ಶೃಂಗೇರಿ: ಪುಷ್ಠಿ ಯೋಜನೆಯಡಿ ರಾಜ್ಯದ ಶಿಕ್ಷಣ ಇಲಾಖೆ ಶಾಲಾಭಿವೃದ್ಧಿ ಸಮಿತಿಗಳಿಗೆ ನೀಡುವ ಪ್ರಶಸ್ತಿಗೆ ಇಲ್ಲಿನ ಗಂಡಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಿತಿ ಆಯ್ಕೆಯಾಗಿದೆ.
ಈ ಶಾಲೆಯಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ದೊಡ್ಡ ಕೊಡುಗೆ ನೀಡಿರುವ ಸಮಿತಿ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವುದಕ್ಕೂ ಪ್ರಯತ್ನಿಸಿದೆ. ಶಿಥಿಲ ಕೊಠಡಿಗಳು, ಶೌಚಲಯದ ಸಮಸ್ಯೆ, ನೀರಿನ ಕೊರತೆ ಸೇರಿದಂತೆ ಇಲ್ಲಿ ಹಲವು ಲೋಪಗಳಿದ್ದವು. ಅವೆಲ್ಲ ಈಗ ದೂರವಾಗಿವೆ.
ನಕ್ಸಲ್ ಬಾಧಿತ ಪ್ರದೇಶದ ಈ ಶಾಲೆಗೆ ಮದ್ಯಮ, ಕೆಳಮದ್ಯಮ ಮತ್ತು ಬಡವರ ಮಕ್ಕಳು ಹಚ್ಚಾಗಿ ದಾಖಲಾಗಿದ್ದಾರೆ. ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿರುವುದರಿಂದ ಶೃಂಗೇರಿ ಪಟ್ಟಣ ಪಂಚಾಯಿತಿ ಹಾಗೂ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯಿಂದಲೂ ಮಕ್ಕಳು ಬರುತ್ತಿದ್ದಾರೆ. 2024-25 ನೇ ಸಾಲಿನಲ್ಲಿ 1ನೇ ತರಗತಿಯಿಂದ ದ್ವಿಭಾಷಾ ಪದ್ಧತಿ ಆರಂಭ ಮಾಡಲು ಅನುಮತಿ ದೊರೆತಿದೆ.
2019-20ರ ಸಾಲಿನಲ್ಲಿ 1ನೇ ತರಗತಿಗೆ ಕೇವಲ ಒಂದು ಮಗು ದಾಖಲಾಗಿದ್ದು ಶಾಲೆಯ ಒಟ್ಟು ಮಕ್ಕಳ ಸಂಖ್ಯೆ 37 ಆಗಿತ್ತು. ಈಗ 1ನೇ ತರಗತಿ ದಾಖಲಾತಿ 22 ಆಗಿದ್ದು ಒಟ್ಟು 122 ಮಕ್ಕಳು ಇದ್ದಾರೆ. ಶೃಂಗೇರಿ ಪಟ್ಟಣ, ವಿದ್ಯಾರಣ್ಯಪುರ ಹಾಗೂ ಮರ್ಕಲ್ ಗ್ರಾಮ ಪಂಚಾಯಿತಿಯ ಪೋಷಕರು ಸ್ವಂತ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡಿ ಮಕ್ಕಳನ್ನು ಕಳುಹಿಸುತ್ತಿದ್ದಾರೆ.
4 ವರ್ಷಗಳಿಂದ ದಾಖಲಾತಿ ಗಣನೀಯವಾಗಿ ಏರುತ್ತಿರುವುದರಿಂದ ಸರ್ಕಾರದ ಅನುದಾನ, ಗ್ರಾಮ ಪಂಚಾಯಿತಿ ಅನುದಾನ, ಶಾಸಕರ ಅನುದಾನ ಇಲಾಖೆ ಅನುದಾನ ಸಿಗುತ್ತಿದೆ. ಹಳೆಯ ವಿದ್ಯಾರ್ಥಿಗಳಿಂದ ₹50 ಲಕ್ಷ ಸಂಗ್ರಹಿಸಲಾಗಿದೆ. ಶಾಲೆಗೆ ಇ ಮೇಲ್ ಐಡಿ, ಯುಟ್ಯೂಬ್ ಚಾನಲ್, ಫೇಸ್ಬುಕ್ ಖಾತೆ ಹಾಗೂ ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಇದೆ. ವೈಫೈ ಸೌಲಭ್ಯವಿದೆ. 2 ಪ್ರೊಜೆಕ್ಟರ್, 3 ಕಂಪ್ಯೂಟರ್, 1 ಕಲರ್ ಪ್ರಿಂಟರ್, 3 ಸ್ಮಾರ್ಟ್ ಟಿವಿಗಳು ಇವೆ.
