ADVERTISEMENT

‘ವಿದ್ಯಾರ್ಥಿಗಳಿಗೆ ಕೌಶಲ್ಯಯುಕ್ತ ಶಿಕ್ಷಣ ನೀಡಿ’

ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಉದ್ಘಾಟನೆ, ಹೆಚ್ಚುವರಿ ಕೊಠಡಿಗಳು, ವರ್ಕ್ ಶಾಪ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:00 IST
Last Updated 29 ಅಕ್ಟೋಬರ್ 2025, 4:00 IST
ಬಾವಿಕೆರೆ ಗ್ರಾಮದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದ ಉದ್ಘಾಟನೆ, ಹೆಚ್ಚುವರಿ ಕೊಠಡಿಗಳು ಹಾಗೂ ವರ್ಕ್ ಶಾಪ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಎಂ.ಸಿ. ಉದ್ಘಾಟಿಸಿದರು
ಬಾವಿಕೆರೆ ಗ್ರಾಮದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದ ಉದ್ಘಾಟನೆ, ಹೆಚ್ಚುವರಿ ಕೊಠಡಿಗಳು ಹಾಗೂ ವರ್ಕ್ ಶಾಪ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಎಂ.ಸಿ. ಉದ್ಘಾಟಿಸಿದರು   

ತರೀಕೆರೆ: ‘ಗುಣಮಟ್ಟದ ಶಿಕ್ಷಣ ಕೊಡದಿದ್ದರೆ ಕಾಲೇಜು ಪ್ರಾರಂಭಿಸಿದರೆ ಪ್ರಯೋಜನವಾಗಲಾರದು. ಆದ್ದರಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಕೌಶಲ್ಯಯುಕ್ತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಎಂ.ಸಿ. ಹೇಳಿದರು.

ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದ ಉದ್ಘಾಟನೆ, ಹೆಚ್ಚುವರಿ ಕೊಠಡಿಗಳು ಹಾಗೂ ವರ್ಕ್ ಶಾಪ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ, ಬಳಿಕ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.

ತಾಂತ್ರಿಕ ಕಾಲೇಜುಗಳಲ್ಲಿ ದೊಡ್ಡಮಟ್ಟದಲ್ಲಿ ಬೋಧಕರ ಸಮಸ್ಯೆ ಇದ್ದು, ಸರ್ಕಾರಿ ಕಾಲೇಜುಗಳಿಗೆ ಮಕ್ಕಳ ದಾಖಲಾತಿಯು ಪ್ರಮಾಣವು ಕಡಿಮೆಯಾಗುತ್ತಿದೆ. ಸಮಸ್ಯೆಯನ್ನು ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2000 ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಲು ಅನುಮೋದನೆ ನೀಡಿದ್ದಾರೆ. ಪರಿಶಿಷ್ಟರ ಒಳ ಮೀಸಲಾತಿಯ ಪ್ರಕ್ರಿಯೆ ನಡೆಯುತ್ತಿದ್ದು, ಇದು ಅಂತಿಮವಾದ ತಕ್ಷಣ ನೇಮಕಾತಿ ಪ್ರಕ್ರಿಯೆ ಚಾಲನೆಗೊಳಿಸಲಾಗುವುದು ಎಂದರು.

ADVERTISEMENT

ಚಿಕ್ಕಮಗಳೂರು ಜಿಲ್ಲೆಗೆ ಈ ಹಿಂದೆ ಎಂಜಿನಿಯರ್‌ ಕಾಲೇಜು ಮಂಜೂರಾಗಿತ್ತು. ಆದರೆ, ಅರಣ್ಯ ಮತ್ತಿತರೆ ತಾಂತ್ರಿಕ ಕಾರಣಗಳಿಂದ ಜಾಗದ ಕೊರತೆಯಿಂದಾಗಿ ವಾಪಸ್ಸು ಹೋಗಿತ್ತು. ಸ್ಥಳಾವಕಾಶ ದೊರೆತರೆ ಜಿಲ್ಲೆಗೆ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಲು ಮುಖ್ಯಮಂತ್ರಿ ಚರ್ಚಿಸಲಾಗುವುದು ಎಂದು ತಿಳಿಸಿದರು. 

