಿಂದ ಭೂಕುಸಿತ ಉಂಟಾಗಿದ್ದ ಜಾಗ ಮತ್ತು ನೇರಳಕೊಡಿಗೆಯಲ್ಲಿ ಭಾರಿ ಪ್ರಮಾಣದ ರಸ್ತೆ ಕುಸಿತವಾಗಿದ್ದ ಜಾಗದಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಕೇಂದ್ರದ ವಿಪತ್ತು ನಿರ್ವಹಣಾ ಪಡೆ ಅಣಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಿತು.
ನೇರಳಕೊಡಿಗೆಯ ಮನೆಯ ಹಿಂದೆ ಅತಿಯಾದ ಮಳೆಯಿಂದ ಭೂಕುಸಿತದ ಜಾಗದಲ್ಲಿ ಮನೆಯ ಒಳಗಡೆ ಜನರು ಬಾಕಿಯಾದ ಸಂದರ್ಭದಲ್ಲಿ ಮೊದಲು ನೋಡಿದ ಸಾರ್ವಜನಿಕರು ಪೊಲೀಸ್ ನಿಯಂತ್ರಣ ಕೊಠಡಿ, ಅಗ್ನಿ ಶಾಮಕ ದಳ ಮತ್ತು ಆ ಭಾಗದ ಕಂದಾಯ ಅಧಿಕಾರಿಗಳಿಗೆ ಕರೆ ಮಾಡುವ, ಮಣ್ಣಿನ ಅಡಿಯಲ್ಲಿ ಸಿಲುಕಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವ, ಸಂತ್ರಸ್ತರನ್ನು ಕಾಳಜಿ ಕೇಂದ್ರದಲ್ಲಿ ಉಪಚರಿಸುವುದನ್ನು ಅಣಕು ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.
ಭೂ ಕುಸಿತ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ, ವಾಹನ ಸಂಚಾರ ನಿರ್ಬಂಧಗೊಳಿಸುವ ಜತೆಗೆ, ಜನರನ್ನು ರಕ್ಷಿಸಿ, ಕೈ–ಕಾಲು ಮುರಿದವರಿಗೆ ಪ್ರಥಮ ಚಿಕಿತ್ಸೆ ನೀಡುವ, ಹಗ್ಗದ ಮೂಲಕ ಮೇಲೆತ್ತುವ, ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಮಾದರಿಯನ್ನು ಪ್ರದರ್ಶಿಸಿದರು.
ಕೇಂದ್ರ ವಿಪತ್ತು ನಿರ್ವಾಹಣಾ ಪಡೆಯ ಇನ್ಸ್ಪೆಕ್ಟರ್ ಅಜಯ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಶಾಂತಿಲಾಲ್, ದೇವರಾಜ್ ಮತ್ತು 25 ಸಿಬ್ಬಂದಿ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆಯ ಸಿಬ್ಬಂದಿ, ಗೃಹ ರಕ್ಷಕ ದಳ, ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ವಿದ್ಯಾರ್ಥಿಗಳು ಅಣಕು ಪ್ರದರ್ಶನ ಮಾಡಿದರು.
ಅಣಕು ಪ್ರದರ್ಶನ ಸ್ಥಳದಲ್ಲಿ ತಹಶೀಲ್ದಾರ್ ಗೌರಮ್ಮ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ದೀಕ್ಷಿತ್, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.