ಚಿಕ್ಕಮಗಳೂರು: ‘ಸಿದ್ರಾಮುಲ್ಲಾ ಖಾನ್ (ಸಿದ್ದರಾಮಯ್ಯ) ಎಂದಾಕ್ಷಣ ಕಾಂಗ್ರೆಸ್ನವರಿಗೆ ಮೈಯೆಲ್ಲ ಉರಿಯುತ್ತಿದೆ. ಆ ಪದ ಬೈಗುಳವಲ್ಲ, ನಿಮ್ಮ ಭಾವನೆಗಳಿಗೆ ಕೊಟ್ಟ ಬಿರುದು ಅಂದುಕೊಳ್ಳಬಹುದು’ ಎಂದು ಸಿ.ಟಿ.ರವಿ ಸಮರ್ಥಿಸಿಕೊಂಡರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ನವರಿಗೆ ಇಷ್ಟು ಉರಿ ಹತ್ತಿಕೊಳ್ಳುತ್ತದೆ ಎಂದು ಗೊತ್ತಿದ್ದರೆ 10 ವರ್ಷ ಮೊದಲೇ ಹೀಗೆ ಹೇಳುತ್ತಿದೆ. ಯಡಿಯೂರಪ್ಪ ಅವರನ್ನು ‘ರಾಜಾಹುಲಿ’, ಸಿದ್ದರಾಮಯ್ಯ ಅವರನ್ನು ‘ಹುಲಿಯಾ’ ಎಂದು ಕರೆದರು. ಹಾಗೆಯೇ, ಇದನ್ನು ಬಿರುದು ಎಂದು ಭಾವಿಸಿಕೊಳ್ಳಬಹುದಿತ್ತು’ ಎಂದು ಪ್ರತಿಪಾದಿಸಿದರು.
‘ಎಂ.ಬಿ.ಪಾಟೀಲ್ ಪಾಳೆಗಾರಿಕೆ, ಶ್ರೀಮಂತಿಕೆ ದರ್ಪ ಬಿಡಿ’
‘ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ಪಾಳೆಗಾರಿಕೆ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು, ಶ್ರೀಮಂತಿಕೆ ದರ್ಪ ಬಿಡಬೇಕು. ಇಲ್ಲದಿದ್ದರೆ ಅವರ ಊರಿಗೇ ಹೋಗಿ ಹೇಳಬೇಕಿರುವುದನ್ನು ಅವರ ಮುಂದೆಯೇ ಹೇಳುತ್ತೇನೆ’ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದರು.
‘ಸಿದ್ರಾಮುಲ್ಲಾ ಖಾನ್ (ಸಿದ್ದರಾಮಯ್ಯ) ಎಂದು ಹೇಳುವುದನ್ನು ಸಿ.ಟಿ.ರವಿ ಮುಂದುವರಿಸಿದರೆ ಓಡಾಡುವುದು ಕಷ್ಟವಾಗಬಹುದು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಅವರ ಬೆದರಿಕೆಯೆಲ್ಲ ನಡೆಯಲ್ಲ. ಎಂ.ಬಿ.ಪಾಟೀಲ್ ಅವರು ಶ್ರೀಮಂತರು, ಪಾಳೇಗಾರಿಕೆ ಮನೆತನದವರು ಇರಬಹುದು. ಅವರ ಶ್ರೀಮಂತಿಕೆ ದರ್ಪ ಇಲ್ಲಿ ನಡೆಯಲ್ಲ. ಕರ್ನಾಟಕ ಯಾರ ಸ್ವತ್ತೂ ಅಲ್ಲ’ ಎಂದು ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.