ಕಳೆದ ಹದಿನೆಂಟು ವರ್ಷಗಳಿಂದ ನೇಮಕಾತಿ ಮತ್ತು ಬಡ್ತಿ ನೀಡಿರಲಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಅತಿಥಿ ಶಿಕ್ಷಕರನ್ನು 9 ಸಾವಿರದಿಂದ 12 ಸಾವಿರಕ್ಕೆ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಶುಲ್ಕದಲ್ಲಿಯೂ ಸಹ ಸರ್ಕಾರ ಕಡಿಮೆ ಮಾಡಿರುವುದರಿಂದ ಶೇ 20ರಿಂದ 30ರಷ್ಟು ದಾಖಲಾತಿಯಲ್ಲಿ ಹೆಚ್ಚಳವಾಗಿದೆ ಎಂದರು.

ದೇಶದ ನೀತಿ ಆಯೋಗದ ಅಧ್ಯಯನದ ಪ್ರಕಾರ 1 ಲಕ್ಷ ಜನತೆಗೆ 30 ಕಾಲೇಜುಗಳು ಇರಬೇಕು. ಆದರೆ ನಮ್ಮ ರಾಜ್ಯದಲ್ಲಿ 1 ಲಕ್ಷ ಜನರಿಗೆ 66 ಕಾಲೇಜುಗಳಿವೆ. ಬಿಹಾರದಲ್ಲಿ ಕೇವಲ 0.1ರಲ್ಲಿದೆ. ಈ ಹಂತದಲ್ಲಿ ನಾವು ಮುಂದಿದ್ದೇವೆ ಎಂದರು.

ರಾಜ್ಯ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಏಕರೂಪದ ವೇಳಾಪಟ್ಟಿ ಇಲ್ಲದೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಇದರಿಂದ ಸೆಮಿಸ್ಟರ್ ಮತ್ತು ಸಿ.ಇ.ಟಿ. ಪರೀಕ್ಷೆಗಳಿಗೂ ತೊಂದರೆಯಾಗುತ್ತಿದೆ ಎಂದು ಮಕ್ಕಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅತಿಥಿ ಉಪನ್ಯಾಸಕರ ನೇಮಕಾತಿ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ಇದ್ದ ಕಾರಣ ಈ ವೇಳಾಪಟ್ಟಿಯಲ್ಲಿ ಗೊಂದಲವಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಮುಂದಿನ ವಾರದಲ್ಲಿ ಅಂತಿಮಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮತ್ ಮತ್ತು ಬಾವಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಮಧುಸೂಧನ್ ಮಾತನಾಡಿದರು.

ಸಭೆಯಲ್ಲಿ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದಸ್ವಾಮಿ, ಉಪಾಧ್ಯಕ್ಷ ಸಮೀವುಲ್ಲಾ ಶರೀಫ್, ಕಾಂಗ್ರೇಸ್‍ ಪಕ್ಷದ ತರೀಕೆರೆ ಬ್ಲಾಕ್ ಅಧ್ಯಕ್ಷ ಎಚ್.ಯು. ಫಾರೂಕ್, ಅಜ್ಜಂಪುರ ಬ್ಲಾಕ್ ಅಧ್ಯಕ್ಷ ದಯಾನಂದ್, ಮುಖಂಡರಾದ ಎಚ್.ಎನ್. ಮಂಜುನಾಥ್, ಸಿರಾಜ್, ಸೀತಾರಾಮ್, ಗಂಗಾಧರ್, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಟಿ.ಎನ್. ಜಗದೀಶ್ ಇದ್ದರು.

ಕಾಲೇಜಿನ ಪ್ರಾಂಶುಪಾಲ ಎಲ್.ಎಸ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಮಮತಾ ಸ್ವಾಗತಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿ ನಾಡಗೀತೆ ಹಾಡಿದರು.

₹10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ

₹2.5 ಕೋಟಿ ಅನುದಾನವನ್ನು ಹೆಚ್ಚುವರಿ ಕೊಠಡಿಗಳಿಗೆ ಬಿಡುಗಡೆ ಮಾಡಿದ್ದಾರೆ. ಕಾಲೇಜಿನ ಕಾಂಪೌಂಡ್ ಮತ್ತು ಇತರೆ ಮೂಲ ಸೌಕರ್ಯಗಳಿಗೆ ₹10 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು ಮತ್ತು ಇದೇ ಕಾಲೇಜಿನ ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು ಇಲ್ಲೇ ಎಂಜಿನಿಯರಿಂಗ್ ಕಾಲೇಜನ್ನು ಮಂಜೂರಿ ಮಾಡಿಸಬೇಕು ಎಂದು ‌ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಚ್. ಶ್ರೀನಿವಾಸ್ ಸಚಿವರಿಗೆ ಬೇಡಿಕೆ ಇಟ್ಟರು.