ಗಣಿತ ಕಲಿಕೆಯಲ್ಲಿ ಆಸಕ್ತಿ ಬೆಳೆಸಲು ಕಲಿಕಾ ಸಾಮಗ್ರಿಗಳನ್ನು ತಯಾರಿಸಲು ಮಾರ್ಗದರ್ಶನ ನೀಡಲಾಗುತ್ತದೆ. ಮಕ್ಕಳ ಸಂತೆ ಆಯೋಜಿಸಿ ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು ಮತ್ತಿತರ ವಸ್ತುಗಳನ್ನು ತಂದು ವ್ಯಾಪಾರ ಮಾಡುತ್ತಾರೆ. ಲೇಖನ ಸಾಮಾಗ್ರಿ ಒದಗಿಸುವ ಸಹಕಾರ ಮಳಿಗೆ ತೆರೆಯಾಲಾಗಿದ್ದು ಇದನ್ನು ಮಕ್ಕಳೇ ನಿರ್ವಹಣೆ ಮಾಡುತ್ತಾರೆ.
ತಿಂಗಳ ಒಂದು ಶನಿವಾರ ಬ್ಯಾಗ್ ರಹಿತ ದಿನ. ಹೊಲಕ್ಕೆ ಭೇಟಿ, ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಸ್ ನಿಲ್ದಾಣಗಳ ಕಾರ್ಯವಿಧಾನ ನೋಡಿ ವರದಿಯಲ್ಲಿ ದಾಖಲಿಸಲಾಗುತ್ತದೆ. ಸ್ವಚ್ಚತೆ, ವೈಯಕ್ತಿಕ ಆರೋಗ್ಯದ ಅರಿವಿಗಾಗಿ ಗುಂಪು ಚರ್ಚೆ ಆಯೋಜಿಸಲಾಗುತ್ತದೆ. ಸಂಗೀತ, ಭರತನಾಟ್ಯ, ಚೆಸ್ ತರಬೇತಿ, ಚಿತ್ರಕಲೆ, ಪೇಪರ್ ಕ್ರಾಫ್ಟ್, ಮಣ್ಣಿನ ಮಾದರಿ ತಯಾರಿಕೆ ಇದೆ.
ಏಪ್ರಿಲ್ ರಜಾ ಅವಧಿಯ ಶಿಬಿರದಲ್ಲಿ 80 ವಿಧ್ಯಾರ್ಥಿಗಳು 25 ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಕಾಡಿನ ಬಗ್ಗೆ ಅರಿವು ಶಾಸನ ಅಧ್ಯಯನ ಬುಟ್ಟಿ ಹೆಣೆಯುವ ತರಬೇತಿ ನೀಡಲಾಗಿದೆ.
–ವಿಜಯ ಎಸ್.ವಿ ಮುಖ್ಯ ಶಿಕ್ಷಕಿ
***
ಪ್ರತಿ ತಿಂಗಳು ಒಬ್ಬ ದಾನಿ
ಬಿಸಿಯೂಟ ಹಾಗೂ ಹೆಚ್ಚುವರಿ ಪೌಷ್ಠಿಕ ಆಹಾರ ಒದಗಿಸುವ ಉದ್ದೇಶದಿಂದ ಸ್ವಾದಿಷ್ಟ ಭೋಜನ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಗೆ ಪ್ರತಿ ತಿಂಗಳು ಒಬ್ಬ ದಾನಿಯಿಂದ ₹ 5000 ದೇಣಿಗೆ ಪಡೆಯಲಾಗುತ್ತಿದೆ. ಮಕ್ಕಳ ಜನ್ಮಹಬ್ಬದಂದು ಚಾಕಲೆಟ್ ಮತ್ತಿತರ ಸಿಹಿ ತಿಂಡಿ ವಿತರಣೆ ಬದಲು ಆ ವಾರದಲ್ಲಿ ಒಂದು ದಿನ ಸಿಹಿ ಮಾಡಲಾಗುತ್ತಿದೆ. ಶಾಲೆಗೆ ಇನ್ನಷ್ಟು ಕೊಠಡಿ ನಿರ್ಮಾಣಕ್ಕೆ ದೊಡ್ಡ ಮಟ್ಟದ ಅನುದಾನ ಪಡೆಯಲು ಪ್ರಯತ್ನ ನಡೆದಿದೆ. ಇದರಿಂದ ಒಂದೇ ಕ್ಯಾಂಪಸ್ನಲ್ಲಿ ಎಲ್ಕೆಜಿಯಿಂದ 7ನೇ ತರಗತಿ ವರೆಗೂ ವ್ಯಾಸಂಗ ಮಾಡಲು ಸವಕಾಶ ಸಿಗುತ್ತದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಾಗಲು ಜೈರಾಮ್ ಎಂ.ವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.