ADVERTISEMENT

‘ಕ್ರೀಡೆಗಳಿಂದ ಸಹಭಾಗಿತ್ವ ಕೌಶಲ ಕಲಿಕೆ’

ಹೆಣ್ಣುಮಕ್ಕಳ ಗ್ರಾಮೀಣ ಕ್ರೀಡಾಕೂಟ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 3:35 IST
Last Updated 4 ಏಪ್ರಿಲ್ 2021, 3:35 IST
ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬರು ಪ್ರಯತ್ನದಲ್ಲಿ ತೊಡಗಿರುವುದು. –ಪ್ರಜಾವಾಣಿ ವಾರ್ತೆ
ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬರು ಪ್ರಯತ್ನದಲ್ಲಿ ತೊಡಗಿರುವುದು. –ಪ್ರಜಾವಾಣಿ ವಾರ್ತೆ   

ಚಿಕ್ಕಮಗಳೂರು: ‘ಹೆಣ್ಣುಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಹೆಚ್ಚು ಅವಕಾಶಗಳನ್ನು ಕಲ್ಪಿಸಬೇಕು. ಆಟೋಟ ಚಟುವಟಿಕೆಗಳು ಸೋಲು–ಗೆಲುವುಗಳನ್ನು ಎದುರಿಸುವುದನ್ನು ಕಲಿಸುತ್ತವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅವರ್ಷ, ಕನ್ನಡ ಕಾಯಕ ವರ್ಷ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಹೆಣ್ಣುಮಕ್ಕಳ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಲು ಇಂಥ ವೇದಿಕೆಗಳು ಅಗತ್ಯ. ಜಿಲ್ಲೆಯಲ್ಲಿ ತಿಂಗಳಿಗೊಮ್ಮೆ ಹೆಣ್ಣುಮಕ್ಕಳಿಗೆ ಆಟೋಟ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದು ಒಳ್ಳೆಯ ನಡೆ’ ಎಂದು ಶ್ಲಾಘಿಸಿದರು.

ಕ್ರೀಡೆಗಳನ್ನು ಹಲವು ಪಾಠಗಳನ್ನು ಕಲಿಸುತ್ತವೆ. ಪ್ರಯತ್ನ, ಸಹಭಾಗಿತ್ವ, ಗುಂಪು ಕಾರ್ಯ– ಸ್ಫೂರ್ತಿ, ಸಮಸ್ಯೆ ಪರಿಹಾರ ಕೌಶಲಗಳನ್ನು ಮೈಗೂಡಿಸುತ್ತದೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದದರಿಂದ ಮನಸ್ಸು ಉಲ್ಲಸಿತವಾಗಿರುತ್ತದೆ ಎಂದು ವಿವರಿಸಿದರು.

ADVERTISEMENT

ಸ್ಪರ್ಧೆಗಿಂತ ಸಹಭಾಗಿತ್ವ ಮುಖ್ಯ ಎಂಬುದು 21ನೇ ಶತಮಾನದ ದಿವ್ಯಮಂತ್ರವಾಗಿದೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಇತರರೊಂದಿಗೆ ಬೆರೆಯುತ್ತೇವೆ. ಸಹಭಾಗಿತ್ವದ ಮಹತ್ವವನ್ನು ಕ್ರೀಡೆ ಕಲಿಸುತ್ತದೆ ’ಎಂದರು.

ಬಾಲನ್ಯಾಯ ಮಂಡಳಿ ಎ. ಅರುಣಾಕುಮಾರಿ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ. ಗೆದ್ದೇ ಗೆಲ್ಲುತ್ತೇವೆ ಎಂಬ ಛಲ ಮೈಗೂಡುತ್ತದೆ’ ಎಂದು ಹೇಳಿದರು.

‘ಜೀವನದಲ್ಲಿ ಸೋತಾಗ ಹತಾಶರಾಗಿ ದುಡುಕಿನ ನಿರ್ಧಾರಕ್ಕೆ ಮುಂದಾಗಬಾರದು. ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ಬಾಗಿಲು ತೆರೆದಿರುತ್ತದೆ ಎಂಬುದು ಗೊತ್ತಿರಬೇಕು. ಪ್ರಯತ್ನಪಟ್ಟು ಯಶಸ್ಸು ಸಾಧಿಸಬೇಕು’ ಎಂದು ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ದಿವ್ಯಾದೇವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.