ADVERTISEMENT

ಚಿಕ್ಕಮಗಳೂರು: ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

ಕಬ್ಬಿನ ಹೊರೆ ಹೊತ್ತು ಬಂದಿದ್ದ ರೈತರು: ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:20 IST
Last Updated 8 ನವೆಂಬರ್ 2025, 5:20 IST
ಚಿಕ್ಕಮಗಳೂರು ನಗರದಲ್ಲಿ ರೈತರು ಕಬ್ಬಿನ ಹೊರೆಗಳೊಂದಿಗೆ ಪ್ರತಿಭಟನೆ ನಡೆಸಿದರು
ಚಿಕ್ಕಮಗಳೂರು ನಗರದಲ್ಲಿ ರೈತರು ಕಬ್ಬಿನ ಹೊರೆಗಳೊಂದಿಗೆ ಪ್ರತಿಭಟನೆ ನಡೆಸಿದರು   

ಪ್ರಜಾವಾಣಿ ವಾರ್ತೆ

ಚಿಕ್ಕಮಗಳೂರು: ಪ್ರತಿ ಟನ್‌ಗೆ ಕಬ್ಬಿಗೆ ₹3,500 ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕಬ್ಬಿನ ಹೊರೆ ಹೊತ್ತು ಬಂದಿದ್ದ ರೈತರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಡಿ.ಮಹೇಶ್, ‘ಕಬ್ಬಿಗೆ ನಿಗದಿತ ದರ ನೀಡುವಂತೆ ಬೆಳಗಾವಿಯಲ್ಲಿ ಚಳವಳಿ ನಡೆಸುತ್ತಿರುವ ರೈತರನ್ನು ಬೆಂಬಲಿಸಲು ಹೋರಾಟ ನಡೆಸಲಾಗುತ್ತಿದೆ’ ಎಂದರು.

ಕಳೆದ ಒಂದು ವಾರದಿಂದ ಅಹೋರಾತ್ರಿ ಹೋರಾಟ ನಡೆಸುತ್ತಿರುವ ರೈತರಿಗೆ ಸರ್ಕಾರ ನ್ಯಾಯ ದೊರಕಿಸಿಕೊಡಬೇಕು. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ ₹3,500 ನೀಡುತ್ತಿಲ್ಲ. ರಾಜ್ಯ ಸರ್ಕಾರ ರೈತರ ಸಮಸ್ಯೆ ಆಲಿಸುತ್ತಿಲ್ಲ. ಸರ್ಕಾರದ ನಡೆ ಗಮನಿಸಿದರೆ ಕಾರ್ಖಾನೆಗಳ ಒತ್ತಡಕ್ಕೆ ಮಣಿದಂತಿದೆ ಎಂದು ಹೇಳಿದರು.

ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿ ಟನ್ ಕಬ್ಬಿಗೆ ₹3,500ರಿಂದ ₹3,600 ದರ ಸಿಗುತ್ತಿದೆ. ಆದರೆ, ಕರ್ನಾಟಕದ ಸಕ್ಕರೆ ಕಾರ್ಖಾನೆ ಮಾಲೀಕರು ಕೇವಲ ₹3,000 ದರದಲ್ಲಿ ಕಬ್ಬು ಖರೀದಿ ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯದ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ದೂರಿದರು.

ಭೂಸ್ವಾಧೀನ ಪರಿಹಾರ ಸಿಗದೆ ಮಂಡ್ಯ ಜಿಲ್ಲೆಯ ಮೂಡನಹಳ್ಳಿ ಗ್ರಾಮದ ರೈತ ಜಿಲ್ಲಾಧಿಕಾರಿ ಕಚೇರಿ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇಂದಿಗೂ ಆ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುತ್ತಿಲ್ಲ. ಹಾಗಾಗಿ, ರೈತರಿಗೆ ಭೂಸ್ವಾಧೀನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡ ಗುರುಶಾಂತಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ಉಪಾಧ್ಯಕ್ಷ ಡಿ.ಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿ ದೇವರಾಜ್, ಖಜಾಂಚಿ ಕೆ.ಬಿ.ಲೋಕೇಶ್ ಭಾಗವಹಿಸಿದ್ದರು.

ರೈತರಿಗೆ ಮೋಸ: ಆರೋಪ ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ಆಡಳಿತ ಮತ್ತು ವಿರೋಧ ಪಕ್ಷದವರೇ ಆಗಿದ್ದಾರೆ. ಸರ್ಕಾರ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ರೈತರಿಗೆ ಮೋಸ ಮಾಡುತ್ತಿದೆ. ಕೂಡಲೇ ರೈತರ ಬೆಳೆಗೆ ಸೂಕ್ತ ದರ ನಿಗದಿಗೊಳಿಸಿ ದೇಶದ ಬೆನ್ನೆಲುಬಾದ ಅನ್ನಧಾತರನ್ನು ಕಾಪಾಡಬೇಕು ಎಂದು ಡಿ.ಮಹೇಶ್ ಆಗ್ರಹಿಸಿದರು. ಈ ಹಿಂದೆ ಕಬ್ಬು ಪೂರೈಕೆ ಮಾಡಿರುವ ರೈತರಿಗೂ ಬಾಕಿ ನೀಡದೆ ಕಾರ್ಖಾನೆಗಳು ಸತಾಯಿಸುತ್ತಿವೆ. ಬಾಕಿ ಹಣ ಪಾವತಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.