ADVERTISEMENT

ಕಾಫಿನಾಡು ಚಿಕ್ಕಮಗಳೂರಲ್ಲಿ ದಾಖಲೆ ಸೃಷ್ಟಿಸಿದ ತನ್ಮಯಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಸಾಧನೆ

ಬಿ.ಜೆ.ಧನ್ಯಪ್ರಸಾದ್
Published 11 ಆಗಸ್ಟ್ 2020, 4:27 IST
Last Updated 11 ಆಗಸ್ಟ್ 2020, 4:27 IST
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತನ್ಮಯಿಗೆ ಪೋಷಕರು ಮುತ್ತಿಟ್ಟು ಅಭಿನಂದಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತನ್ಮಯಿಗೆ ಪೋಷಕರು ಮುತ್ತಿಟ್ಟು ಅಭಿನಂದಿಸಿದರು.   

ಚಿಕ್ಕಮಗಳೂರು: ನಗರದ ಸಂತ ಜೋಸೆಫರ ಕಾನ್ವೆಂಟ್‌ನ ಬಾಲಕಿಯ ಪ್ರೌಢಶಾಲೆಯ ಐ.ಪಿ.ತನ್ಮಯಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ಕಾಫಿನಾಡಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾಳೆ. ಈ ವಿದ್ಯಾರ್ಥಿನಿ ಇಂದಾವರ ಗ್ರಾಮ ವಾಸಿ ಉಪ ತಹಶೀಲ್ದಾರ್‌ ಐ.ಎಸ್‌.ಪ್ರಸನ್ನ ಮತ್ತು ಶಿಕ್ಷಕಿ ಡಿ.ಎಲ್‌.ಸಂದಾ ದಂಪತಿ ಪುತ್ರಿ.

ಈ ಬಾರಿ ರಾಜ್ಯದಲ್ಲಿ ಆರು ಮಂದಿ ಪ್ರಥಮ ಸ್ಥಾನ ಗಳಿಸಿದ್ದು, ಈ ಪೈಕಿ ತನ್ಮಯಿ ಒಬ್ಬರು. ಜಿಲ್ಲೆಯಲ್ಲಿ 625 ಅಂಕ ಗಳಿಸಿದ ಮೊದಲ ವಿದ್ಯಾರ್ಥಿ ಎಂದು ಸಾರ್ವಜನಿಕರು ಶಿಕ್ಷಣ ಇಲಾಖೆಯವರು ಖಾತ್ರಿ ಪಡಿಸಿದ್ದಾರೆ. ಶೈಕ್ಷಣಿಕ ಸಾಧನೆ ಮೆರೆದು ನಾಡಿಗೆ, ಜಿಲ್ಲೆಗೆ, ಶಾಲೆಗೆ ಕೀರ್ತಿ ತಂದಿರುವ ಈ ವಿದ್ಯಾರ್ಥಿನಿ ಅಭ್ಯಾಸ ಕ್ರಮ ಸಾಧನೆಯ ಹಾದಿಯನ್ನು ‘ಪ್ರಜಾವಾಣಿ’ಯೊಂದಿಗೆ ಬಿಚ್ಚಿಟ್ಟಿದ್ದಾರೆ.

ಪರೀಕ್ಷೆ ಚೆನ್ನಾಗಿ ಮಾಡಿದ್ದೆ. 620ಕ್ಕೂ ಹೆಚ್ಚು ಅಂಕ ಬರುತ್ತದೆ ಎಂಬ ನಿರೀಕ್ಷೆ ಇತ್ತು. 625 ಅಂಕ ಬಂದಿರುವುದು ಖುಷಿಯಾಗಿದೆ. ಶೈಕ್ಷಣಿಕ ವರ್ಷದ ಆರಂಭದಿಂದಲೂ ತಯಾರಿ ಮಾಡಿದ್ದೆ. ತರಗತಿಯಲ್ಲಿ ಗಮನ ವಿಟ್ಟು ಪಾಠ ಕೇಳುತ್ತಿದ್ದೆ. ಅಂದಿನ ಪಾಠವನ್ನು ಅಂದೇ ಓದುವುದನ್ನು ರೂಢಿಸಿಕೊಂಡಿದ್ದೆ. ಪೋಷಕರು ಸದಾ ಪ್ರೋತ್ಸಾಹದ ನೀರೆರೆಯುತ್ತಿದ್ದರು.

ADVERTISEMENT

ಕೋಚಿಂಗ್‌ ಹೋಗಿರಲಿಲ್ಲ. ಶಾಲೆಯಲ್ಲಿ ಶಿಕ್ಷಕರು ವಿಷಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಸಿದ್ದರು. ಗೊಂದಲಗಳಿದ್ದರೆ ಪರಿಹರಿಸುತ್ತಿದ್ದರು. ಶಾಲೆಯಲ್ಲಿ ಜನವರಿ ಅಂತ್ಯದೊತ್ತಿಗೆ ಪಾಠಗಳನ್ನು ಮುಗಿಸಿದ್ದರು. ದಿನಕ್ಕೆ 6 ಗಂಟೆ ಅಭ್ಯಾಸ ಮಾಡುತ್ತಿದ್ದೆ. ರಾತ್ರಿ 12 ಗಂಟೆವರೆಗೂ ಓದುತ್ತಿದ್ದೆ. ಬೆಳಿಗ್ಗೆ ಅಭ್ಯಾಸ ಮಾಡುತ್ತಿದ್ದು ಕಡಿಮೆ.

ಲಾಕ್‌ಡೌನ್‌ ಮಾಡಿದಾಗ ಪರೀಕ್ಷೆ ನಡೆಯುತ್ತದೋ, ಇಲ್ಲವೋ ಎಂಬ ಭಯ ಇತ್ತು. ವೇಳಾಪಟ್ಟಿ ಪ್ರಕಟಿಸಿದಾಗ ಧೈರ್ಯ ಬಂತು. ಅವಾಗ ಮೊದಲಿಗಿಂತಲೂ ಜಾಸ್ತಿ ಓದಿ, ಪುನರ್ಮನನ ಮಾಡಿದ್ದೆ.

ಚಂದನ ವಾಹಿನಿಯಲ್ಲಿ ಎಸ್ಸೆಸ್ಸೆಲ್ಸಿ ಪಾಠ ವೀಕ್ಷಣೆ ಮಾಡಿದ್ದೆ. ಆಕಾಶವಾಣಿಯಲ್ಲಿ ಪಾಠ ಕೇಳುತ್ತಿದ್ದೆ. ‘ಯೂ ಟ್ಯೂಬ್‌’ ಅನ್ನು ಅಭ್ಯಾಸಕ್ಕೆ ಬಳಸಿಕೊಂಡಿದ್ದೆ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದೆ. ಬೇರೆ ಶಾಲೆಗಳ ಪ್ರಶ್ನೆಪತ್ರಿಕೆಗಳನ್ನು ತರಿಸಿಕೊಂಡು ಬಿಡಿಸಿದ್ದೆ. ಸತತ ಪರಿಶ್ರಮದಿಂದ ಗುರಿ ತಲುಪಿದೆ ಎಂದು ತಿಳಿಸಿದರು.

‘ಮಗಳು ಒಂದನೇ ತರಗತಿಯಿಂದಲೂ ಪ್ರಥಮ ಸ್ಥಾನವನ್ನೇ ಕಾಯ್ದುಕೊಂಡಿದ್ದಾಳೆ. ಅವಳ ಸಾಧನೆ ಖುಷಿ ತಂದಿದೆ’ ಎಂದು ತನ್ಮಯಿ ತಾಯಿ ಸಂಧ್ಯಾ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.