ನರಸಿಂಹರಾಜಪುರ: ಕೋವಿಡ್ ಮುಂದಿನ ಅಲೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ವೀರಪ್ರಸಾದ್ ತಿಳಿಸಿದರು.
ಇಲ್ಲಿನ ಸಾಮರ್ಥ್ಯಸೌಧದಲ್ಲಿ ಆಡಳಿತಾಧಿಕಾರಿ ಶಿಂದೆ ನೀಲೇಶ ದೇವಬಾ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ 111 ಜಂಬೊ ಸಿಲಿಂಡರ್ ಲಭ್ಯವಿದೆ. 20 ಹಾಸಿಗೆಯ ಐಸಿಯು ಕೊಠಡಿ ಮುಕ್ತಾಯ ಹಂತದಲ್ಲಿದೆ. 18 ಆಮ್ಲಜನಕ ಸಾಂದ್ರತೆ, 24 ಕಾರ್ಡಿಯಾಕ್ ಮಾನಿಟರ್ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಆಮ್ಲಜನಕ ಉತ್ಪಾದನಾ ಘಟಕಕ್ಕೆ ತುರ್ತಾಗಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಮೆಸ್ಕಾಂ ಎಂಜಿನಿಯರ್ಗೆ ಸಭೆ ಸೂಚಿಸಿತು.
ಮಳೆಯಿಂದ ಹಾನಿಯಾದ 56 ಶಾಲೆಗಳ ಪೈಕಿ 50 ಶಾಲೆಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಮಸ್ಕಲೆ ಮಾತನಾಡಿ, ಜಯ, ಜ್ಯೋತಿ ಸೇರಿದಂತೆ ನಾಲ್ಕು ವಿಧದ ಭತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ ಎಂದರು. ತೋಟಗಾರಿಕೆ ಇಲಾಖೆಯ ಅಧಿಕಾರಿ ಪುನಿತ್, ಇಲಾಖೆಯಿಂದ ಅಡಿಕೆ, ಕಾಳುಮೆಣಸು, ತೆಂಗಿನ ಸಸಿ ಶೀಘ್ರ ವಿತರಣೆ ಮಾಡಲಾಗುವುದು ಎಂದರು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಕ್ಕಳಿರುವ ಶಾಲೆಗೆ ಉದ್ಯೋಗ ಖಾತರಿ ಯೋಜನೆಯಡಿ ದಾಸೋಹ ಭವನ ನಿರ್ಮಾಣ ಮಾಡಲು ಅವಕಾಶವಿದೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಧನಂಜಯ ಮೇದೂರ ತಿಳಿಸಿದರು. 2010–11 ನೇ ಸಾಲಿನಿಂದ ಈವರೆಗೆ ವಸತಿ ಯೋಜನೆಯಡಿ 3771 ಮನೆಗಳು ಮಂಜೂರಾಗಿದ್ದು 2641 ಮನೆಗಳು ಪೂರ್ಣಗೊಂಡಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.