ADVERTISEMENT

ಶೃಂಗೇರಿ: ಶಾಸಕ ಹೇಳಿಕೆ ಹಿಂಪಡೆಯಲಿ; ತಲಗಾರು ಉಮೇಶ್

ಶೃಂಗೇರಿಯಲ್ಲಿ ಬಿಜೆಪಿಯಿಂದ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:44 IST
Last Updated 1 ಮಾರ್ಚ್ 2026, 8:44 IST
ಶೃಂಗೇರಿ ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಬಿಜೆಪಿ ಘಟಕ ಆಯೋಜಿಸಿದ್ದ, ಮಾರ್ಚ್‌ 2ರಂದು ನಡೆಯುವ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿದರು
ಶೃಂಗೇರಿ ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಬಿಜೆಪಿ ಘಟಕ ಆಯೋಜಿಸಿದ್ದ, ಮಾರ್ಚ್‌ 2ರಂದು ನಡೆಯುವ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿದರು   

ಶೃಂಗೇರಿ: ‘ಹೆಣ ಬಿದ್ದಾಗ ಬಿಜೆಪಿಯವರು ರಣಹದ್ದುವಿನಂತೆ ಬರುತ್ತಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ನೀಡಿದ ಹೇಳಿಕೆ ಹಿಂಪಡೆಯಬೇಕು. ಇದು ಶಾಸಕನಾಗಿ ಅವರಿಗೆ ಶೋಭೆ ತರುವ ವಿಚಾರವಲ್ಲ’ ಎಂದು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ತಲಗಾರು ಉಮೇಶ್ ಹೇಳಿದರು.

ತಾಲ್ಲೂಕು ಬಿಜೆಪಿ ಘಟಕ ಮಾರ್ಷ್ 2ರಂದು ಹಮ್ಮಿಕೊಂಡಿರುವ ಪ್ರತಿಭಟನೆಯ ಸಂಬಂಧ ಶೃಂಗೇರಿಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಾರ್ಚ್‌ 2ರಂದು ಬೆಳಿಗ್ಗೆ 11 ಘಂಟೆಗೆ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಬಿಜೆಪಿಯಿಂದ ಪ್ರತಿಭಟನೆ ಆಯೋಜಿಸಿದ್ದೇವೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪ್ರಮುಖರಾದ ಡಿ.ಎನ್.ಜೀವರಾಜ್, ದೇವರಾಜ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.

ADVERTISEMENT

ವಿವಿಧ ಇಲಾಖೆಗಳಲ್ಲಿ 7 ವರ್ಷಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯು ರೈತರಿಗೆ ಕೃಷಿ ಸಾಮಗ್ರಿ, ಅತಿವೃಷ್ಟಿ ಕಾಲದಲ್ಲಿ ವಿಶೇಷ ಸಹಕಾರ ನೀಡುತ್ತಿತ್ತು. ಆದರೆ, ಕಾಂಗ್ರೆಸ್ ಶಾಸಕರು ತಮ್ಮ ಆಡಳಿತ ಕಾಲದಲ್ಲಿ ಇಲಾಖೆ ವತಿಯಿಂದ ರೈತರಿಗೆ ಎಷ್ಟು ಸಹಕಾರ ನೀಡಿದ್ದಾರೆ ಎಂಬ ಕುರಿತು ಶ್ವೇತ ಪತ್ರ ಹೊರಡಿಸಲಿ. ಕಿಗ್ಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ್ಲಾರು-ಕೋಗಿನ ಬೈಲು ರಸ್ತೆ ನಿರ್ಮಾಣಕ್ಕೆ ₹ 8 ಲಕ್ಷ, ಮಳೂರಿಗೆ ₹ 25ಲಕ್ಷ ಅನುದಾನ ಇಡಲಾಗಿದೆ ಎಂಬ ಮಾಹಿತಿ ಇದೆ. ಆದರೆ, ಆ ಹಣ ಎಲ್ಲಿ ಹೋಯಿತು ಎಂದು ಶಾಸಕ ಉತ್ತರ ನೀಡಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್ ‌ಮಾತನಾಡಿ, ಇಲ್ಲಿನ ಸರ್ಕಾರಿ ಅಸ್ಪತ್ರೆಯಲ್ಲಿ ಒಂದೆರೆಡು ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಲೆನಾಡಿನಲ್ಲಿ ಆದಿವಾಸಿಗಳು, ಗಿರಿಜನರು, ಬಡವರು ಹೆಚ್ಚಾಗಿ ವಾಸವಿದ್ದು ಅವರು ಆನಾರೋಗ್ಯವಾದಾಗ ಸರ್ಕಾರಿ ಆಸ್ಪತ್ರೆಗೇ ಬರಬೇಕು. ಹೆಚ್ಚಿನ ಚಿಕಿತ್ಸೆ ಬೇಕಾದಾಗ ಹಣ ನೀಡಿ ಆಂಬುಲೆನ್ಸ್‌ನಲ್ಲಿ ದೊಡ್ಡ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಕಾಡಾನೆ ಬಾರದಂತೆ ಶಾಸಕರು ಸೂಕ್ತವಾದ ವ್ಯವಸ್ಥೆ ಮಾಡಬೇಕು. ಸರ್ಕಾರದ ಗಮನ ಸೆಳೆಯಬೇಕು. ಅದನ್ನು ಬಿಟ್ಟು ಬಾಳೆಹೊನ್ನೂರಿನಲ್ಲಿ ಬಿಜೆಪಿ, ಜೆಡಿಎಸ್ ಪಕ್ಷದವರು ಪ್ರತಿಭಟನೆ ಮಾಡಿದಾಗ ಹೋರಾಟದ ಹಾದಿ ತಪ್ಪಿಸಿದ್ದಾರೆ. ಕೆರೆಕಟ್ಟೆಯಲ್ಲಿ ಕಾಡಾನೆಯಿಂದ ಎರಡು ಸಾವು ಸಂಭವಿಸಿದ್ದಾಗ 15 ದಿನಗಳಲ್ಲಿ ಜನ ಸಂಪರ್ಕ ಸಭೆ ಮಾಡುತ್ತೇವೆ ಎಂದಿದ್ದರು. ಶಾಸಕರು ಕೊಟ್ಟ ಮಾತನ್ನು ಉಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವು ಹೋರಾಟ ಮಾಡುತ್ತೇವೆ. ತ್ರೈಮಾಸಿಕ ಕೆಡಿಪಿ ಸಭೆಯನ್ನು ವರ್ಷಕ್ಕೊಮ್ಮೆ ಮಾಡುವ ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿ ಕುರಿತು ಕಾಳಜಿ ಇಲ್ಲ ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್ ಮಾತನಾಡಿ, ಗಾಂಧಿಮೈದಾನ ಮತ್ತೆ ಪಟ್ಟಣ ಪಂಚಾಯಿತಿ ಸುಪರ್ದಿಗೆ ಬಂದಿದೆ. ರಾಜಕೀಯ ಒತ್ತಡಕ್ಕೆ ಬಲಿಯಾದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ನೀಡಿದ ಆದೇಶದಿಂದ ಪಟ್ಟಣ ಪಂಚಾಯಿತಿಗೆ ₹ 1 ಕೊಟಿ ನಷ್ಟ ಉಂಟಾಗಿದೆ. ಅದನ್ನು ಅವರು ತಮ್ಮ ವೇತನದಿಂದ ಪಂಚಾಯಿತಿಗೆ ನೀಡಬೇಕು. ಮುಖ್ಯಾಧಿಕಾರಿಗಳು ಮತ್ತೆ ಪಾರ್ಕಿಗ್ ವ್ಯವಸ್ಥೆಗಾಗಿ ಟೆಂಡರ್ ಕರೆದು ಪಟ್ಟಣ ಪಂಚಾಯಿತಿಗೆ ಅನುದಾನ ಬರುವಂತೆ ಮಾಡಬೇಕು ಎಂದರು.

ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ತಿಪ್ಪನಮಕ್ಕಿ, ನಾಗೇಂದ್ರ, ರಾಘವೇಂದ್ರ ಹಂಚಲಿ, ಅಂಗುರ್ಡಿ ದಿನೇಶ್ ಭಾಗವಹಿಸಿದ್ದರು.

ಸಂಚಾರಿ ಆಂಬುಲೆನ್ಸ್‌ ಎಲ್ಲಿದೆ?

ಸರ್ಕಾರಿ ಆಸ್ಪತ್ರೆಯಲ್ಲಿ ಅವಿರತವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ರಕ್ಷಾ ಸಮಿತಿಗೆ ಪ್ರತಿವರ್ಷ ₹4 ಲಕ್ಷ ಬರುತ್ತದೆ. ಆದರೆ ಅದನ್ನು ಬಲ್ಬ್ ಕಂಪ್ಯೂಟರ್ ಜನರೇಟರ್ ರಿಪೇರಿಗೆ ಬಳಸಲಾಗಿದೆ. ಬಿಜೆಪಿ ಆಡಳಿತ ಕಾಲದಲ್ಲಿ ರಕ್ಷಾ ಸಮಿತಿ ಸಭೆ ನಡೆಯುತ್ತಿತ್ತು. ನಾಲ್ಕು ಲಕ್ಷವನ್ನು ಬಡ ರೋಗಿಗಳಿಗಾಗಿ ಮೀಸಲಾಡುತ್ತಿತ್ತು. ಸಂಚಾರಿ ಆಂಬುಲೆನ್ಸ್ ಕಿಗ್ಗಾ ನೆಮ್ಮಾರು ಹಾಗೂ ಗ್ರಾಮೀಣ ಭಾಗದಲ್ಲಿ ಮನೆಮನೆಗೆ ತೆರಳಿ ಜನರ ಆರೋಗ್ಯ ಸಮಸ್ಯೆ ನೀಗಿಸಬೇಕಿತ್ತು. ಆದರೆ ಸಂಚಾರಿ ಆಂಬುಲೆನ್ಸ್‌ ಎಲ್ಲಿದೆ? ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ವಕ್ತಾರ ಬಿ.ಶಿವಶಂಕರ್ ಪ್ರಶ್ನಿಸಿದರು.

ಕಾಮಗಾರಿಗೆ ಶೀಘ್ರ ಚಾಲನೆ ನೀಡಿ

2023ನೇ ಇಸವಿಯಲ್ಲಿ ನಗರೋತ್ಥಾನದ ಯೋಜನೆಯಡಿ ಗಾಂಧಿ ಮೈದಾನದಲ್ಲಿ ಹೈಟೆಕ್ ಶೌಚಾಲಯಕ್ಕಾಗಿ ₹25 ಲಕ್ಷ ಅಡುಗೆ ಕೋಣೆಗಾಗಿ ₹15 ಲಕ್ಷ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಾಗಿ ₹9 ಲಕ್ಷ ಇರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಗೆ ಶೀಘ್ರ ಚಾಲನೆ ನೀಡಬೇಕು. ಪಾರ್ಕಿಂಗ್ ವ್ಯವಸ್ಥೆ ಗಾಂಧಿ ಮೈದಾನದ ಸ್ವಚ್ಛತೆಗೆ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಬೇಕು ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.