ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಹೆಗ್ತೂರಿನಲ್ಲಿ ಶನಿವಾರ ನಿಗೂಢವಾಗಿ ಸಾವಿಗೀಡಾದ ಶೃಂಗೇರಿ ತಹಶೀಲ್ದಾರ್ ವಾಹನ ಚಾಲಕ ವಿಜೇತ ಶವವನ್ನು ತಾಲ್ಲೂಕು ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಲು ಮೃತನ ಕುಟುಂಬದವರು ಮುಂದಾಗಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಒಯ್ದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು, ಪರಿಹಾರ ಘೋಷಿಸಬೇಕು ಎಂದು ಮೃತನ ಸಹೋದರ ಮಾವ ಚನ್ನಕೇಶವ ಪಟ್ಟುಹಿಡಿದಿದ್ದಾರೆ.
ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಅವರು ಮೃತನ ಸಂಬಂಧಿಕರು, ಗ್ರಾಮಸ್ಥರ ಜತೆ ಮಾತನಾಡಿದ್ದಾರೆ.
ಒಂದು ಕೋಟಿ ಪರಿಹಾರ ಘೋಷಿಸಬೇಕು. ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.
ಶೃಂಗೇರಿ ತಾಲ್ಲೂಕಿನಲ್ಲಿ 94 ‘ಸಿ’, 94‘ಸಿಸಿ’ ನಲ್ಲಿ ಅರ್ಜಿ ಸಲ್ಲಿಸಿದ ಹಲವರಿಗೆ ಅಕ್ರಮವಾಗಿ ಹಕ್ಕುಪತ್ರ ವಿತರಿಸಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಅಂಬುಜಾ, ಇತರರು ಭ್ರಷ್ಟಾಚಾರ ನಿಗ್ರಹ ದಳ ತಂಡದ (ಎಸಿಬಿ) ಬಲೆಗೆ ಬಿದ್ದಿದ್ದರು. ಮೂವರು ಅಮಾನತುಗೊಂಡಿದ್ದರು.
ಜ.27ರಂದು ಸಂಜೆ ಹೊತ್ತಿನಲ್ಲಿ ತಹಶೀಲ್ದಾರ್ ಕೊಠಡಿಯ ಬೀರುವಿನ ಬೀಗವನ್ನು ಯಾರೋ ತೆಗೆದು ಬಿಟ್ಟಿದ್ದರು. ಈ ಬಗ್ಗೆ ಪ್ರಭಾರ ತಹಶೀಲ್ದಾರ್ ಬಸವರಾಜು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತಹಶೀಲ್ದಾರ್ ವಾಹನ ಚಾಲಕ ವಿಜೇತ ಮೃತದೇಹ ನೇಣುಹಾಕಿದ ಸ್ಥಿತಿಯಲ್ಲಿ ಹೆಗ್ತೂರಿನ ಕಾಡಿನಲ್ಲಿ ಪತ್ತೆಯಾಗಿತ್ತು.
ವಿಜೇತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಕುರುಬಗೆರೆ, ತಾಲ್ಲೂಕು ಕಚೇರಿ ನೌಕರ ಶರತ್, ವ್ಯಾಪಾರಿ ನಾಗೇಂದ್ರ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.