ಮೂಡಿಗೆರೆ: ತಾಲ್ಲೂಕಿನ ಕಾಫಿ ಕಂಪನ್ನು ಜಗತ್ತಿಗೆ ಪಸರಿಸಿದ ಕಾಫಿ ಉದ್ಯಮದ ದೊರೆಯೆಂದೇ ಪ್ರಸಿದ್ಧಿಯಾಗಿದ್ದ ಕಾಫಿ ಉದ್ಯಮಿ ವಿ.ಜಿ. ಸಿದ್ಧಾರ್ಥ ಹೆಗ್ಡೆಯ ನೆನಪಿನಲ್ಲಿ ನಿರ್ಮಿಸಿರುವ ಸಿದ್ಧಾರ್ಥವನವು ಕಣ್ಮನ ಸೆಳೆಯುತ್ತಿದೆ.
ವಿ.ಜಿ. ಸಿದ್ಧಾರ್ಥ ಹೆಗ್ಡೆ ಅಭಿಮಾನಿಗಳ ಬಳಗದ ಅಧ್ಯಕ್ಷ ಜಿ.ಎಚ್ ಹಾಲಪ್ಪಗೌಡ ಅವರ ನೇತೃತ್ವದಲ್ಲಿ ಮೂಡಿಗೆರೆ ಪಟ್ಟಣದಿಂದ ಕೂಗಳತೆ ದೂರದಲ್ಲಿ ನಿರ್ಮಾಣಗೊಂಡಿರುವ ಸಿದ್ಧಾರ್ಥವನವು ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಒಂದಾಗಿ ಮಾರ್ಪಟ್ಟಿದ್ದು, ನಿತ್ಯವೂ ನೂರಾರು ಮಂದಿ ಪ್ರವಾಸಿಗರು ಬಂದು ವೀಕ್ಷಿಸುವುದಲ್ಲದೇ, ಕಾಫಿ ದೊರೆ ಸಿದ್ಧಾರ್ಥ ಹೆಗ್ಡೆ ಪ್ರತಿಮೆಯ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಕಾಫಿ ನಾಡಿನ ದೊರೆಯ ನೆನಪನ್ನು ಮೆಲುಕು ಹಾಕುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 173ರ ಕೊಲ್ಲಿಬೈಲ್ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಈ ತಾಣದಲ್ಲಿ ಕಾಫಿ ಉದ್ಯಮಿ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಪ್ರತಿಮೆಯ ಮುಂಭಾಗದಲ್ಲಿಯೇ ಗೌತಮ ಬುದ್ಧನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಎರಡು ಪುತ್ಥಳಿಯ ನಡುವೆ ಕೃತಕ ಗುಹೆಯನ್ನು ನಿರ್ಮಿಸಿದ್ದು ಆಕರ್ಷಣೀಯ ತಾಣವನ್ನಾಗಿಸಲಾಗಿದೆ. ಉದ್ಯಾನದ ಪ್ರವೇಶ ದ್ವಾರದಲ್ಲಿಯೇ ಕಾಫಿ ಬೀಜದ ಆಕರ್ಷಕ ಪ್ರತಿಮೆಯನ್ನು ಕೂಡ ಇಡಲಾಗಿದ್ದು, ಮುಂಭಾಗದಲ್ಲಿ ಹೂದೋಟವನ್ನು ಬೆಳೆಯಲಾಗಿದೆ. ಉದ್ಯಾನದ ಮುಂಭಾಗದಲ್ಲಿ ವಾಹನಗಳ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಮಾತ್ರವಲ್ಲದೇ, ಮೂಡಿಗೆರೆ, ಚಿಕ್ಕಮಗಳೂರು, ಆಲ್ದೂರು ಭಾಗಗಳ ಜನರು, ಕಾಲೇಜು ಯುವಕ, ಯುವತಿಯರು ಭೇಟಿ ನೀಡಿ ಕಾಫಿ ಉದ್ಯಮದ ಕಣ್ಮಣಿಯ ಪುತ್ಥಳಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಸಿದ್ಧಾರ್ಥವನಕ್ಕೆ ಪ್ರವೇಶ ಉಚಿತವಾಗಿದ್ದು, ಮನಸಿಗೆ ಪ್ರಶಾಂತತೆಯನ್ನುನೀಡುವ ತಾಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.