ಶೃಂಗೇರಿಯಲ್ಲಿ ಮಳೆಯಿಂದ ತುಂಗಾನದಿ ಉಕ್ಕಿ ಹರಿಯುತ್ತಿರುವುದು.
ಚಿತ್ರ:ರಾಘವೇಂದ್ರ ಕೆ.ಎನ್
ಶೃಂಗೇರಿ: ತಾಲ್ಲೂಕಿನಲ್ಲಿ ಶನಿವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಭಾನುವಾರ ತುಂಗಾನದಿಯಲ್ಲಿ ಪ್ರವಾಹ ಉಂಟಾಗಿದೆ.
ತಾಲ್ಲೂಕಿನ ಶೃಂಗೇರಿಯಲ್ಲಿ 132 ಮಿ.ಮೀ, ಕಿಗ್ಗಾದಲ್ಲಿ 152.8 ಮಿ.ಮೀ, ಕೆರೆಕಟ್ಟೆ 154 ಮಿ.ಮೀ ಮಳೆಯಾಗಿದೆ. ಒಟ್ಟು 3,475 ಮಿ.ಮೀ ಮಳೆಯಾಗಿದೆ.
ಈ ಭೀಕರ ಮಳೆಯಿಂದ ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರ್ನಲ್ಲಿ ರಸ್ತೆ ಜಲಾವೃತಗೊಂಡು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಶೃಂಗೇರಿಯ ಭಾರತೀತೀರ್ಥ ರಸ್ತೆ ನೀರಿನಿಂದ ಆವೃತಗೊಂಡಿದೆ. ಕುರುಬಕೇರಿ ರಸ್ತೆ ನೀರಿನಿಂದ ಆವೃತಗೊಂಡು ರಸ್ತೆಯ 2 ಕಡೆ ನೀರಿನಿಂದ ತುಂಬಿದ್ದು ಮಧ್ಯೆ ದ್ವೀಪದಂತಾಗಿದೆ.
ಪ್ರವಾಹ ಉಂಟಾಗಿದ್ದರಿಂದ ಶೃಂಗೇರಿಯ ಶಾರದ ಪೀಠದ ದರ್ಶನ ಪಡೆಯಲು ಭಾನುವಾರ ಬಂದಿದ್ದ ಪ್ರವಾಸಿಗರಿಗೆ ಮಳೆಯಿಂದ ತೊಂದರೆಯಾಯಿತು. ಶಾರದ ಪೀಠದ ಭಾರತೀತೀರ್ಥ ಸ್ವಾಮೀಜಿಯವರ ಸ್ನಾನಘಟ್ಟ ಹಾಗೂ ಸಂಧ್ಯಾವಂದನೆ ಮಂಟಪ ಮುಳುಗಿದೆ. ನದಿಯ ಪ್ರವಾಹದಲ್ಲಿ ಕಾಳಿಂಗ ಸರ್ಪದಂತಹ ಜೀವ ಜಂತುಗಳು, ಮರದ ದಿಮ್ಮಿಗಳು ತೇಲಿ ಹೋದವು.
ತಾಲ್ಲೂಕಿನ ಜಲಪಾತಗಳಾದ ನರಸಿಂಹ ಪರ್ವತದ ಎರಡು ಕೊಳಗಳು, ಬರ್ಕಣ, ಸಿರಿಮನೆ, ಸೂತನಬ್ಬಿ ಮುಂತಾದ ಜಲಪಾತಗಳು ತುಂಬಿ ಉಕ್ಕಿ ಹರಿಯುತ್ತಿದೆ.
ಮಳೆಯಿಂದ ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ಗಾಂಧಿ ಮೈದಾನ, ವಿದ್ಯಾರಣ್ಯಪುರ ರಸ್ತೆ, ಕಿಕ್ರೆ ಹಳ್ಳ ಸೇತುವೆ ಮೇಲೆ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆ ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ.
ತಾಲ್ಲೂಕಿನ 49 ಗ್ರಾಮಗಳಲ್ಲಿ ಶಿರ್ಲು, ಹಾದಿ, ಕೆರೆ, ಸುಂಕದಮಕ್ಕಿ, ನಿಲಂದೂರು, ಕುಂಬ್ರಗೋಡು, ಕೂಗೋಡು ಮೊದಲಾದ ಗ್ರಾಮಗಳು ಪಟ್ಟಣದಿಂದ 25 ರಿಂದ 30 ಕಿಲೋಮೀಟರ್ ದೂರವಿದ್ದು, ಇಲ್ಲಿನ ರಸ್ತೆಗಳು ಹದಗೆಟ್ಟಿರುವುದರಿಂದ ಅನಾರೋಗ್ಯ, ಅಪಘಾತ ಸಂಭವಿಸಿದರೆ ಆಸ್ಪತ್ರೆಗೆ ಬರಲು ಅಲ್ಲಿನ ಜನ ಹರಸಾಹಸ ಪಡಬೇಕಿದೆ.
ಅತಿಯಾದ ಮಳೆಯ ಕಾರಣ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶಾಲಾ ಸೋಮವಾರ(ಆ.18) ರಜಾ ಘೋಷಿಸಲಾಗಿದೆ. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಪ್ರವಾಹದಿಂದ ಯಾರು ಆತಂಕಕ್ಕೆ ಒಳಬಾರದು ಎಂದು ತಹಶೀಲ್ದಾರ್ ಅನುಪ್ ಸಂಜೋಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.